ಆಕ್ಸಿಜನ್ ಕೊಡಿ ಅಂತಾ ಕೋರ್ಟ್ ಹೇಳಬೇಕಾಯ್ತಲ್ಲಾ; ಇದು ಪ್ರಜಾಪ್ರಭುತ್ವ ರಾಷ್ಟ್ರವೇ?
ಕರ್ನಾಟಕಕ್ಕೆ ಅಗತ್ಯವಿರುವಷ್ಟು ಆಕ್ಸಿಜನ್ ಕೊಡಬೇಕೆಂಬ ಹೈಕೋರ್ಟ್ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ಪುರಸ್ಕರಿಸಿದೆ. ಈ ತೀರ್ಪು ರಾಜ್ಯಕ್ಕೆ ಶುಭ ಶಕುನವೇನೋ ಸರಿ, ಆದರೆ ಸೋಂಕಿತರಿಗೆ ಅಗತ್ಯವಾಗಿ ಬೇಕಿರುವ ಪ್ರಾಣವಾಯುವನ್ನು ಕೊಡಬೇಕೆಂದು ನ್ಯಾಯಾಂಗ ಹೇಳಬೇಕಾದ ದಟ್ಟ ದರಿದ್ರ ಸ್ಥಿತಿಗೆ ಬಂದು ನಿಂತಿದೆ ಪ್ರಜಾಪ್ರಭುತ್ವ. ಇದು ಪ್ರಜಾಪ್ರಭುತ್ವದ ದೊಡ್ಡ ಸೋಲು.
ಒಬ್ಬ ಪ್ರಧಾನಿ ಯಾವುದೇ ನೀತಿ ನಿಯಮಗಳನ್ನು ಲೆಕ್ಕಿಸದೆ ತನ್ನ ಸಾಮಾನ್ಯ ಜ್ಞಾನದಲ್ಲಿ ಎಲ್ಲಿಗೆ ಪ್ರಾಣವಾಯು ಅವಶ್ಯಕತೆ ಇದೆಯೋ ಅಲ್ಲಿಗೆ ಕೊಡಿ ಮೊದಲು ಎಂದು ಸೂಚಿಸಬೇಕು. ಅದು ಸರಿಯಾದ ನಡೆ ಆಗುತ್ತದೆ. ಆದರೆ ಇಲ್ಲಿ ಆಗ್ತಿರೋದು ಏನು? ಎಂದು ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ ರೈತ ಮುಖಂಡ ಕೆ.ಟಿ ಗಂಗಾಧರ್.
ಕೊರೊನಾ ಮೊದಲ ಬಾರಿ ಬಂದಾಗ ದೇಶಕ್ಕೆ ಹೊಸದು. ಆಗ ಸರ್ಕಾರ ಎಡವಿದ್ದನ್ನು ಸಹಿಸಕೋಬೋದು. ಈಗ WHO ಆದಿಯಾಗಿ ವೈರಾಣು ಹೇಗಿರುತ್ತೆ, ಇದರ ಸ್ವರೂಪ ಎಂಥದ್ದು, ದಿನಕಳೆದಂತೆ ಹೇಗೆ ಅದು ಸ್ವರೂಪ ಬದಾಯಿಸ್ಕೊಳ್ಳುತ್ತೆ, ಹೇಗೆ ಬಿಹೇವ್ ಮಾಡುತ್ತದೆ ಎಂದು ಇಡೀ ಲೋಕದ ವಿಜ್ಞಾನಿಗಳು ಹೇಳಿದ್ದಾರೆ. ಆದಾಗ್ಯೂ ಅಗತ್ಯವಿರುವ ಸೌಲಭ್ಯಗಳನ್ನು ಮಾಡದೆ ಕುಳಿತಿರುವ ಈ ಸರ್ಕಾರಕ್ಕೆ ನಿಜವಾಗಲೂ ಜೀವ ಇದೆಯಾ ಅನ್ನೋ ಪ್ರಶ್ನೆ ಕಾಡ್ತದೆ.
ಇನ್ನು ಲಾಕ್ ಡೌನ್ ವಿಷಯಕ್ಕೆ ಬಂದಲ್ಲಿ, ಲಾಕ್ ಡೌನ್ ನಿಂದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳೇನು ಬಂದವು ಅನ್ನೋದನ್ನೂ ಈಗಾಗಲೇ ನಾವು ತಿಳ್ಕೊಂಡಿದ್ದೀವಿ. ಈಗ ಮತ್ತೊಂದು ಲಾಕ್ ಡೌನ್ ಹೊಸ್ತಿಲಲ್ಲಿ ಕುಳಿತಿದ್ದೇವೆ. ಇಷ್ಟು ದೀರ್ಘ ಅವಧಿಯಲ್ಲಿ ಸರ್ಕಾರ ಯುದ್ದೋಪಾದಿಯಲ್ಲಿ ಆರೋಗ್ಯ ಸವಲತ್ತುಗಳನ್ನು ರೂಪಿಸಬೇಕಿತ್ತು. ಆದರೂ ಮಾಡಲಿಲ್ಲ.
ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಆರೋಗ್ಯ ಇಲಾಖೆಯನ್ನು ಒಂದು ಗಂಭೀರವಾದ ಇಲಾಖೆ ಅಂಥಾ ತಗೊಳ್ಳೇ ಇಲ್ಲ. ಬರೀ ಮೆಡಿಕಲ್ ಕಾಲೇಜುಗಳು ಜಾಸ್ತಿ ಆದವು. ಡೊನೇಶನ್ ಜಾಸ್ತಿ ಆದ್ವು. ಅವೆಲ್ಲವೂ ಬಂಡವಾಳಶಾಯಿಗಳ ಕೈಗೆ ಆರಾಮವಾಗಿ ಬಿಟ್ಟುಕೊಟ್ಟಾಯ್ತು. ಈಗ ಸಾರ್ವಜನಿಕ ಆರೋಗ್ಯದ ಕಾಳಜಿ ಯಾರು ಮಾಡೋದು?
ಸದ್ಯದ ಪರಿಸ್ಥಿತಿಯನ್ನು "ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ" ಎಂದು ಘೋಷಿಸಬೇಕಾಗಿದೆ. ಆಪತ್ತು ನಿಧಿಯನ್ನು ಬಳಸಿಕೊಂಡು ಅಗತ್ಯ ಇನ್ಪ್ರಾಸ್ಟ್ರಕ್ಚರ್ ಮಾಡಬೇಕು. ಆದರೆ ಸರ್ಕಾರ ಅಸಹಾಯಕವಾಗಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ವ್ಯಾಪಾರದಲ್ಲಿ ತಾವು ಬ್ಯುಸಿಯಾಗಿವೆ.
ಚಾಮರಾಜನಗರದ ಸಾವುಗಳನ್ನು ನೆನಪಿಸಿಕೊಂಡಾಗ ಈ ದೇಶದ "ನೇಕೆಡ್ ಟ್ರೂತ್" ಕಾಣ್ತದೆ. ಆ ಸಾವುಗಳ ಹೊಣೆ ಯಾರು ಹೊರುವುದು? ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ಪರಸ್ಪರ ಆರೋಪ ಪ್ರತ್ಯಾರೋಪ ಮಾತ್ರ ನಾವು ನೋಡ್ತಾ ಕೂರೋದಾಗಿದೆ.
ಇನ್ನು ಮೂರನೆಯ ಅಲೆಯಲ್ಲಿ ಬರುವ ವೈರಾಣು ಗಾಳಿಯಲ್ಲಿಯೇ ಪಸರಿಸುವ ಸ್ವರೂಪ ಪಡ್ಕೋಬೋದು. ಆ ಬಗ್ಗೆ ವೈಜ್ಞಾನಿಕ ಸಮೂಹ ನಮ್ಮನ್ನು ಖಂಡಿತಾ ಎಚ್ಚರಿಸುವ ಕೆಲ್ಸ ಮಾಡ್ತದೆ ಅನ್ನಿ. ಹೀಗಿರುವಾಗ ಮೂರನೆಯ ಅಲೆಗೆ ನಮ್ಮ ಪ್ರಿಪರೇಶನ್ ಏನು?
ಎಲ್ಲರಿಗೂ ವ್ಯಾಕ್ಸಿನ್ ಕೊಡಿಸಿ
ಸದ್ಯದಲ್ಲಿ ವ್ಯಾಕ್ಸಿನ್ ಪಡೆದವರು ಪ್ರಾಣಾಪಾಯದಿಂದ ಪಾರಾಗುತ್ತಿರುವ ವರದಿಗಳಿವೆ. ಅಂದ ಮೇಲೆ ಮೂರನೆಯ ಅಲೆ ಬರುವ ಮುನ್ನ ಮಕ್ಕಳಿಂದ ಹಿಡಿದು ಹಿರಿಯ ಜೀವಗಳಿಗೆ, ಎಲ್ಲರಿಗೂ ಸಮರೋಪಾದಿಯಲ್ಲಿ ವ್ಯಾಕ್ಸಿನೇಶನ್ ಮಾಡದಿದ್ದಲ್ಲಿ ಈ ಸರ್ಕಾರದವರು ನರಹಂತಕರಾಗ್ತಾರೆ. ನರಭಕ್ಷಕರಾಗ್ತಾರೆ. ಇದಕ್ಕೆ ಕ್ಷಮೆ ಇಲ್ಲ.
Recommended Video
ವ್ಯಾಕ್ಸಿನೇಶನ್ ಕೊಡುವುದರ ಜೊತೆಗೆ ಸರ್ಕಾರ ಎಲ್ಲಾ ಮೆಡಿಕಲ್ ಕಾಲೇಜುಗಳು, ಮತ್ತು ಖಾಸಗಿ ಆಸ್ಪತ್ರೆಗಳನ್ನು ತನ್ನ ಅಧೀನಕ್ಕೆ ಪಡೆದುಕೊಳ್ಳಬೇಕು. ಪ್ರತಿ ಕೊರೊನಾ ಸೋಂಕಿತರಿಗೂ ಉಚಿತವಾಗಿ ಚಿಕಿತ್ಸೆ ಕೊಡಬೇಕು. ಅಂಥದೊಂದು ಜವಾಬ್ದಾರಿ ಮತ್ತು ಬದ್ಧತೆ ಸರ್ಕಾರಗಳು ತೋರಬೇಕಿದೆ.