ಸಚಿವರೇ ಇಲ್ನೋಡಿ: ಕೊರೊನಾ ನೆಪದಲ್ಲಿ ರೈತರಿಗೆ ಆಗುತ್ತಿದೆ ಮಹಾ ಮೋಸ.!
ಮಾರಣಾಂತಿಕ ಕೋವಿಡ್-19 ತಡೆಗಟ್ಟಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಪರಿಣಾಮ, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದ್ಕಡೆ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ಕಡೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದಾರೆ. ಸಾಲ ಮತ್ತು ನಷ್ಟದ ಶೂಲಕ್ಕೆ ಸಿಲುಕಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
Recommended Video
ಇತ್ತ ಕೊರೊನಾ ಹೆಸರಿನಲ್ಲಿ ಗ್ರಾಹಕರ ಜೇಬಿಗೂ ಕತ್ರಿ ಬೀಳುತ್ತಿದೆ. ತರಕಾರಿ ಬೆಲೆಗಳು ಗಗನಕ್ಕೇರಿವೆ. ರೈತ ಮತ್ತು ಗ್ರಾಹಕರ ನಡುವೆ ಇರುವ ಮಧ್ಯವರ್ತಿಗಳು ಈ ಸಂಕಷ್ಟದ ಸಮಯದಲ್ಲೂ ಸಿಕ್ಕಾಪಟ್ಟೆ ಲಾಭ ಮಾಡಿಕೊಂಡು, ರೈತರಿಗೆ ಮಹಾ ಮೋಸ ಮಾಡುತ್ತಿದ್ದಾರೆ.
ಲಾಕ್ ಡೌನ್: ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಲು ಸರ್ಕಾರ ತೀರ್ಮಾನ
''ತರಕಾರಿಗಳನ್ನು ಕೊಂಡುಕೊಳ್ಳುವವರೇ ಇಲ್ಲ'' ಅಂತ ರೈತರಿಗೆ ಹೇಳಿ ಅವರಿಂದ ಕಮ್ಮಿ ಬೆಲೆಗೆ ತರಕಾರಿಗಳನ್ನು ತೆಗೆದುಕೊಂಡು ಮಾರುಕಟ್ಟೆಯಲ್ಲಿ ಮಾತ್ರ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಈ ಬಗ್ಗೆ ಸ್ವತಃ ಓರ್ವ ರೈತ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಧ್ಯವರ್ತಿಗಳು ಮಾಡುತ್ತಿರುವ ಮೋಸದ ಕುರಿತು ವಿಡಿಯೋದಲ್ಲಿ ಅನ್ನದಾತ ವಿವರಿಸಿದ್ದಾರೆ.
ಸೂಕ್ತ ಬೆಲೆ ಸಿಗುತ್ತಿಲ್ಲ
''ರೈತರಿಗೆ ತಿನ್ನುವ ಊಟಕ್ಕೂ ಕಷ್ಟ ಆಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ತರಾಕಾರಿಗಳನ್ನು ಕೇಳೋರೇ ಇಲ್ಲ. ಮಧ್ಯವರ್ತಿಗಳು ನಮ್ಮಿಂದ 5 ರೂಪಾಯಿಗೆ ಕೇಳ್ತಾರೆ, ಅವರು ನೋಡಿದ್ರೆ 50 ರೂಪಾಯಿಗೆ ಮಾರುತ್ತಾರೆ'' ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಓರ್ವ ರೈತ.
ಸುಳ್ಳು ಹೇಳುತ್ತಿರುವ ಮಧ್ಯವರ್ತಿಗಳು
''ರೈತರು ನಮಗೆ 50 ರೂಪಾಯಿಗೆ ಕೊಟ್ಟಿದ್ದಾರೆ ಅಂತ ಸುಳ್ಳು ಹೇಳಿ 100 ರೂಪಾಯಿಗೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ರೈತರು ನಮಗೆ ಸಪ್ಲೈ ಮಾಡಲ್ಲ ಅಂತ ಮಧ್ಯವರ್ತಿಗಳು ಸುಳ್ಳು ಹೇಳುತ್ತಿದ್ದಾರೆ. ಮಧ್ಯವರ್ತಿಗಳು ತುಂಬಾ ಮೋಸ ಮಾಡುತ್ತಿದ್ದಾರೆ. ನಮ್ಮಿಂದ 4 ರೂಪಾಯಿಗೆ ಕ್ಯಾಪ್ಸಿಕಂ ತೆಗೆದುಕೊಂಡು ಹೋಗಿ ಬೆಂಗಳೂರಿನಲ್ಲಿ 80 ರೂಪಾಯಿ ಮಾರುತ್ತಿದ್ದಾರೆ. ನಷ್ಟದಿಂದ ನಾವು ನೇಣು ಹಾಕಿಕೊಂಡು ಸಾಯುವ ಪರಿಸ್ಥಿತಿಗೆ ಬಂದಿದ್ದೇವೆ''
ನೇರವಾಗಿ ನಮ್ಮಿಂದಲೇ ಖರೀದಿಸಿ
''ಮಧ್ಯವರ್ತಿಗಳಿಂದ ನಮ್ಮ ಜೀವನ ಹಾಳಾಗುವುದು ಬೇಡ. ನೇರವಾಗಿ ಬೆಳೆಗಳನ್ನು ನಮ್ಮಿಂದಲೇ ತೆಗೆದುಕೊಳ್ಳಿ. ನಮಗೇ ನೇರ ಹಣ ಸಂದಾಯ ಮಾಡಿ'' ಎಂದು ಸಂಬಂಧಪಟ್ಟ ಸಚಿವರು, ಡಿಸಿ, ಶಾಸಕರ ಬಳಿ ರೈತ ಮನವಿ ಮಾಡಿದ್ದಾರೆ.
ತೀರ್ಮಾನ ಕಾರ್ಯರೂಪಕ್ಕೆ ಬರುವುದು ಯಾವಾಗ.?
ಲಾಕ್ ಡೌನ್ ನಿಂದ ರೈತರು ಸಂಕಷ್ಟಕ್ಕೆ ಸಿಲುಕದಂತೆ, ಅವರು ಬೆಳೆದ ಬೆಳೆಗಳನ್ನು ನೇರವಾಗಿ ಖರೀದಿಸಿ, ಹಾಪ್ ಕಾಮ್ಸ್ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಆದರೆ, ತೀರ್ಮಾನ ಕಾರ್ಯ ರೂಪಕ್ಕೆ ಬರುವುದು ಯಾವಾಗ.? ಮಧ್ಯವರ್ತಿಗಳ ದಬ್ಬಾಳಿಕೆಯಿಂದ ನಲುಗಿರುವ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಸಚಿವರು ಕೊಡುವ ಪರಿಹಾರ ಏನು.?
ಸಚಿವರೇ ಇನ್ನಾದರೂ ಎಚ್ಚೆತ್ತುಕೊಳ್ಳಿ..
'ರೈತ ನಾಯಕ' ಎಂದೇ ಕರೆಯಿಸಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತೋಟಗಾರಿಕೆ ಸಚಿವ ಡಾ.ನಾರಾಯಣಗೌಡ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇನ್ನಾದರೂ ರೈತರ ಪರವಾಗಿ ಕ್ರಮಗಳನ್ನು ಕೈಗೊಂಡರೆ, ರೈತರಿಗೆ ಒಳಿತು. ಎಷ್ಟೇ ಆಗಲಿ, ರೈತರು ಚೆನ್ನಾಗಿದ್ದರೆ ತಾನೇ ಎಲ್ಲರ ಹೊಟ್ಟೆ ತುಂಬೋದು.!