ಕೋವಿಡ್-19 ನಿಂದ ಮೃತಪಟ್ಟವರ ಅಂತಿಮ ದರ್ಶನ ಪಡೆಯಬಹುದಾ? ತಜ್ಞರ ಅಭಿಪ್ರಾಯ ಇಲ್ಲಿದೆ!
ಬೆಂಗಳೂರು, ಜು. 10: ಕೊರೊನಾವೈರಸ್ ಸೋಂಕಿಗಿಂತ, ಅದರಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡುವ ಪರಿಯನ್ನು ನೋಡಿಯೇ ಜನರು ಭಯ ಭೀತರಾಗಿದ್ದಾರೆ. ದೂರದ ಇಟಲಿ, ಅಮೆರಿಕದಲ್ಲಿ ಸಾಮೂಹಿಕ ಅಂತ್ಯಕ್ರಿಯೆಯನ್ನು ನೋಡಿ ಅಯ್ಯೋ ಎಂದಿದ್ದ ಭಾವನಾತ್ಮಕ ಭಾರತೀಯರು, ಇದೀಗ ಇಲ್ಲಿ ಅದಕ್ಕಿಂತ ಕಡೆಯಾಗಿ ಮೃತದೇಹಗಳ ವಿಲೇವಾರಿಯನ್ನು ನಮ್ಮಲ್ಲಿ ಮಾಡುತ್ತಿರುವುದನ್ನು ನೋಡಿ ಘಾಸಿಗೊಂಡಿದ್ದಾರೆ.
Recommended Video
ಹೀಗಾಯೇ ಕೊರೊನಾ ವೈರಸ್ ಸೋಂಕಿತರನ್ನು ಜನರು ನೋಡುವ ರೀತಿಯೆ ಬದಲಾಗಿದೆ. ಹಿಂದೆ ಎಚ್ಐವಿ ಸೋಂಕಿತರನ್ನು ನೋಡುತ್ತಿದ್ದಕ್ಕಿಂತ ಕಡೆಯಾಗಿ ಈಗ ಕೋವಿಡ್-19 ಸೋಂಕಿತರನ್ನು ಜನರು ಕಾಣುತ್ತಿದ್ದಾರೆ. ನಿಜಕ್ಕೂ ಅಷ್ಟೊಂದು ಭಯ ಬೇಕಾ? ಕೊರೊನಾ ವೈರಸ್ ಸೋಂಕಿತರ ಅಂತ್ಯಕ್ರಿಯೆಯನ್ನು ಭಯಾನಕವಾಗಿ ಮಾಡಬೇಕಾ? ಮೃತರ ಕುಟುಂಬಸ್ಥರು ಪಿಪಿಇ ಕಿಟ್ ಇಲ್ಲದೆಯೆ ಅಂತಿಮ ದರ್ಶನ ಪಡೆಯಬಹುದಾ? ಈ ಎಲ್ಲದಕ್ಕೂ ತಜ್ಞರು ಕೊಟ್ಟಿರುವ ವೈಜ್ಞಾನಿಕ ಅಭಿಪ್ರಾಯ, ಸಲಹೆಗಳು ಹೀಗಿವೆ.
ಸೋಂಕಿನಿಂದ ಮೃತರ ಅಂತ್ಯಕ್ರಿಯೆ
ಕೊರೊನಾ ವೈರಸ್ ಸೋಂಕಿನಿಂದ ಇಟಲಿ, ಅಮೆರಿಕದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ಮಾಡಿರುವ, ಮಾಡುತ್ತಿರುವ ಕುರಿತು ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು. ಕೋವಿಡ್ ಸೋಂಕಿತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಕೊಡುವುದಿಲ್ಲ, ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂಬ ವರದಿಗಳು ಪ್ರಸಾರವಾಗಿದ್ದವು. ಜೊತೆಗೆ ಒಂದಿಷ್ಟು ಹಾಲಿವುಡ್ ಸಿನಿಮಾದ ದೃಶ್ಯಗಳನ್ನು ಎಡಿಟ್ ಮಾಡಿ ಅಂತ್ಯಕ್ರಿಯೆ ಎಂದರೆ ಭಯಾನಕ ಎಂಬಂತೆ ತೋರಿಸಲಾಗಿತ್ತು.
ಬೆಂಗಳೂರಿನಲ್ಲಿ ಮೃತ ಕೊವಿಡ್ 19 ರೋಗಿಗಳ ಅಂತ್ಯಕ್ರಿಯೆ ಹೇಗೆ?
ಅಂತಹ ಘಟನೆಗಳು ನಮ್ಮ ರಾಜ್ಯದಲ್ಲಿಯೇ ನಡೆದ ಮೇಲೆ ಬಳಿಕ ಜನರಲ್ಲಿದ್ದ ಅಲ್ಪಸ್ವಲ್ಪ ಧೈರ್ಯವೂ ಉಡುಗಿ ಹೋಯಿತು. ಕರೋನಾ ವೈರಸ್ ಕುರಿತು ಮತ್ತಷ್ಟು ಆತಂಕ ಶುರುವಾಗಲು ಅದು ಕಾರಣವಾಗಿದೆ. ಆದರೆ ಕೊರೊನಾ ವೈರಸ್ನಿಂದ ಮೃತಪಟ್ಟವರ ಅಂತಿಮ ದರ್ಶನವನ್ನು ಕುಟುಂಬಸ್ಥರು ಪಡೆಯಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಅಂತಿಮ ದರ್ಶನ ಪಡೆಯಬಹುದಾ?
ಖಂಡಿತವಾಗಿಯೂ ಕೊರೊನಾ ವೈರಸ್ನಿಂದ ಮೃತಪಟ್ಟವರ ಅಂತಿಮ ದರ್ಶನವನ್ನು ಪಡೆಯಬಹುದು ಎಂದು ಡಾ. ಆಂಜನಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಡಾ. ಟಿ.ಎಚ್. ಆಂಜನಪ್ಪ ಅವರು, ವೈರಸ್ ಜೊತೆಯಲ್ಲಿಯೆ ಬದುಕುವುದನ್ನು ನಾವು ಕಲಿತುಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ವೈರಲ್ ಆಯ್ತು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಶವಸಂಸ್ಕಾರದ ವಿಡಿಯೋ
ಕೊರೊನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಆದರೆ ಒಂದು ಮಾತು ವೈದ್ಯನಾಗಿ ವೈಜ್ಞಾನಿಕವಾಗಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಸೋಂಕಿತ ವ್ಯಕ್ತಿ ಸತ್ತಾಗ ಆತನೊಂದಿಗೆ ವೈರಸ್ ಕೂಡ ಸಾಯುತ್ತದೆ. ಸ್ವಲ್ಪ ಗಂಟೆಗಳ ಕಾಲ ಮೃತ ದೇಹದಲ್ಲಿ ವೈರಸ್ ಇರಬಹುದು. ಆದರೆ ಮನುಷ್ಯನ ಜೀವಂತ ಜೀವಕೋಶವಿಲ್ಲದೆ ಕೋವಿಡ್-19 ವೈರಸ್ ಬದುಕುವುದಿಲ್ಲ. ಜೊತೆಗೆ ಮೃತದೇಹವನ್ನು ಪ್ಲಾಸ್ಟಿಕ್ನಿಂದ ಸಂಪೂರ್ಣವಾಗಿ ಮುಚ್ಚಿದ ಬಳಿಕ ಅಲ್ಲಿಂದ ವೈರಸ್ ಹರಡುವುದಿಲ್ಲ, ಅದಕ್ಕೆ ಅವಕಾಶವೂ ಇಲ್ಲ ಎಂದಿದ್ದಾರೆ.
ಹೀಗಾಗಿ ಒಂದು ಬಾರಿ ಮೃತ ಸೋಂಕಿತ ವ್ಯಕ್ತಿಯ ದೇಹವನ್ನು ಸರಿಯಾಗಿ ಹಾಗೂ ಸಂಪೂರ್ಣವಾಗಿ ಮುಚ್ಚಿದ ಬಳಿಕ ಕುಟುಂಬಸ್ಥರಿಗೆ ಅಂತಿಮ ದರ್ಶನದ ಅವಕಾಶ ಕಲ್ಪಿಸಬಹುದು. ಮೃತ ವ್ಯಕ್ತಿಯ ಮಕ್ಕಳು, ಮೊಮ್ಮಕ್ಕಳು, ತಂದೆ-ತಾಯಿ ಅಥವಾ ಕುಟುಂಬಸ್ಥರು ಒಂದು ಬಾರಿ ಮೃತದೇಹವನ್ನು ಮುಟ್ಟಿ ನಮಸ್ಕಾರ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಮೃತ ದೇಹದಿಂದ ವೈರಸ್ ಹೊರಗೆ ಬರುವುದೂ ಇಲ್ಲ. ಮುಟ್ಟಿ ಕೈಮುಗಿದ ಮೇಲೆ ಬೇಕಾದರೆ ಸೋಪ್ ಹಚ್ಚಿಕೊಂಡು ಒಂದೂವರೆ ನಿಮಿಷ ಸಂಪೂರ್ಣವಾಗಿ ಕೈ ತೊಳೆದುಕೊಳ್ಳಿ ಎಂದು ಡಾ. ಆಂಜನಪ್ಪ ಅವರು ಸಲಹೆ ಕೊಟ್ಟಿದ್ದಾರೆ.
ಮೃತದೇಹದಿಂದ ವೈರಸ್ ಹರಡಲ್ಲ
ಮೃತದೇಹದ ಅಂತಿಮ ಸಂಸ್ಕಾರ ಮಾಡುವವರು ಪಿಪಿಇ ಕಿಟ್ ಹಾಕಿಕೊಳ್ಳವುದು ಸರಿಯಿದೆ. ಆದರೆ ಸಾವು ನೋವಿನ ಬಗ್ಗೆ ಆತಂಕಕಾರಿಯಾಗಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ಸರಿಯಲ್ಲ. ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರದಲ್ಲಿ ಮನೆಯವರೂ ಭಾಗವಹಿಸಲು ಆಗುತ್ತಿಲ್ಲ. ಇದು ಆತಂಕಕಾರಿ ವಿಚಾರ. ಸಮಾಜದಲ್ಲಿ ಇದರಿಂದ ಅರ್ಧ ಜನರು ಗಾಬರಿ ಆಗುತ್ತಿದ್ದಾರೆ. ತನ್ನ ತಂದೆ-ತಾಯಿಯನ್ನೇ ನೋಡುವ ಅವಕಾಶವನ್ನೇ ನಮಗೆ ಕೊಡಲಿಲ್ಲ ಅಂತಾ ಹೇಳುತ್ತಿದ್ದಾರೆ. ಮೃತ ದೇಹಕ್ಕೆ ಅಂತಿಮ ಸಂಸ್ಕಾರ ಮಾಡುವಾಗ ಹೆದರಿಕೊಂಡು, ನಿರ್ಲಕ್ಷಿಸಿ ಗುಂಡಿಯಲ್ಲಿ ಬೀಸಾಕುವಂತಹ ಅವಶ್ಯಕತೆ ಅಂತೂ ಇಲ್ಲವೇ ಇಲ್ಲ.
ಮೃತ ದೇಹವನ್ನು ಅವರವರ ಸಂಪ್ರದಾಯಕ್ಕೆ ತಕ್ಕಂತೆ ಹೂಳಲು ಬಹುದು, ಅಗ್ನಿಸಂಸ್ಕಾರವನ್ನೂ ಮಾಡಬಹುದು. ಮೃತರ ಕುಟುಂಬಸ್ಥರ ಮನಸ್ಸಿಗೆ ನೋವಾಗುವಂತೆ ಮಾಡಬಾರದು. ಸಂಪೂರ್ಣವಾಗಿ ಕವರ್ ಮಾಡಲಾಗಿರುವ ದೇಹವನ್ನು ಹೂಳಬಹುದು ಎಂದಿದ್ದಾರೆ.
ಅತ್ಯಂತ ಆಳದಲ್ಲಿ ಹೂಳಬೇಕಾ?
ಎಂಟು ಅಡಿಗಳ ಆಳದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಹೂಳಲಾಗುತ್ತಿದೆ. ಇದಕ್ಕೆ ಹಿಂದಿನ ಒಂದು ಕಾರಣ ಇದೆ. ಕ್ರಿ.ಶ. 1667ರಲ್ಲಿ ಇಂಗ್ಲೆಂಡ್ನಲ್ಲಿ ಪ್ಲೇಗ್ ಬಂದಾಗ ಅಲ್ಲಿನ ಜನ ಸೋಂಕಿತ ಮೃತದೇಹಗಳನ್ನು ಎಂಟು ಅಡಿ ಆಳದಲ್ಲಿ ಹೂಳದಿದ್ದರೆ ಪ್ಲೇಗ್ ಬ್ಯಾಕ್ಟೆರಿಯಾ ಮಣ್ಣಿನಿಂದ ಮೇಲೆ ಬರುತ್ತದೆ ಎಂದುಕೊಂಡಿದ್ದರು. ಹೀಗಾಗಿ ಆಳವಾಗಿ ಹೂಳಲು ಆರಂಭಿಸಿದ್ದರು.
ಅದನ್ನು ಈಗಲೂ ಅನುಸರಿಸಲಾಗುತ್ತಿದೆ. ಈಗ ವಿಜ್ಞಾನ ಬಹಳಷ್ಟು ಮುಂದುವೆದಿದೆ. ಮೃತದೇಹದಲ್ಲಿ ವೈರಸ್ ಮೊದಲೇ ಸತ್ತಿರುತ್ತದೆ. ಹೀಗಾಗಿ ಕೊರೊನಾ ವೈರಸ್ ಮಣ್ಣಿನಿಂದ ಮೇಲೆ ಬರಲು ಆಗುವುದಿಲ್ಲ. ಅನಗತ್ಯವಾಗಿ ಮೃತರ ಅಂತಿಮ ಸಂಸ್ಕಾರದ ಬಗ್ಗೆ ಆತಂಕಬೇಡ ಎಂದು ಡಾ. ಆಂಜನಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಪ್ಲಾಸ್ಟಿಕ್ನಿಂದ ಸುತ್ತಿ ಹೂಳುವುದು
ತರಕಾರಿ ತರಲಿಕ್ಕೂ ಕೂಡ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಹೀಗಿದ್ದಾಗ ಮೃತದೇಹವನ್ನು ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿ ಹೂಳುವುದರಿಂದ ಅದು ಕೊಳೆಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಸರ್ಕಾರ ಹಾಗೆ ಮಾಡುತ್ತಿರುವುದು ಯಾಕೆ ಅಂತಾ ನನಗೆ ಆಶ್ಚರ್ಯವಾಗುತ್ತಿದೆ ಎಂದು ಡಾ. ಆಂಜನಪ್ಪ ಅವರು ಹೇಳಿದ್ದಾರೆ.
ಪ್ಲಾಸ್ಟಿಕ್ನಲ್ಲಿ ಮೃತದೇಹವನ್ನಿಟ್ಟು ಹೂಳುವುದರಿಂದ ಅಥವಾ ಸುಡುವುದರಿಂದ ಆಗುವ ಒಳ್ಳೆಯ ಪರಿಣಾಮಗಳಿಗಿಂತ ಕೆಟ್ಟ ಪರಿಣಾಮಗಳೇ ಹೆಚ್ಚು. ಹೀಗಾಗಿ ಈ ಕುರಿತು ಸರ್ಕಾರ, ತಜ್ಞರು ಮತ್ತಷ್ಟು ತಿಳಿವಳಿಕೆಯನ್ನು ಮಾಡಬೇಕಿದೆ. ಜೊತೆಗೆ ಸೋಂಕಿತರ ಚಿಕಿತ್ಸೆಗೆ ಕೊಡುವಷ್ಟು ಮಹತ್ವವನ್ನು ಮೃತದೇಹದ ಅಂತಿಮ ಸಂಸ್ಕಾರಕ್ಕು ಕೊಡಬೇಕು. ಅದಕ್ಕೆ ಸ್ಪಷ್ಟವಾದ ವೈಜ್ಞಾನಿಕ ತಿಳಿವಳಿಕೆಯನ್ನು ಕೊಡಬೇಕು ಎಂಬ ಒತ್ತಾಯ ಜನರಿಂದಲೇ ಕೇಳಿ ಬರುತ್ತಿವೆ.
ಡೆಡ್ಲಿ ವೈರಸ್ ಅಲ್ಲ
ಕೊರೊನಾ ವೈರಸ್ ಡೆಡ್ಲಿ ವೈರಸ್ ಅಲ್ಲವೇ ಅಲ್ಲ. ಆದರೆ ಅದು ಹರಡುತ್ತಿರುವ ವಿಧಾನ ಡೆಡ್ಲಿ ಆಗಿದೆ. ಚೀನಾದಲ್ಲಿ ಕಾಣಿಸಿಕೊಂಡ ವೈರಸ್ ಈಗ ಜಗತ್ತಿನ 220 ದೇಶಗಳಲ್ಲಿ ಹರಡಿಕೊಂಡಿರುವುದು ಇದೇ ಕಾರಣದಿಂದ.
ಸೋಂಕಿಗೆ ತುತ್ತಾಗಿ ನೆಗಡಿ, ಕೆಮ್ಮು, ಜ್ವರದಿಂದ ಬಳಲಿದರೂ ಅವರು ಗುಣಮುಖರಾಗುತ್ತಾರೆ. ಆಯುರ್ವೇದ, ಅಲೋಪತಿ ಅಥವಾ ಹೋಮಿಯೋಪತಿ ಚಿಕಿತ್ಸೆಯಿಂದಲೂ ಗುಣಮುಖರಾಗಬಹುದು. ಅದರಲ್ಲಿ ಯಾವುದೇ ಆತಂಕ ಬೇಡ. ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದಿಲ್ಲ ಎಂಬುದು ನಿಜ. ಅದಕ್ಕೆ ಸೋಂಕು ದೃಢಪಟ್ಟಿರುವ ಎಲ್ಲರನ್ನು ಅವೈಜ್ಞಾನಿಕವಾಗಿ ಆಸ್ಪತ್ರೆಗೆ ದಾಖಲು ಮಾಡಿರುವುದು ಕಾರಣವೇ ಹೊರತು ಬೇರೆ ಆತಂಕ ಬೇಡ. ಗಾಳಿಯಲ್ಲಿ ವೈರಸ್ ಹಾರಾಡುತ್ತದೆ ಎಂಬುದೂ ಕೂಡ ಪೂರ್ಣವಾಗಿ ಸತ್ಯವಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.