ರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿ
Recommended Video
ಬೆಂಗಳೂರು, ಮೇ 30 : ವಿಧಾನಸೌಧದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪೂರ್ಣ ಸಾಲಮನ್ನಾಕ್ಕೆ 2 ಸೂತ್ರ ಮುಂದಿಟ್ಟಿದ್ದಾರೆ. 'ಸಾಲಮನ್ನಾ ಮಾಡಲು 15 ದಿನದ ಕಾಲಾವಕಾಶ ನೀಡಬೇಕು' ಎಂದು ರೈತರಲ್ಲಿ ಮನವಿ ಮಾಡಿದರು.
Live : ಸಾಲಮನ್ನಾಕ್ಕೆ 15 ದಿನದ ಕಾಲಾವಕಾಶ ಕೋರಿದ ಕುಮಾರಸ್ವಾಮಿ
ವಿಧಾನಸೌಧದಲ್ಲಿ ಬುಧವಾರ ರೈತಮುಖಂಡರ ಜೊತೆ ಎಚ್.ಡಿ.ಕುಮಾರಸ್ವಾಮಿ ಸಾಲಮನ್ನಾ ಬಗ್ಗೆ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ರೈತರ ಸಲಹೆ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಅವರು, ಸಂಪೂರ್ಣ ಸಾಲಮನ್ನಾಕ್ಕೆ ಎರಡು ಸೂತ್ರಗಳನ್ನು ಮುಂದಿಟ್ಟರು.
15 ದಿನ ಅವಕಾಶ ನೀಡಿ : 'ರಾಜ್ಯದ ಎಲ್ಲಾ ರೈತರು 15 ದಿನದ ಕಾಲಾವಕಾಶ ನೀಡಿ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಪಡೆದು ಸಾಲಮನ್ನಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತೇನೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇನೆ. ನಂತರ ಅಂತಿಮ ಆದೇಶ ಪ್ರಕಟಿಸಲಾಗುತ್ತದೆ' ಎಂದು ಕುಮಾರಸ್ವಾಮಿ ಹೇಳಿದರು.
ರೈತರ ಸಾಲ ಮನ್ನಾ: ಜೆಡಿಎಸ್ ನಲ್ಲಿ ಏನು ಲೆಕ್ಕಾಚಾರ ನಡೀತಿದೆ?
ಸೂತ್ರ : 1
* ಮೊದಲ ಹಂತದಲ್ಲಿ ಬೆಳೆಸಾಲ ಪಡೆದ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗುತ್ತದೆ. 1/4/2009ರಿಂದ 31/12/2017ರ ತನಕ ಪಡೆದ ಸಂಪೂರ್ಣ ಸಾಲಮನ್ನಾ.
* ಮೂರು ವರ್ಷ 4 ಲಕ್ಷಕ್ಕಿಂತ ಹೆಚ್ಚು ಆದಾಯ ತೆರಿಗೆ ಕಟ್ಟಿದ್ದರೆ ಅವರನ್ನು ಈ ವ್ಯಾಪ್ತಿಗೆ ಸೇರಿಸಬೇಕಾ?, ಸಾಲ ಪಡೆದು ಉದ್ಯಮ ಆರಂಭಿಸಿದ್ದರೆ ಅದನ್ನು ಇದರ ವ್ಯಾಪ್ತಿಗೆ ತರಬೇಕಾ? ಎಂದು ಚರ್ಚಿಸಿ ತೀರ್ಮಾನ.
* ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸಹ ಬೆಳೆಸಾಲವನ್ನು ಪಡೆದಿರುತ್ತಾರೆ. ಅವರ ಸಾಲವನ್ನು ಮನ್ನಾ ಮಾಡಬೇಕೆ? ಎಂದು ಚರ್ಚೆ ನಡೆಸಲಾಗುತ್ತದೆ.
* ಸಹಕಾರಿ ಸಂಘದ ಸದಸ್ಯರಾಗಿರುವವರು 3 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೆ ಅವರನ್ನು ಸಾಲಮನ್ನಾ ವ್ಯಾಪ್ತಿಗೆ ತರಬೇಕಾ? ಎಂದು ಚರ್ಚೆ ನಡೆಸಬೇಕಿದೆ.
2ನೇ ಸೂತ್ರ
* 2ನೇ ಸೂತ್ರದಲ್ಲಿ ಕೃಷಿಯಂತ್ರ ಪಡೆದುಕೊಳ್ಳಲು ಮಾಡಿದ ಸಾಲ, ಕೊಳವೆಬಾವಿ ಕೊರೆಸಲು, ಎತ್ತಿನಗಾಡಿ ಖರೀದಿ ಮುಂತಾದವುಗಳಿಗೆ ಪಡೆದಿರುವ ಸಾಲವನ್ನು ಮನ್ನಾ ಮಾಡಲಾಗಿತ್ತದೆ.
* ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಲಾಗುತ್ತದೆ. ಅವರಿಗೆ ರೈತರು ಸಾಲ ಪಡೆದಿದ್ದು ಏಕೆ, ಎಷ್ಟು, ಖರ್ಚಾಗಿದ್ದು ಹೇಗೆ? ಎಂಬುದರ ವಿವರ ನೀಡಬೇಕು. ಅದನ್ನು ಪರೀಶೀಲನೆ ಮಾಡಿ ಋಣಮುಕ್ತ ಪತ್ರವನ್ನು ಮನೆಗೆ ತಲುಪಿಸಲಾಗುತ್ತದೆ.