ಕಾಂಗ್ರೆಸ್ಗೆ 81 ಸೀಟು ಬಂದ ಸಮೀಕ್ಷೆ ನಕಲಿ, ಪೊಲೀಸರಿಗೆ ದೂರು!
ಬೆಂಗಳೂರು, ಜನವರಿ 15 : ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಎರಡು ದಿನದಿಂದ ಪ್ರಕಟವಾಗುತ್ತಿರುವ ಸಮೀಕ್ಷೆ ನಕಲಿ ಎಂದು ಕೆಪಿಸಿಸಿ ಹೇಳಿದೆ. ಈ ಕುರಿತು ಪೊಲೀಸರಿಗೂ ಪಕ್ಷ ದೂರು ನೀಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಸಿಎಚ್ಎಸ್ ಸಂಸ್ಥೆ ನಡೆಸಿರುವ ಸಮೀಕ್ಷೆಯ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಿ ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ
ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದ ಸಮೀಕ್ಷೆ ಇದಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉತ್ತಮ ಅಭ್ಯರ್ಥಿ ಎಂದು ಶೇ 36ರಷ್ಟು ಜನರು ಈ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವವಾಣಿ ಸಮೀಕ್ಷೆ: ಕೈ ಮೇಲು, ಕಮಲಕ್ಕೆ ಬೆಳ್ಳಿ, ಜೆಡಿಎಸ್ ಕೊನೆ
ಕರ್ನಾಟಕ ಕಾಂಗ್ರೆಸ್ ಸೋಮವಾರ ಈ ಸಮೀಕ್ಷಾ ವರದಿ ನಕಲಿ ಎಂದು ಹೇಳಿದೆ. ನಕಲಿ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದೆ.
ಕೆಪಿಸಿಸಿ ಅಧ್ಯಕ್ಷರು ಡಿಸೆಂಬರ್ ತಿಂಗಳಿನಲ್ಲಿ ಮಾಡಿಸಿರುವ ಸಮೀಕ್ಷೆ ಎಂದು ಈ ವರದಿಯನ್ನು ವಿವಿಧ ಮಾಧ್ಯಮಗಳು ಪ್ರಕಟಿಸಿವೆ. 'ನಾವು ಯಾವುದೇ ಸಮೀಕ್ಷೆ ನಡೆಸಲು ಅನುಮತಿ ಕೊಟ್ಟಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಸಮೀಕ್ಷೆಯ ವಿವರಗಳು ಚಿತ್ರಗಳಲ್ಲಿವೆ...
ಮುಖ್ಯಮಂತ್ರಿ ಹುದ್ದೆಗೆ ಉತ್ತಮ ಯಾರು?
ಸಮೀಕ್ಷೆ ವರದಿ ಪ್ರಕಾರ ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಉತ್ತಮ ಅಭ್ಯರ್ಥಿ ಎಂದು ಶೇ 28, ಕುಮಾರಸ್ವಾಮಿ ಉತ್ತಮ ಎಂದು ಶೇ 36, ಸಿದ್ದರಾಮಯ್ಯ ಉತ್ತಮ ಎಂದು ಶೇ 21ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಪರಮೇಶ್ವರ ಸ್ಪಷ್ಟನೆ
'ಸಿ.ಎಚ್.ಎಸ್ ಎಂಬ ಸಂಸ್ಥೆ ಮುಂದಿನ ಚುನಾವಣೆ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆ ಮಾಡಿ ಮಾಧ್ಯಮಗಳಿಗೆ ಹರಿಬಿಟ್ಟಿದೆ. ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿದೆ. ಇದು ಸತ್ಯಕ್ಕೆ ದೂರವಾದ್ದದ್ದು. ಈ ಸಂಸ್ಥೆಗೆ ನಾವು ಯಾವುದೇ ಸಮೀಕ್ಷೆ ಮಾಡಲು ಅವಕಾಶ ಕೊಟ್ಟಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಆಯುಕ್ತರಿಗೆ ದೂರು
ನಕಲಿ ಸಮೀಕ್ಷೆ ನಡೆಸಿ ಅದನ್ನು ಮಾಧ್ಯಮಗಳಿಗೆ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರಿಗೆ ಸೋಮವಾರ ದೂರು ನೀಡಿದೆ.
ಸಮೀಕ್ಷೆ ಹರಡುವುದನ್ನು ತಡೆಯಿರಿ
ಇದೊಂದು ನಕಲಿ ಸಮೀಕ್ಷೆಯಾಗಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡುತ್ತಿದೆ. ಇದು ಹರಡದಂತೆ ತಡೆಯಿರಿ ಎಂದು ಕೆಪಿಸಿಸಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದೆ.