ಸಿಟಿ ರವಿ ಮುಂದೆ ಕೈಕಟ್ಟಿ ನಿಂತ 'ಸಿಂಗಂ' ಅಣ್ಣಾಮಲೈ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
ಬೆಂಗಳೂರು, ಜನವರಿ 28: ಕಳೆದ ವರ್ಷ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ, ತಮಿಳುನಾಡಿಗೆ ತೆರಳಿ ಬಿಜೆಪಿ ಸೇರ್ಪಡೆಯಾಗಿದ್ದ 'ಸಿಂಗಂ' ಕೆ. ಅಣ್ಣಾಮಲೈ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ನಡೆದ ಸಭೆಯೊಂದರಲ್ಲಿ ಬಿಜೆಪಿ ನಾಯಕರು ಸುತ್ತಲೂ ಸೋಫಾದಲ್ಲಿ ಸಾಲಾಗಿ ಕುಳಿತಿದ್ದು, ಎಲ್ಲರ ನಡುವೆ ಅಣ್ಣಾಮಲೈ ಅವರು ಕೈಕಟ್ಟಿ ನಿಂತಿರುವ ಫೋಟೊ ವೈರಲ್ ಆಗಿದೆ.
ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಹಾಗೂ ಇತರೆ ನಾಯಕರ ನಡುವೆ ಸರಳವಾಗಿ ಪಂಚೆಯುಟ್ಟು ಬದಿಯಲ್ಲಿ ನಿಂತಿರುವ ಈ ಫೋಟೊ, ತೀವ್ರ ಟೀಕೆ ಹಾಗೂ ವ್ಯಂಗ್ಯಕ್ಕೆ ಗುರಿಯಾಗಿದೆ. ಸಿ.ಟಿ. ರವಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದರು. ಅದನ್ನು ಅಣ್ಣಾಮಲೈ ರೀಟ್ವೀಟ್ ಮಾಡಿದ್ದರು.
ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಸಿಂಗಂ ಅಣ್ಣಾಮಲೈ
ಆದರೆ, ಈ ಫೋಟೊಗಳನ್ನು ಇರಿಸಿಕೊಂಡು ತಮ್ಮನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಅಣ್ಣಾಮಲೈ ಸ್ವತಃ ವಿವರಣೆ ನೀಡಿದ್ದಾರೆ. ಕರ್ನಾಟಕದಲ್ಲಿನ ತಮ್ಮ ಸ್ನೇಹಿತರ ನಡುವೆ ಇದು ಕಿಡಿ ಹೊತ್ತಿಸಿದೆ ಎಂದು ಅಣ್ಣಾಮಲೈ ತಮಾಷೆ ಮಾಡಿದ್ದಾರೆ. 'ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಹೇಳುವಾಗಿನ ನನ್ನ ಸರಳ ನಿಲುವು ಕರ್ನಾಟಕದ ಸ್ನೇಹಿತ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹೊತ್ತಿಸುತ್ತದೆ ಎಂದು ಕಲ್ಪನೆ ಕೂಡ ಮಾಡಿರಲಿಲ್ಲ. ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕಾರ್ಯಕ್ರಮದಲ್ಲಿ ನಮ್ಮ ಆಹ್ವಾನಿತರಾಗಿ ಹಾಜರಿದ್ದರು' ಎಂದು ಅವರು ಹೇಳಿದ್ದಾರೆ.
ಆದರೆ, ಅಣ್ಣಾಮಲೈ ಅವರ ಫೋಟೊವನ್ನು ಇರಿಸಿಕೊಂಡು ಅನೇಕ ರೀತಿ ಟ್ರೋಲ್ ಮಾಡಲಾಗುತ್ತಿದೆ. ದಕ್ಷ ಹಾಗೂ ಶಿಸ್ತಿನ ಅಧಿಕಾರಿಯಾಗಿದ್ದ ಅವರ ಈಗಿನ ಸ್ಥಿತಿ ಮರುಕ ಹುಟ್ಟಿಸುತ್ತಿದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಮುಂದೆ ಓದಿ.
''ಪಶ್ಚಿಮ ಬಂಗಾಳ ಕದನ: ಅಮಿತ್ ಕೊಟ್ಟ ಗುರಿ ಮುಟ್ಟಲಿದೆ ಬಿಜೆಪಿ''
ಎಲ್ಲವನ್ನೂ ಕಳೆದುಕೊಂಡಿದ್ದಾರೆ
ಕರ್ನಾಟಕದ ಮಾಜಿ ಐ.ಪಿ.ಎಸ್ ದಕ್ಷ ಅಧಿಕಾರಿ ಅಣ್ಣಾಮಲೈ ಅವರಿಗೆ ಬಹುಶಃ ಅವರ ರಾಜ್ಯದಲ್ಲೂ ಸಿಗದೆ ಇರೋ ಗೌರವ, ಮಾನ್ಯತೆ, ಪ್ರತಿಷ್ಠೆ, ಅಭಿಮಾನಿ ಬಳಗ ಕರ್ನಾಟಕದಲ್ಲಿ ಸಿಕ್ಕಿತು.. ಎಲ್ಲೋ ಒಂದು ಕಡೆ ಅವರು ರಾಜಕೀಯಕ್ಕೆ ಧುಮುಕಿ ಅದಷ್ಟನ್ನು ಕಳ್ಕೊಂಡಿದ್ದಾರೆ ಅನ್ನೋದು ನನ್ನ ಅಭಿಪ್ರಾಯ..!- ಅಜ್ಜು ಸುಲ್ತಾನ್
ಭಂಡ ಬದುಕು ಬೇಕಿತ್ತೇ?
ಕೆಲಸ ಇಲ್ಲದೆ ಲಕ್ಷಾಂತರ ಪದವೀಧರ ಯುವಕರು ದೇಶದಲ್ಲಿ ದಿನನಿತ್ಯ ಕೊರಗಿ ಕೊರಗಿ ಸಾಯ್ತ ಇದಾರೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ವ್ಯವಸ್ಥೆಯನ್ನು ಕಾಪಾಡುವ ಉನ್ನತ ಹುದ್ದೆಗಳಲ್ಲಿ IPS ಸಹ ಒಂದು, ಅಂತಹ ಉನ್ನತ ಹುದ್ದೆ ಬಿಟ್ಟು ಇಂತಹ ಮಾಮ ಕೆಲಸ ಮಾಡೊಕೆ ಹೇಗಾದ್ರು ಮನಸಾಯ್ತೊ ಗೊತ್ತಿಲ್ಲ. ಇಂತಹ ಭಂಡ ಬದುಕು ಬೇಕಿತ್ತ ಚಿಂಗಂ ಗೆ..? ಓ ನಮ್ಮ ಮಾಜಿ IPS ಅಣ್ಣಾಮಲೈ ಸಾರ್,, ಬೇಕಾ ಇದೆಲ್ಲಾ ಅಷ್ಟೊಂದು ವಿದ್ಯಾವಂತರಾಗಿ ಇಂತಹ ಹೆಬ್ಬೆಟ್ಟುಗಳ ಮುಂದೆ ಕೈ ಕಟ್ಟಿ ನಿಲ್ಲುವ ಸ್ಥಿತಿ ಬರಬಾರದಿತ್ತು- ರೇಖಾ ಶ್ರೀನಿವಾಸ್
ತಪ್ಪು ಮಾಡಿದವರು ಕೈಕಟ್ಟಿ ನಿಲ್ಲುತ್ತಿದ್ದರು
ಪೊಲೀಸ್ ಕರ್ತವ್ಯದಲ್ಲಿ ಇದ್ದಾಗ ತಪ್ಪು ಮಾಡಿದವರು ಅಣ್ಣಾಮಲೈ ಎದುರು ಕೈ ಕಟ್ಟಿ ನಿಂತುಕೊಳ್ಳುತ್ತಿದ್ದರು ಆದರೆ ಕೆ. ಅಣ್ಣಾಮಲೈ ರಾಜಕೀಯಕ್ಕೆ ಸೇರಿದ ನಂತರ ತಪ್ಪು ಮಾಡಿರುವವರ ಮುಂದೆ ಸ್ವತಃ ತಾನೇ ಕೈಕಟ್ಟಿ ನಿಲ್ಲುವಂತೆ ಆಗಿದೆ. ಇಲ್ಲಿ ಕೈ ಕಟ್ಟಿ ನಿಂತಿರೋದು ಸೇಮ್ ನಮ್ಮ ಚಿಂಗಮ್ ಅಣ್ಣಾಮಲೈ ಅವರ ರೀತಿ ಕಾಣಿಸ್ತಾ ಇದ್ದಾರೆ ಕಾಲಾಯ ತಸ್ಮೈ ನಮಃ- ಲಿಂಗ ಧ್ರುವ
ಈ ದೃಶ್ಯ ನೋವು ತರಿಸಿದೆ
ಖಾಕಿ ತೊಟ್ಟು ಸಿಂಗಂ ತರ ಘರ್ಜಿಸುತ್ತಿದ್ದ ಅಣ್ಣಾಮಲೈ ಈಗ ಅವಿದ್ಯಾವಂತರ ನಡುವಲ್ಲಿ ಕೈಕಟ್ಟಿ ನಿಂತಿರುವ ದೃಶ್ಯವಿದು... ಹಣ, ಅಧಿಕಾರ ಮನುಷ್ಯರನ್ನು ಯಾವ ಮಟ್ಟಕ್ಕೆ ತಲುಪಿಸುತ್ತೆ ನೋಡಿ... ನಾನು ವ್ಯಂಗ್ಯ ಮಾಡುತ್ತಿಲ್ಲ.. ಒಂದು ಕಾಲದಲ್ಲಿ ಅಣ್ಣಾಮಲೈಯಂತ ಖಡಕ್ ಪೋಲಿಸ್ ಆಫೀಸರ್ಗಳು ಹೆಚ್ಚೆಚ್ಚು ಹುಟ್ಟಿ ಬರಬೇಕೆಂದು ಆಶಿಸುತ್ತಿದ್ದವನು... ಈ ದೃಶ್ಯ ತುಂಬಾನೇ ನೋವು ತರಿಸಿದೆ...- ಸಲಾಂ ಸಮ್ಮಿ
ಹೇಗಿದ್ದರು, ಹೇಗಾದರು..
ವರ್ಷದ ಹಿಂದೆ ಎಂತಹ ರಾಜಕಾರಣಿಗಳ ಎದೆಯಲ್ಲೂ ನಡುಕ ಹುಟ್ಟಿಸುತ್ತಿದ್ದ ಐಪಿಎಸ್ ಅಧಿಕಾರಿ ಇವರೇನಾ? ಎನ್ನುತ್ತಿದ್ದಾರೆ ಜನ. ಹೇಗಿದ್ರು.. ಹೇಗಾದ್ರು?- ಪ್ರಶಾಂತ್ ಮರೂರು