'ನೈತಿಕ ಪೊಲೀಸ್ ಗಿರಿ'ಗೆ ಬಾಲಕಿ ಬಲಿ, ಬಿಜೆಪಿ ನಾಯಕನ ಬಂಧನ
Recommended Video
ಚಿಕ್ಕಮಗಳೂರು, ಜನವರಿ 9: ಹಿಂದೂ ಸಂಘಟನೆ ಕಾರ್ಯಕರ್ತರ ನಿರಂತರ ದೌರ್ಜನ್ಯ, ಬೆದರಿಕೆಗೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ. ಪ್ರಕರಣ ಸಂಬಂಧ ಮೂಡಿಗೆರೆ ನಗರ ಘಟಕದ ಬಿಜೆಪಿಯ ಯುವಮೋರ್ಚಾ ಅಧ್ಯಕ್ಷನನ್ನು ಬಂಧಿಸಲಾಗಿದೆ.
ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಆಕೆ 'ನಾನು ಮುಸ್ಲಿಮರನ್ನು ಪ್ರೀತಿಸುತ್ತೇನೆ' ಎಂದು ಹೇಳಿಕೊಂಡಿದ್ದಳು. ಆಕೆ ಹಿಂದೂ ಸಂಘಟನೆ ಕಾರ್ಯಕರ್ತರ ಕಿರುಕುಳ ತಾಳಲಾರದೆ ನೇಣಿಗೆ ಕೊರಳೊಡ್ಡಿದ್ದಾಳೆ.
ಹಿಂದೂಪರ ಕಾರ್ಯಕರ್ತರ ಧಮ್ಕಿಗೆ ಧನ್ಯಶ್ರೀ ಆತ್ಮಹತ್ಯೆ: ಅಣ್ಣಾಮಲೈ
ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಆಕೆಯ ಮನೆಗೆ ಐವರು ಹಿಂದೂ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ಆಕೆಗೆ ಮತ್ತು ಆಕೆಯ ತಾಯಿಗೆ ಬೆದರಿಕೆ ಹಾಕಿದ್ದರು. 'ಮುಸ್ಲಿಮರ ಜತೆ ಸಹಬಾಳ್ವೆ'ಯಿಂದ ಇರುವುದನ್ನು ಪ್ರಶ್ನಸಿದ್ದರು. ಇದಾಗಿ ಮರುದಿನ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಖಾಸಗಿ ಸಂಭಾಷಣೆ ಸೋರಿಕೆ
ಇದಲ್ಲದೆ ಧನ್ಯಶ್ರೀಯ ಖಾಸಗಿ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯೂ ಆಗಿದ್ದು ಆಕೆಯ ಆತ್ಮಹತ್ಯೆಗೆ ಮತ್ತೊಂದು ಕಾರಣ ಎನ್ನಲಾಗಿದೆ.
ಬಜರಂಗದಳ ನಾಯಕನ ಕೃತ್ಯ
ಆಕೆ ತನ್ನ ಗೆಳೆಯ ಸಂತೋಷ್ ಎಂಬಾತನ ಜತೆ ನಡೆಸಿದ ಸಂಭಾಷಣೆಗಳು ಇವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇದರಲ್ಲಿ ಆಕೆ ನಾನು ಮುಸ್ಲಿಮರನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾಳೆ.
ಇದಕ್ಕೆ ಆಕೆಯ ಸ್ನೇಹಿತ 'ಲವ್ ಜಿಹಾದ್' ಬಲೆಗೆ ಬೀಳಬೇಡ, ಬೇರೆ ಧರ್ಮದವರ ಜತೆ ಸಲುಗೆ ಬೇಡ ಎಂಬ ಎಚ್ಚರಿಕೆ ನೀಡಿದ್ದ. ಇದರ ಸ್ಕ್ರೀನ್ ಶಾಟ್ ಗಳನ್ನು ಸಂತೋಷ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ. ಈತ ಸ್ಥಳೀಯ ಬಜರಂಗದಳದ ನಾಯಕ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ನಾಯಕನ ಧಮ್ಕಿ
ಮೂಡಿಗೆರೆ ನಗರ ಘಟಕದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅನಿಲ್ ರಾಜ್ ನೇತೃತ್ವದಲ್ಲಿ ಐವರು ಹಿಂದೂ ಸಂಘಟನೆ ಕಾರ್ಯಕರ್ತರು ಹುಡುಗಿಯ ಮನೆಗೆ ಶುಕ್ರವಾರ ಭೇಟಿ ನೀಡಿದ್ದರು. ಇವರೆಲ್ಲಾ, ಮುಸ್ಲಿಮರ ಜತೆ ಸ್ನೇಹದಿಂದ ಇರಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಬೇರೆ ಧರ್ಮೀಯರಿಂದ ದೂರ ಇರುವಂತೆ ಧಮ್ಕಿ ಹಾಕಿತ್ತು. ಇದೇ ಸಂದರ್ಭದಲ್ಲಿ ಬೇರೆ ಧರ್ಮದ ಯುವಕನ ಜತೆಗಿರುವ ಯುವತಿಯ ಚಿತ್ರವನ್ನು 'ಚಾರಿತ್ರ್ಯಹರಣ' ಮಾಡಲೆಂದೇ ಶೇರ್ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಯಾರನ್ನೂ ಬಿಡಲ್ಲ
"ಯುವತಿ ತನ್ನ ಮನೆಯಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಡೆತ್ ನೋಟ್ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಿರುವುದು ಮತ್ತು ಬೆದರಿಕೆ ಹಾಕಿರುವುದು ಬಯಲಾಗಿದೆ. ಆಕೆಯ ಚಿತ್ರಗಳನ್ನು ಶೇರ್ ಮಾಡಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಕೈಜೋಡಿಸಿರುವ ಯಾರನ್ನೂ ಬಿಡುವುದಿಲ್ಲ," ಎಂದು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಗುಡುಗಿದ್ದಾರೆ.
ಐವರ ಮೇಲೆ ಎಫ್ಐಆರ್
ಪ್ರಕರಣ ಸಂಬಂಧ ಐವರ ಮೇಲೆ ಮೂಡಿಗೆರೆ ಪೊಲೀಸರು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಯುವತಿ ಮೇಲೆ ದೌರ್ಜನ್ಯ ಎಸಗಿದವರನ್ನು ಪತ್ತೆ ಮಾಡಲು ಪೊಲೀಸರ ಎರಡು ತಂಡಗಳನ್ನು ರಚಿಸಲಾಗಿದೆ. ಆಕೆಯ ಚಿತ್ರ ಮತ್ತು ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದವರನ್ನೂ ಪೊಲೀಸರು ಬೆನ್ನತ್ತಿದ್ದಾರೆ.