ಸೇವೆಯಿಂದ ವಜಾಗೊಂಡ 10 ವರ್ಷದ ಬಳಿಕ ಮಹಿಳೆಗೆ ಹೈಕೋರ್ಟ್ ನಿಂದ ‘ನ್ಯಾಯ’..!
ಬೆಂಗಳೂರು ಮೇ 10. ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ ಎಂಬ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ ಮಹಿಳೆಗೆ ಸೇವೆಯಿಂದ ವಜಾಗೊಂಡ 10 ವರ್ಷಗಳ ಬಳಿಕ ಹೈಕೋರ್ಟ್ ನಲ್ಲಿ ನ್ಯಾಯ ದೊರಕಿದೆ.
68 ವರ್ಷದ ಬೆಂಗಳೂರಿನ ಮಹಿಳೆ ವಿರುದ್ಧದ ಅಕೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಎಸ್ ಟಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂದು ಆಕೆಯ ವಿರುದ್ಧ ಹೂಡಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಬೆಂಗಳೂರಿನ ಸಾವಿತ್ರಿ ಅಲಿಯಾಸ್ ಸಾವಿತ್ರಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ಮಾಡಿದೆ.
ಕೋರ್ಟ್ ಆದೇಶವೇನು?
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ " ಅರ್ಜಿದಾರರಿಗೆ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯಲು ಮತ್ತು ಮೀಸಲು ಗಿಟ್ಟಿಸಿಕೊಳ್ಳಲು ಆಕೆ ಎಸ್ ಟಿ ಜಾತಿ ಪ್ರಮಾಣಪತ್ರ ಪಡೆಯುವ ಕ್ರಿಮಿನಲ್ ಉದ್ದೇಶದ ಹೊಂದಿದ್ದಂತೆ ಕಾಣುತ್ತಿಲ್ಲ. ಜೊತೆಗೆ ಆಕೆ ಸೇವೆಗೆ ಸೇರಿದ ಹಲವು ವರ್ಷಗಳ ಬಳಿಕ ಕಾಯಿದೆ ಜಾರಿಗೊಳಿಸಿ ಆಕೆಯ ವಿರುದ್ಧ ಕೇಸ್ ಮಾಡಲಾಗಿದೆ'' ಎಂದು ನ್ಯಾಯಪೀಠ ಹೇಳಿದೆ.
"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗಿರುವುದೇ 1989ರಲ್ಲಿ, ಆದರೆ ಅರ್ಜಿದಾರರು ಅದಕ್ಕೂ ಮುನ್ನವೇ ಜಾತಿ ಪ್ರಮಾಣಪತ್ರ ಪಡೆದು ಉದ್ಯೋಗಕ್ಕೆ ಸೇರಿದ್ದಾರೆ. ಚಾಲ್ತಿಯಲ್ಲಿಲ್ಲದ ಕಾನೂನು ಬಳಸಿ ಯಾವುದೇ ವ್ಯಕ್ತಿಯನ್ನು ಶಿಕ್ಷಿಸಲಾಗದು. ಅರ್ಜಿದಾರರು ಮದುವೆಯಾದ ಆರಂಭದಲ್ಲಿಯೇ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ, ಹಾಗಾಗಿ ಅವರು ಮೀಸಲು ಸೌಲಭ್ಯ ಪಡೆದುಕೊಳ್ಳಲು ಮತ್ತು ಉದ್ಯೋಗಕ್ಕಾಗಿಯೇ ದುರುದ್ದೇಶ ಪೂರ್ವಕವಾಗಿ ಎಸ್ ಟಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂದು ಹೇಳಲಾಗದು. ಹಾಗಾಗಿ ಅವರ ವಿರುದ್ಧದ ಕ್ರಿಮಿನಲ್ ಕೇಸ್ ರದ್ದು ಮಾಡಲಾಗುತ್ತಿದೆ'' ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಮದುವೆಯಾಗುವ ಸಂದರ್ಭದಲ್ಲಿ ಮದುವೆ ನಂತರ ಮಹಿಳೆಯ ಗಂಡನ ಜಾತಿಗೆ ಸೇರಿದವರಾಗುತ್ತಾರೆಂಬುದು. ಆದರೆ, 1996ರಲ್ಲಿ ಸುಪ್ರೀಂಕೋರ್ಟ್ ವಲ್ಸಮ್ಮ ಪೌಲ್ ಪ್ರಕರಣದಲ್ಲಿ ತದ್ವಿರುದ್ಧ ನಿಲುವು ತಳೆದು, ಮದುವೆಯಿಂದಾಗಿ ಮಹಿಳೆ ತನ್ನ ಪತಿಯ ಜಾತಿಯನ್ನು ಪಡೆದುಕೊಳ್ಳುವುದಿಲ್ಲ ಎಂದು ಆದೇಶಿಸಿತ್ತು.
ಪ್ರಕರಣದ ವಿವರ:
ಸಾವಿತ್ರಿ ಅವರು ಮೂಲತಃ ಬ್ರಾಹ್ಮಣರು, 1974ರಲ್ಲಿ ಎಸ್ ಟಿ ವರ್ಗಕ್ಕೆ ಸೇರಿದ ನಾಯಕ ಜನಾಂಗದ ಎ.ಎಂ.ಸೂರ್ಯನಾರಾಯಣ ನಾಯಕ ಅವರನ್ನು ಮದುವೆಯಾಗಿದ್ದರು. ಆನಂತರ ಅವರು ಎಸ್ ಟಿ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದರು ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.
ಮೊದಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ದ್ವಿತಿಯ ದರ್ಜೆ ಗುಮಾಸ್ತರಾಗಿ ನೇಮಕಗೊಂಡಿದ್ದರು. ಆನಂತರ ಆಕೆಯ ಎಸ್ ಎಸ್ ಎಲ್ ಸಿ ದಾಖಲೆಯ ಪ್ರಕಾರ ಬ್ರಾಹ್ಮಣ ಜನಾಂಗಕ್ಕೆ ಸೇರಿದವರಾಗಿದ್ದು, ಅವರು ಪತಿಯ ಜಾತಿಯೆಂದು ಹಕ್ಕು ಮಂಡಿಸಲಾಗದು ಮತ್ತು ಎಸ್ ಟಿ ಪ್ರಮಾಣ ಪತ್ರ ಪಡೆಯಲಾಗದು ಎಂದು ಆಕೆ ಪಡೆದಿದ್ದ ಎಸ್ ಟಿ ಜಾತಿ ಪ್ರಮಾಣಪತ್ರವನ್ನು ರದ್ದಗೊಳಿಸಿತು.
ಅಲ್ಲದೆ, ಅವರನ್ನು 2012ರ ಏ.28ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು ಮತ್ತು ಆಕೆಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989 ಸೆಕ್ಷನ್ 3(1)(9)ರಡಿ ವಂಚನೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಕ್ರಿಮಿನಲ್ ಕೇಸ್ ಹೂಡಲಾಗಿತ್ತು. ಆ ಕೇಸು ತುಮಕೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು, ಅದನ್ನು ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.