ಕಾಂಗ್ರೆಸ್ ಗೆಲುವಿಗೆ ಸೋಪಾನವಾದ 9 ಸಂಗತಿಗಳು
ರಾಜಾರೋಶದಿಂದ ಪ್ರಚಾರ ಮಾಡುತ್ತಿದ್ದ ಬಿಜೆಪಿ ತಪ್ಪುಗಳನ್ನು ಮಾಡುತ್ತಲೇ ಹೋಯಿತು, ಕಾಂಗ್ರೆಸ್ ಆ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸಿ ಜಾಣ್ಮೆ ಮೆರೆಯಿತು. ಫಲಿತಾಂಶ ಈಗ ಎಲ್ಲರ ಕಣ್ಣಮುಂದಿದೆ.
ಬೆಂಗಳೂರು, ಏಪ್ರಿಲ್ 13 : ನರೇಂದ್ರ ಮೋದಿ ಅಲೆ ದೇಶದೆಲ್ಲೆಡೆ ಇದೆ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ನೀಡಿದೆ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್.
ಬಿಜೆಪಿ ಅಂದುಕೊಂಡಿದ್ದು ನಿಜ ಕೂಡ. ಉತ್ತರಪ್ರದೇಶ, ಮಣಿಪುರ, ಗೋವಾ, ಉತ್ತಾರಾಖಂಡ, ಪಂಜಾಬ್ ಚುನಾವಣೆಗಳಲ್ಲಿ ಮೋದಿ ಅಲೆ ಇದ್ದಿದ್ದು ನಿಜವಾಗಿತ್ತು. ಅದೇ ಅಲೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿಯೂ ಮುಂದುವರಿಯುತ್ತದೆ ಎಂದು ಅಂದುಕೊಂಡಿದ್ದೂ ಬಿಜೆಪಿಯ ತಪ್ಪಲ್ಲ.
ಆದರೆ, ಸರಿಯಾದ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ, ಚುನಾವಣಾ ತಂತ್ರ ಹೂಡುವಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಹಿಂದೆ ಹಾಕಿ ಜಯಭೇರಿ ಬಾರಿಸಿದೆ. ಬಿಜೆಪಿಯಲ್ಲಿನ ದೌರ್ಬಲ್ಯವನ್ನು ತನ್ನ ಬಲವನ್ನಾಗಿಸುವಲ್ಲಿಯೂ ಕಾಂಗ್ರೆಸ್ ಗೆದ್ದಿರುವುದು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸಾಬೀತಾಗಿದೆ. [ನೆಗೆದುಬಿದ್ದು ನೆಲ್ಲಿಕಾಯಿಯಾದ ಕರ್ನಾಟಕ ಗುಪ್ತಚರ ವರದಿ]
ರಾಜಾರೋಶದಿಂದ ಪ್ರಚಾರ ಮಾಡುತ್ತಿದ್ದ ಬಿಜೆಪಿ ತಪ್ಪುಗಳನ್ನು ಮಾಡುತ್ತಲೇ ಹೋಯಿತು, ಕಾಂಗ್ರೆಸ್ ಆ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸಿ ಜಾಣ್ಮೆ ಮೆರೆಯಿತು. ಫಲಿತಾಂಶ ಈಗ ಎಲ್ಲರ ಕಣ್ಣಮುಂದಿದೆ. ನಂಜನಗೂಡಿನಲ್ಲಿ ಎಂದೂ ಗೆದ್ದಿರದ ಕಳಲೆ ಕೇಶವಮೂರ್ತಿ ಮತ್ತು ಗುಂಡ್ಲುಪೇಟೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಗೀತಾ ಮಹದೇವ್ ಪ್ರಸಾದ್ ಅವರು ಜಯಸಾಧಿಸಿ ಕಾಂಗ್ರೆಸ್ಸಿನ ಬಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಯಾವ್ಯಾವ ಅಂಶಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾದವು ಎಂಬ ಬಗ್ಗೆ ಇಲ್ಲಿ ವಿಶ್ಲೇಷಣೆಯಿದೆ. [ಉಪ ಸಮರದಲ್ಲಿ ಬಿಜೆಪಿ ಸೋಲಿಗೆ ಇಲ್ಲಿದೆ ನಾನಾ ಕಾರಣಗಳು]
ಜೆಡಿಎಸ್ ಸ್ಪರ್ಧಿಸದಂತೆ ಮಾಡಿದ್ದು ಮಾಸ್ಟರ್ ಸ್ಟ್ರೋಕ್
ಹೆಚ್ಚೂಕಡಿಮೆ ನಾಮಪತ್ರ ಸಲ್ಲಿಸುವ ಹಂತದಲ್ಲಿಯೇ ಕಾಂಗ್ರೆಸ್ ಜಯ ನಿಶ್ಚಿತವಾಗಿತ್ತು. ಜೆಡಿಎಸ್ ನಿಂದಲೇ ಹಾರಿ ಬಂದಿದ್ದ ಕಳಲೆ ಕೇಶವಮೂರ್ತಿ ನಾಮಪತ್ರ ಸಲ್ಲಿಸಿದ ನಂತರ, ಜೆಡಿಎಸ್ ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸದಂತೆ ತಡೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ಈ ಕಾರಣಕ್ಕಾಗಿಯೇ ಅವರು ದೇವೇಗೌಡ ಮತ್ತು ಕುಮಾರಸ್ವಾಮಿಗೆ ಧನ್ಯವಾದಗಳನ್ನು ಕೂಡ ಅರ್ಪಿಸಿದರೆ. ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದ್ದರೆ ಕಳಲೆಯ ಮತಗಳು ಒಡೆದುಹೋಗಿ ಶ್ರೀನಿವಾಸ್ ಗೆದ್ದುಬಿಡುತ್ತಿದ್ದರು.
ಬಿಜೆಪಿಯ ದೌರ್ಬಲ್ಯ ಕಾಂಗ್ರೆಸ್ಸಿಗೆ ಬಲ
ಮಾನಸಿಕವಾಗಿ ಸಬಲರಾದರೂ ದೈಹಿಕವಾಗಿ ಅತ್ಯಂತ ದುರ್ಬಲವಾಗಿರುವ ವಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸಿದ್ದು ಕಾಂಗ್ರೆಸ್ ಪಾಲಿಗೆ ಬಲವಾಯಿತು. ಶ್ರೀನಿವಾಸ್ ಎಷ್ಟೇ ಪ್ರಬಲ ಸ್ಪರ್ಧಿಯಾಗಿದ್ದರೂ ಅವರು ಸ್ವತಃ ಪ್ರಚಾರಕ್ಕೆ ಇಳಿಯದಿರುವುದು ಬಿಜೆಪಿಗೆ ಮುಳುವಾಯಿತು. ಇದರ ಲಾಭ ಪಡೆದುಕೊಂಡ ಕಳಲೆ ಮನೆಮನೆಗೆ ಎಡತಾಕಿ ಮತಗಳನ್ನು ಗಳಿಸಿಕೊಂಡರು.
ಗೀತಾಗೆ ಅನುಕಂಪದ ಅಲೆ
ಮಹದೇವ್ ಪ್ರಸಾದ್ ಅವರು ಅಸುನೀಗಿದ್ದು ಒಂದು ಕಾರಣವಾದರೆ, ಅವರ ಪತ್ನಿ ಗೀತಾ ಅವರು ಕಣ್ಣೀರು ಸುರಿಸುತ್ತಲೇ ಮತಕೇಳಲು ಆರಂಭಿಸಿದ್ದು, ಮತಗಳು ಅವರತ್ತ ಒಲಿಯುವಂತೆ ಮಾಡಿದ್ದು ಸುಳ್ಳಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಯಡಿಯೂರಪ್ಪನವರು ವಾಗ್ದಾನ ನೀಡಿಯೂ ಮೋಸ ಮಾಡಿದ್ದು, ಸಿಂಹ ಅಸಂಬದ್ಧವಾಗಿ ಮಾತನಾಡಿದ್ದು ಅನುಕಂಪದ ಅಲೆ ಮತ್ತಷ್ಟು ಹೆಚ್ಚಲು ಕಾರಣವಾಯಿತು.
ಮೋದಿ ಅಲೆ ಇಲ್ಲವೇ ಇಲ್ಲ
ಆರಂಭದಲ್ಲಿಯೇ ಸಿದ್ದರಾಮಯ್ಯನವರು ಒಂದು ಹೇಳಿಕೆ ನೀಡಿದ್ದರು. ಮೋದಿ ಅಲೆ ಎಂಬುದೆಲ್ಲ ಸುಳ್ಳು, ಅದು ಕೇವಲ ಭ್ರಮೆ, ಇಲ್ಲಿ ಅದಂತೂ ಇಲ್ಲವೇ ಇಲ್ಲ ಎಂದು ಸ್ಪಷ್ಟೋಕ್ತಿಗಳಲ್ಲಿ ಹೇಳಿದ್ದರು. ಕಣದಲ್ಲಿ ಎಂಥ ಸ್ಪರ್ಧಿ ನಿಂತಿದ್ದಾನೆಂದು ಮತದಾರ ನೋಡಿದ್ದಾನೆಯೇ ಹೊರತು, ಮೋದಿ ಅಲೆಗೆ ಆತ ಮಾರು ಹೋಗಿಲ್ಲದಿರುವುದು ಸ್ಪಷ್ಟವಾಗಿದೆ.
ಎರಡೂ ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆ
ನಂಜನಗೂಡು ಮತ್ತು ಗುಂಡ್ಲುಪೇಟೆ ಕಾಂಗ್ರೆಸ್ಸಿನ ಭದ್ರಕೋಟೆ ಎಂಬುದು ತಲೆತಲಾಂತರದಿಂದ ಕಂಡುಕೊಂಡ ಸಂಗತಿ. ಇವೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದ್ದು ಕಡಿಮೆಯೆ. ನಂಜನಗೂಡಿನಲ್ಲಿ ವಿ ಶ್ರೀನಿವಾಸ್ ಪ್ರಸಾದ್ ಮತ್ತು ಗುಂಡ್ಲುಪೇಟೆಯಲ್ಲಿ ಮಹದೇವ್ ಪ್ರಸಾದ್ ಗೆಲ್ಲುತ್ತಲೇ ಬಂದವರು. ಹಾಗೆಯೆ ಕ್ಷೇತ್ರಕ್ಕಾಗಿ ಕೆಲಸವನ್ನೂ ಮಾಡಿದ್ದಾರೆ. ಬಿಜೆಪಿ ಇಲ್ಲಿ ಏನಿದ್ದರೂ ಹೋಳು ಉಪ್ಪಿನಕಾಯಿಯಷ್ಟೆ.
ಮಾಡಿದ ಅಭಿವೃದ್ಧಿ ಕಾರ್ಯವೇ ಬಂಡವಾಳ
ಕಾಂಗ್ರೆಸ್ ಬಗ್ಗೆ ಇಲ್ಲಿನ ಜನರಿಗೆ ಅಪಾರವಾದ ವಿಶ್ವಾಸ. ಮಹದೇವ್ ಪ್ರಸಾದ್ ಗುಂಡ್ಲುಪೇಟೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದ್ದಾರೆ. ಇದನ್ನೇ ಕಾಂಗ್ರೆಸ್ ನಾಯಕರು ಜನರಲ್ಲಿ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದು ವರದಾನವಾಯಿತು. ಕಾಂಗ್ರೆಸ್ ಪಕ್ಷ ಈಗಲೂ ಅಧಿಕಾರದಲ್ಲಿ ಇರುವುದರಿಂದ ಜನರಿಗೂ ಕಾಂಗ್ರೆಸ್ಸಿನಲ್ಲಿ ಇನ್ನಷ್ಟು ವಿಶ್ವಾಸ ಹುಟ್ಟಿತು.
ಶ್ರೀನಿವಾಸ್ ಪ್ರಸಾದ್ ಪ್ರಚಾರಕ್ಕೆ ಬಾರದಿರುವುದು
ಶ್ರೀನಿವಾಸ್ ಪ್ರಸಾದ್ ಅವರು ಕೆಲ ಬಹಿರಂಗ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದು ಬಿಟ್ಟರೆ ಮನೆಮನೆ ಕದವನ್ನು ತಟ್ಟಲೇ ಇಲ್ಲ. ಪ್ರಸಾದ್ ಅವರ ಅನಾರೋಗ್ಯ ಎಲ್ಲರಿಗೂ ತಿಳಿದ ಸಂಗತಿ. ಈ ಕಾರಣದಿಂದಾಗಿಯೇ ಅವರನ್ನು ಸಿದ್ದರಾಮಯ್ಯ ಕೂಡ ದೂರವಿಟ್ಟಿದ್ದರು. ಶ್ರೀನಿವಾಸ್ ಅವರು ಪ್ರಚಾರದುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುತ್ತಲೇ ಹೋದರು. ಶ್ರೀನಿವಾಸ್ ಪ್ರಚಾರಕ್ಕೆ ಬಾರದ್ದದಿಂದ ಸಹಜವಾಗಿ ಮತದಾರರ ಒಲವು ಕಳಲೆಯತ್ತ ಹೊರಳಿತು.
ಪ್ರಭಾವ ಬೀರದ ಎಸ್ಸೆಂ ಕೃಷ್ಣ
ಕಾಂಗ್ರೆಸ್ಸಿನಲ್ಲಿ ಮೂಲೆಗುಂಪಾಗಿದ್ದ ಎಸ್ಸೆಂ ಕೃಷ್ಣ ಇದೇ ಸಮಯದಲ್ಲಿ ಬಿಜೆಪಿಯನ್ನು ಸೇರಿದ್ದು ಕಾಂಗ್ರೆಸ್ಸಿಗೆ ಒಂದು ರೀತಿಯಲ್ಲಿ ಲಾಭಕರವಾಗಿಯೇ ಪರಿಣಮಿಸಿತು. ಕೃಷ್ಣ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಕೇವಲ ಒಂದು ದಿನ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದ ಕೃಷ್ಣ ಮತದಾರರ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಕೃಷ್ಣರನ್ನು ಮತ್ತೆ ಯಾವ ರೀತಿ ಪಕ್ಷದಲ್ಲಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಬಿಜೆಪಿ ಚಿಂತಿಸುವಂತೆ ಮಾಡಿದೆ ಈ ಚುನಾವಣೆ.
ಗೀತಾ ವಿರುದ್ಧ ಪ್ರತಾಪ್ ಬೇಕಾಬಿಟ್ಟಿ ಹೇಳಿಕೆ
ಕಾಂಗ್ರೆಸ್ಸಿಗೆ ಎಲ್ಲಕ್ಕಿಂತ ಹೆಚ್ಚಿನ ಪರಿಣಾಮ ಬೀರಿದ್ದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತಿನ ಭರದಲ್ಲಿ ಅಸಂಬದ್ಧ ಹೇಳಿಕೆ ನೀಡಿದ್ದು. ಹಾಲು ತುಪ್ಪ, ಗೂಟದ ಕಾರಿನ ಈ ಹೇಳಿಕೆಯಿಂದಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಜೊತೆಗೆ ಗೀತಾ ಮಹದೇವ್ ಪ್ರಸಾದ್ ಅವರು ಕಂಬನಿ ಮಿಡಿದಿದ್ದು, ಮತದಾರರ ಹೃದಯ ಅವರಿಗಾಗಿ ಮಿಡಿಯುವಂತೆ, ಮರುಗುವಂತೆ ಮಾಡಿದ್ದು ಸುಳ್ಳಲ್ಲ.