FACT CHECK: ಆಡಿಯೋದಲ್ಲಿ ಇರುವುದು ಡಾ.ದೇವಿ ಶೆಟ್ಟಿ ಧ್ವನಿ ಅಲ್ಲ!
ಕರ್ನಾಟಕ, ಮಾರ್ಚ್ 19: ಕೊರೊನಾ ವೈರಸ್ ಆತಂಕದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯ ಹಾವಳಿ ಕೂಡ ಹೆಚ್ಚಾಗಿದೆ. ನಿನ್ನೆಯಷ್ಟೇ (ಬುಧವಾರ, ಮಾರ್ಚ್ 18) ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ರವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೊಂದು ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಎಲ್ಲೆಡೆ ಹರಿದಾಡಿದ್ದ ಆ ಆಡಿಯೋದಲ್ಲಿ, ''ಭಾರತದಲ್ಲಿರುವ ಜನಸಂಖ್ಯೆಗೆ ಹೋಲಿಸಿದರೆ, ದೇಶದಲ್ಲಿರುವ ಕೋವಿಡ್-19 ಪರೀಕ್ಷಾ ಕಿಟ್ ಗಳ ಸಂಖ್ಯೆ ತೀರಾ ಕಡಿಮೆ. ಹೀಗಾಗಿ, ಸಾಮಾನ್ಯ ಜ್ವರ ಕಾಣಿಸಿಕೊಳ್ಳುವ ಪ್ರತಿಯೊಬ್ಬರಿಗೂ ಕೋವಿಡ್-19 ಪರೀಕ್ಷೆ ಮಾಡಲು ಸಾಧ್ಯವಿಲ್ಲ'' ಎಂದು ಹೇಳಲಾಗಿತ್ತು.
ಕೇರಳದ ಕೊರೊನಾ ಪೀಡಿತನಿಗೂ ವರದಾನವಾಗುತ್ತಾ Anti-HIV ಡ್ರಗ್ಸ್?
ಆದ್ರೀಗ, ನಾರಾಯಣ ಹೆಲ್ತ್ ನೀಡಿರುವ ಖಚಿತ ಮಾಹಿತಿ ಪ್ರಕಾರ ಆ ಆಡಿಯೋದಲ್ಲಿರುವುದು ಡಾ.ದೇವಿ ಶೆಟ್ಟಿ ಧ್ವನಿ ಅಲ್ಲ. ನಾರಾಯಣ ಹೆಲ್ತ್ ಚೇರ್ಮೆನ್ ಮತ್ತು ಫೌಂಡರ್ ಡಾ.ದೇವಿ ಶೆಟ್ಟಿ ಹೆಸರಿನಲ್ಲಿ ಯಾರೋ ಆ ಆಡಿಯೋನ ವೈರಲ್ ಮಾಡಿದ್ದಾರೆ.
ಸ್ಪಷ್ಟನೆ ಕೊಟ್ಟಿರುವ ನಾರಾಯಣ ಹೆಲ್ತ್
''ಈ ಆಡಿಯೋ ಕ್ಲಿಪ್ ನಲ್ಲಿರುವುದು ಡಾ.ದೇವಿ ಶೆಟ್ಟಿ ಧ್ವನಿ ಅಲ್ಲ. ತಪ್ಪಾಗಿ ಹೆಸರಿಸಲಾಗಿದೆ. ಹೀಗಾಗಿ, ಆ ಆಡಿಯೋನ ದಯವಿಟ್ಟು ಡಿಲೀಟ್ ಮಾಡಿ'' ಎಂದು ಸೋಷಿಯಲ್ ಮೀಡಿಯಾದಲ್ಲಿ ನಾರಾಯಣ ಹೆಲ್ತ್ ಸ್ಪಷ್ಟ ಪಡಿಸಿದೆ.
ಆಡಿಯೋ ಕ್ಲಿಪ್ ನಲ್ಲಿ ಏನಿತ್ತು.?
ಡಾ.ದೇವಿ ಶೆಟ್ಟಿ ಹೆಸರಿನಲ್ಲಿ ವೈರಲ್ ಆಗಿದ್ದ 'ಫೇಕ್' ಆಡಿಯೋದಲ್ಲಿ, ''ಕೊರೊನಾ ಸೋಂಕಿತರು ಅಥವಾ ಶಂಕಿತರು ಸೇರಿದಂತೆ ಎಲ್ಲರೂ ಆಸ್ಪತ್ರೆಗೆ ಹೋಗಿ ಅನವಶ್ಯಕವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಡಿ. ಭಾರತದಲ್ಲಿ ಸಮಸ್ಯೆ ಇದೆ. 1.4 ಬಿಲಿಯನ್ ಜನಸಂಖ್ಯೆ ಭಾರತದಲ್ಲಿದೆ. 1.50 ಲಕ್ಷ ಕೋವಿಡ್ ಪರೀಕ್ಷಾ ಕಿಟ್ ಗಳು ಮಾತ್ರ ಇವೆ. ಹಲವು ಮಂದಿಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಇರುವುದಿಲ್ಲ. 85% ರಷ್ಟು ಮಂದಿಗೆ ಸಾಮಾನ್ಯ ಜ್ವರ ಹಾಗೂ ಉಸಿರಾಟದ ಸಮಸ್ಯೆಗಳು ಮಾತ್ರ ಕಾಣಿಸಿಕೊಳ್ಳುತ್ತವೆ'' ಎಂದು ಹೇಳಲಾಗಿತ್ತು.
ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!
ಆಡಿಯೋ ಕ್ಲಿಪ್ ನಲ್ಲಿ ಏನೇನು ಹೇಳಲಾಗಿತ್ತು.?
ಜೊತೆಗೆ ''ಯಾರಿಗೇ ಜ್ವರ ಅಥವಾ ನೆಗಡಿ ಬಂದರೆ.. ತಕ್ಷಣ ಪ್ರತ್ಯೇಕಗೊಳ್ಳಿರಿ. ನಿಮ್ಮ ದೇಹದಲ್ಲಿ ಬರುವ ರೋಗದ ಲಕ್ಷಣಗಳ ಮೇಲೆ ಗಮನ ಹರಿಸಿ. ಮೊದಲನೇ ದಿನ ನಿಮಗೆ ಸುಸ್ತು ಕಾಣಿಸಿಕೊಳ್ಳಬಹುದು. ಮೂರನೇ ದಿನ ಜ್ವರ, ಕೆಮ್ಮು, ಗಂಟಲು ಕರೆತ ಬರಬಹುದು. ನಾಲ್ಕನೇ ದಿನ ಆಗಾಗ ತಲೆನೋವು ಬಾಧಿಸಬಹುದು. ಐದನೇ ದಿನ ಗ್ಯಾಸ್ಟ್ರೋ-ಇನ್ಟೆಸ್ಟೈನ್ ಸಮಸ್ಯೆ ಅಥವಾ ಬೇದಿ ಆಗಬಹುದು. ಆರನೇ ಮತ್ತು ಏಳನೇ ದಿನ ಮೈ-ಕೈ ನೋವು ಜಾಸ್ತಿಯಾಗಬಹುದು, ಬೇದಿ ಜಾಸ್ತಿ ಆಗುವ ಸಂಭವವೂ ಇರುತ್ತದೆ. ಎಂಟನೇ ದಿನ ಬಹುತೇಕರಿಗೆ ರೋಗದ ಲಕ್ಷಣಗಳು ಕಡಿಮೆ ಆಗುತ್ತದೆ. ಎಂಟನೇ ಮತ್ತು ಒಂಬತ್ತನೇ ದಿನದ ಹೊತ್ತಿಗೆ ಜ್ವರ, ಮೈ-ಕೈ ನೋವು ಕಮ್ಮಿಯಾದರೆ, ಕೆಮ್ಮು ಮತ್ತು ನೆಗಡಿ ಮಾತ್ರ ಸ್ವಲ್ಪ ಹಾಗೇ ಇದ್ದರೆ, ನಿಮ್ಮ ದೇಹ ಕೊರೊನಾ ವೈರಸ್ ಅನ್ನು ತಡೆಯುವ ಪ್ರತಿರೋಧ ಶಕ್ತಿ ಹೊಂದಿದೆ ಎಂದರ್ಥ. ಎಂಟನೇ ದಿನದ ಹೊತ್ತಿಗೆ ನೀವು ಚೇತರಿಸಿಕೊಳ್ಳದೆ ಇದ್ದರೆ, ನಿಮ್ಮ ಆರೋಗ್ಯ ಹದಗೆಡುತ್ತಿದೆ ಎಂದು ನಿಮಗೆ ಅನಿಸಿದರೆ ಆಗ ಕೋವಿಡ್-19 ಸಹಾಯವಾಣಿಗೆ ಕರೆ ಮಾಡಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಯಾಕಂದ್ರೆ, ಭಾರತದಲ್ಲಿ ಟೆಸ್ಟ್ ಸೆಂಟರ್ ಗಳು ಕಮ್ಮಿ ಇವೆ. ಹೀಗಾಗಿ, ಯಾರ್ಯಾರಿಗೆ ಸಾಮಾನ್ಯ ಜ್ವರ ಬಂದಿದೆಯೋ, ಅವರೆಲ್ಲರಿಗೂ ಕೋವಿಡ್-19 ಟೆಸ್ಟ್ ಮಾಡಲು ಸಾಧ್ಯವಿಲ್ಲ'' ಎಂದು ಹೇಳಲಾಗಿತ್ತು.
ಆಡಿಯೋ ಕ್ಲಿಪ್ ನಲ್ಲಿದ್ದ ಸಂದೇಶ
ಸಾಲದಕ್ಕೆ ''ವಿದ್ಯಾವಂತ ನಾಗರೀಕರು ತಾಳ್ಮೆಯಿಂದ ಕಾದು, ರೋಗದ ಲಕ್ಷಣಗಳ ಬಗ್ಗೆ ಗಮನವಿಡಿ. ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ ಎಂದಾಗ ಮಾತ್ರ ತಪಾಸಣೆ ಮಾಡಿಸಿಕೊಳ್ಳಿ, ಪ್ಲೀಸ್. ನಿಮಗೆ ಆತಂಕವಾದ ಕೂಡಲೆ ಟೆಸ್ಟ್ ಮಾಡಿಸಿಕೊಳ್ಳಬೇಡಿ. ಯಾಕಂದ್ರೆ, ಬೇಡಿಕೆಗೆ ಅನುಗುಣವಾದಷ್ಟು ನಮ್ಮಲ್ಲಿ ಪರೀಕ್ಷಕಗಳಿಲ್ಲ. N95 ಮಾಸ್ಕ್ ಗಳನ್ನು ಪಡೆಯಲು ನಮ್ಮ ಆಸ್ಪತ್ರೆಯ ಸಿಬ್ಬಂದಿಗಳೇ ಒದ್ದಾಡುತ್ತಿದ್ದಾರೆ. ಭಾರತದಲ್ಲಿ ಎಲ್ಲರೂ ಮಾಸ್ಕ್ ಧರಿಸುವ ಅನಿವಾರ್ಯತೆ ಇಲ್ಲ. ಮಾಸ್ಕ್ ಗಳಿಗಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಹೆಲ್ತ್ ವರ್ಕರ್ಸ್ ಗೆ ಮಾಸ್ಕ್ ಇಲ್ಲದಂತಾಗಿದೆ. ಹೀಗಾಗಿ, ಬ್ಲಡ್ ಟೆಸ್ಟ್ ಕೂಡ ವೇಸ್ಟ್ ಮಾಡಬೇಡಿ'' ಎಂದು ಆಡಿಯೋದಲ್ಲಿ ಹೇಳಲಾಗಿತ್ತು. ಆದ್ರೀಗ, ಆ ಆಡಿಯೋ ಡಾ.ದೇವಿ ಶೆಟ್ಟಿ ರವರದ್ದಲ್ಲ ಎಂಬುದು ಸ್ಪಷ್ಟವಾಗಿದೆ.