ಖ್ಯಾತ ಕವಿ ಸುಮತೀಂದ್ರ ನಾಡಿಗ ಅನಾರೋಗ್ಯದಿಂದ ನಿಧನ
ಬೆಂಗಳೂರು, ಆಗಸ್ಟ್ 07: ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಕವಿ, ಲೇಖಕ ಸುಮತೀಂದ್ರ ನಾಡಿಗ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಚಿಕ್ಕಮಗಳೂರಿನ ಕಳಸದಲ್ಲಿ ಜನಿಸಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಅವರು, ಕಾವ್ಯ, ಕಥನ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದ್ದರು.
ಹಲವು ಪ್ರಶಸ್ತಿಗಳು ನಾಡಿಗ ಅವರನ್ನು ಅರಸಿ ಬಂದಿದ್ದವು ಅವುಗಳಲ್ಲಿ ಪ್ರಮುಖವಾದವು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ವಿ.ಎಂ.ಇನಾಂದಾರ್ ಪ್ರಶಸ್ತಿ ಇನ್ನೂ ಪ್ರಮುಖ ಪ್ರಶಸ್ತಿಗಳು, ಪುರಸ್ಕಾರಗಳು ನಾಡಿಗ ಅವರಿಗೆ ಸಂದಿದ್ದವು.ಸುಮತೀಂದ್ರ ಅವರ ಭಾವಲೋಕ, ನಟರಾಜ ಕಂಡ ಕಾಮನಬಿಲ್ಲು, ದಾಂಪತ್ಯ ಗೀತೆಗಳು, ಜಡ ಮತ್ತು ಚೇತನ ಪಂಚಮಭೂತಗಳು ಇನ್ನೂ ಹಲವು ಕವನ ಸಂಕಲಗಳು ಪ್ರಸಿದ್ಧಿ ಪಡೆದಿವೆ. ಅನುವಾದ, ವಿಮರ್ಶೆ, ಕಥನಗಳನ್ನೂ ಅವರು ಬರೆದಿದ್ದಾರೆ.
ಮಕ್ಕಳ ಸಾಹಿತ್ಯ ಸಹಿತ್ಯಕ್ಕೆ ಸುಮತೀಂದ್ರ ಅವರ ಕೊಡುಗೆ ಅಪಾರ, ಅವರ 'ಡಕ್ಕಣಕ್ಕ-ಡಕ್ಕಣಕ್ಕ', ಧ್ರುವ ಮತ್ತು ಪ್ರಹ್ಲಾದ, ಗೂಬೆಯ ಕಥೆ, ಇನ್ನಿತರ ಕತೆಗಳು ಪ್ರಸಿದ್ದ, 2016ರಲ್ಲಿ ಅವರಿಗೆ ಮಕ್ಕಳ ಸಾಹಿತ್ಯಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಬಾಲ ಸಾಹಿತ್ಯ ಪುರಸ್ಕಾರ ನೀಡಿದೆ.