Fact Check:ನಿಖಿಲ್ ಮದ್ವೆಗೆ ಯಡಿಯೂರಪ್ಪ ಹೋಗಿದ್ರಂತೆ?
ಬೆಂಗಳೂರು, ಏಪ್ರಿಲ್ 20: ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಈ ರೀತಿ ಐಷಾರಾಮಿ ಮದುವೆ ಬೇಕಿತ್ತಾ ಹೀಗೆ ನಾನಾ ಬಗೆಯ ಟೀಕೆಗಳು ಕೇಳಿ ಬಂದಿದ್ದವು. ಆದರೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರನ್ನು ಹೊಗಳಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರು ಸತ್ಯದ ಪರ ನಿಂತಿದ್ದಾರೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು.
ಇದೆಲ್ಲ ನಡೆಯುವ ಹೊತ್ತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ನಿಖಿಲ್ ಮದುವೆ ಬಗ್ಗೆ ಟ್ರಾಲ್ಸ್, ಮೀಮ್ಸ್ ಹರಡಿವೆ. ಜೊತೆಗೆ ಒಂದು ಸುಳ್ಳು ಸುದ್ದಿಯನ್ನು ಹಬ್ಬುವಂತೆ ಮಾಡಲಾಗಿದೆ. ಕಳೆದ ಶುಕ್ರವಾರ ನಡೆದ ನಿಖಿಲ್ ಮದುವೆಗೆ ಯಡಿಯೂರಪ್ಪ ಅವರು ಹೋಗಿದ್ದರು. ಸಾಮಾಜಿಕ ಅಂತರ ನಿಯಮ ಪಾಲಿಸಿದರು ಎಲ್ಲವೂ ಸರಿ. ಅವರೆಲ್ಲ ದೊಡ್ಡವರು ದುಡ್ಡಿರುವವರು ಆಡಳಿತ ಪಕ್ಷ, ವಿಪಕ್ಷದವರು ಒಂದಾಗುತ್ತಾರೆ. ಲಾಕ್ಡೌನ್ ನಿಯಮಗಳು ಹೊಟ್ಟೆಗೆ ಹಿಟ್ಟಿಲ್ಲದೆ ನರಳುವ ಬಡವರಿಗೆ ಮಾತ್ರ ಎಂಬರ್ಥದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕಲಾಗಿದೆ. ಇದಕ್ಕೆ ಸಾವಿರಾರು ಲೈಕ್ಸ್, ಕಾಮೆಂಟ್ಸ್ ಬಂದಿವೆ. ಜೊತೆಗೆ ನಿಖಿಲ್-ರೇವತಿ ದಂಪತಿ ಜೊತೆ ಯಡಿಯೂರಪ್ಪ, ಕುಮಾರಸ್ವಾಮಿ ಅವರಿರುವ ಚಿತ್ರವನ್ನು ಹಂಚಲಾಗಿದೆ.
ಸಿಎಂ ಯಡಿಯೂರಪ್ಪ ಅವರು ಸತ್ಯದ ಪರ ನಿಂತಿದ್ದಾರೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ಸತ್ಯಾಸತ್ಯತೆ: ಈ ಪೋಸ್ಟ್ ಸದ್ಯ ತೆಗೆದು ಹಾಕಲಾಗಿದೆ. ಅಲ್ಲಿ ಬಳಸಿದ ಚಿತ್ರವೂ ನಿಜ. ಆದರೆ ಯಡಿಯೂರಪ್ಪ ಅವರು ಮದುವೆಗೆ ಹೋಗಿರಲಿಲ್ಲ. ರಿವರ್ಸ್ ಗೂಗಲ್ ಸರ್ಚ್ ಮಾಡಿದಾಗ ಇದು ಫೆಬ್ರವರಿ 10, 2020ರ ಚಿತ್ರ ಎಂದು ತಿಳಿದು ಬರುತ್ತದೆ. ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ಸಮಾರಂಭಕ್ಕೆ ಯಡಿಯೂರಪ್ಪ ಭೇಟಿ ನೀಡಿದ್ದರು. ಇದೇ ಚಿತ್ರವನ್ನು ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ.
ರಾಮನಗರದ ಸಮೀಪ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವನ್ನು ಆಪ್ತ ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ ಸಾಮಾಜಿಕ ಮಾಧ್ಯಮದ ಕೆಲವು ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ. ಅವರೆಲ್ಲರೂ ಶರಣರ ಈ ಮಾತನ್ನು ನೆನಪಲ್ಲಿಟ್ಟುಕೊಳ್ಳಬೇಕು ಎಂದು ಕುಮಾರಸ್ವಾಮಿ ಬಸವಣ್ಣನವರ ವಚನವನ್ನು ಹೇಳಿದ್ದಾರೆ. "ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ" ಎಂದು ವಿವಾಹ ವಿರೋಧಿಸಿ ಮಾತನಾಡಿದ್ದವರಿಗೆ ತಿರುಗೇಟು ಕೊಟ್ಟಿದ್ದಾರೆ.