ನಕಲಿ ಜಾತಿ ಪ್ರಮಾಣಪತ್ರ: ಕೊತ್ತನೂರು ಮಂಜುನಾಥ್ ನಾಮಪತ್ರ ತಿರಸ್ಕೃತ
ಬೆಂಗಳೂರು, ಏಪ್ರಿಲ್ 25: ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಆಧರಿಸಿ ಕೋಲಾರದ ಮುಳುಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ನಾಮಪತ್ರ ತಿರಸ್ಕೃತವಾಗಿದೆ.
ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಶಾಸಕರಾಗಿದ್ದ ಮಂಜುನಾಥ್ ಜಾತಿ ಪ್ರಮಾಣ ಪತ್ರ ನಕಲಿ ಎಂದಿದ್ದ ನ್ಯಾಯಾಲಯ, ಅವರ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು. ಜೊತೆಗೆ ಶಾಸಕತ್ವವನ್ನೂ ಅಸಿಂಧುಗೊಳಿಸಿತ್ತು. ಹೀಗಾಗಿ ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ನಂತರ ಅವರ ನಾಮಪತ್ರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗ ಹೇಳಿತ್ತು.
ನಕಲಿ ಜಾತಿ ಪ್ರಮಾಣಪತ್ರ: ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಅಸಿಂಧು
ಇದೀಗ ಇಂದು ಆದೇಶ ಪ್ರತಿ ಸಿಕ್ಕ ಹಿನ್ನೆಲೆಯಲ್ಲಿ ಚುನಾವನಾ ಆಯೋಗ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿದೆ.
ಆಗಿದ್ದೇನು?
2013ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ತಾವು ಬುಡಗ ಜಂಗಮ (ಎಸ್ಸಿ) ಜಾತಿಗೆ ಸೇರಿದವರು ಎಂದು ಹೇಳಿ ಮಂಜುನಾಥ್ ಅವರು ಜಾತಿ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು.
ಪಕ್ಷೇತರರಾಗಿ 2013ರಲ್ಲಿ ಸ್ಪರ್ಧಿಸಿದ್ದ ಅವರು 73,146 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಎನ್. ಮುನಿಅಂಜಪ್ಪರನ್ನು ಸುಮಾರು 34 ಸಾವಿರ ಮತಗಳಿಂದ ಭರ್ಜರಿಯಾಗಿ ಸೋಲಿಸಿ ಶಾಸಕರಾಗಿದ್ದರು.
ಆದರೆ ಚುನಾವಣೆಯಲ್ಲಿ ಸೋತ ಎಂ. ಮುನಿಅಂಜಪ್ಪ ಕೋರ್ಟ್ ಮೆಟ್ಟಿಲೇರಿದರು. ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಮೀಸಲು ಕ್ಷೇತ್ರದಿಂದ ಮಂಜುನಾಥ್ ಸ್ಪರ್ಧಿಸಿದ್ದಾರೆ ಎಂದು ತಕರಾರು ತೆಗೆದಿದ್ದರು. ಮತ್ತು ಇದಕ್ಕೆ ಬೇಕಾದ ದಾಖಲೆಗಳನ್ನೂ ಅವರು ಸಲ್ಲಿಸಿದ್ದರು.
ಬರೋಬ್ಬರಿ ಐದು ವರ್ಷಳ ಕಾಲ ಈ ಪ್ರಕರಣದ ವಿಚಾರಣೆ ನಡೆದು ಬುಧವಾರ ನ್ಯಾಯಾಲಯ ತೀರ್ಪು ನೀಡಿತ್ತು.
ರೂಪಾ ಶಶಿಧರ್ ನಾಮಪತ್ರ ಅಂಗೀಕಾರ
ಕೆ.ಎಚ್.ಮುನಿಯಪ್ಪ ಪುತ್ರಿ, ಕೆಜಿಎಫ್ ಕಾಂಗ್ರೆಸ್ ಅಭ್ಯರ್ಥಿ ರೂಪಾ ಶಶಿಧರ್ ನಾಮಪತ್ರದ ಬಗ್ಗೆಯೂ ತಕರಾರು ಎದ್ದಿತ್ತು. ಅವರ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿದೆ ಎಂದು ತಕರಾರು ತೆಗೆಯಲಾಗಿತ್ತು.
ಆದರೆ ಅವರ ನಾಮಪತ್ರವನ್ನು ಚುನಾವಣಾ ಆಯೋಗ ಅಂಗೀಕರಿಸಿದೆ. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.
ಶಿವಮೊಗ್ಗ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿಯೂ ಸ್ಪರ್ಧಿಸುವಂತಿಲ್ಲ
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಡಾ. ಎಸ್. ಕೆ. ಶ್ರೀನಿವಾಸ್ ಚುನಾವಣೆ ಸ್ಪರ್ಧೆಯೊಡ್ಡುವುದಕ್ಕೆ ನ್ಯಾಯಾಲಯ ಬುಧವಾರ ತಡೆಯಾಜ್ಞೆ ನೀಡಿದೆ.
ಡಾ. ಎಸ್. ಕೆ. ಶ್ರೀನಿವಾಸ್ ಮಾಜಿ ಶಾಸಕ ಕರಿಯಣ್ಣನವರ ಪುತ್ರರಾಗಿದ್ದು ವೃತ್ತಿಯಲ್ಲಿ ಸರಕಾರಿ ವೈದ್ಯರಾಗಿದ್ದರು. ಅವರು ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
221 ಕಡೆ ಮಾತ್ರ ಕಾಂಗ್ರೆಸ್ ಸ್ಪರ್ಧೆ
ಒಬ್ಬರು ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿರುವುದರಿಂದ ಹಾಗೂ ಒಬ್ಬರ ಸ್ಪರ್ಧೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಳೆದುಕೊಂಡಿದೆ. ಜೊತೆಗೆ ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಿಲ್ಲ.
ಹೀಗಾಗಿ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ 221 ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತಿದೆ.