ಲಾಕ್ಡೌನ್ ತೆರವು: ಸರ್ಕಾರಕ್ಕೆ ತಜ್ಞರ ವರದಿ ಸಲ್ಲಿಕೆ, ಸಂಪುಟ ಸಭೆಯಲ್ಲಿ ತೀರ್ಮಾನ
ಬೆಂಗಳೂರು, ಏ. 08: ಲಾಕ್ಡೌನ್ ತೆರವು ಸೇರಿದಂತೆ ಮುಂದಿನ ಹಂತದಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಟಾಸ್ಕ್ಫೋರ್ಸ್ ನೀಡಿದೆ. ಶಿಫಾರಸು ಸ್ವೀಕರಿಸುವ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಜ್ಞರ ಸಮಿತಿ ಜೊತೆಗೆ ಸುದೀರ್ಘ ಸಭೆ ನಡೆಸಿದರು. ಲಾಕ್ಡೌನ್ ತೆರವು ಸೇರಿದಂತೆ 50ಕ್ಕೂ ಹೆಚ್ಚು ಶಿಫಾರಸುಗಳನ್ನು ತಜ್ಞರ ಸಮಿತಿ ತನ್ನ ವರದಿಯಲ್ಲಿ ಸೇರಿಸಿದೆ.
ಡಾ. ದೇವಿಶೆಟ್ಟಿ ನೇತೃತ್ವದ ಟಾಸ್ಕ್ಫೋರ್ಸ್ ಸಮಿತಿಯಲ್ಲಿ, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್, ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಇದ್ದಾರೆ. ಕೊರೊನಾ ವೈರಸ್ ಹರಡುವಿಕೆ, ಲಾಕ್ಡೌನ್ ಕುರಿತು ಅಧ್ಯಯನ ನಡೆಸಿ ವರದಿಯಲ್ಲಿ ಸಲ್ಲಿಸಲಾಗಿದೆ. ತಜ್ಞರ ವರದಿ ಆಧರಿಸಿ ರಾಜ್ಯ ಸರ್ಕಾರ ಲಾಕ್ಡೌನ್ ತೆರವು ಕುರಿತು ತೀರ್ಮಾನ ತೆಗೆದು ಕೊಳ್ಳಲಿದೆ.
ಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವಿಗೆ ಸಿದ್ಧವಾಗಿದೆ ಸೂತ್ರ
ಲಾಕ್ಡೌನ್ ತೆರವು; 50 ಶಿಫಾರಸುಗಳನ್ನು ಮಾಡಿದ ತಜ್ಞರು
ಲಾಕ್ಡೌನ್ ತೆರವುಗೊಳಿಸುವುದು ಸೇರಿದಂತೆ ಕೊರೊನಾ ವೈರಸ್ ಹರಡದಂತೆ ತಡೆಯಲು 50ಕ್ಕೂ ಹೆಚ್ಚು ಶಿಫಾರಸುಗಳನ್ನು ತಜ್ಞರ ಸಮಿತಿ ಸರ್ಕಾರಕ್ಕೆ ಸೂಚಿಸಿದೆ. ಈಗಾಗಲೇ ಕೋವಿಡ್ 19 ಹಾಟ್ಸ್ಪಾಟ್ ಎಂದು ಗುರುತಿಸಿರುವ ಜಿಲ್ಲೆಗಳಲ್ಲಿ ಏಪ್ರಿಲ್ 30 ವರೆಗೆ ಲಾಕ್ಡೌನ್ ಮುಂದುವರೆಸಲು ಸೂಚಿಸಲಾಗಿದೆ. ಕೋವಿಡ್ 19 ಪ್ರಕರಣಗಳು ಪತ್ತೆಯಾಗಿರದ ಜಿಲ್ಲೆಗಳಲ್ಲಿ ಲಾಕ್ಡೌನ್ ರಿಯಾಯತಿ ಕೊಡಬಹುದು ಎಂದು ಸೂಚಿಸಿದೆ. ಆದರೆ ಜಿಲ್ಲೆಗಳ ಗಡಿಗಳನ್ನು ಸಂಪೂರ್ಣ ಬಂದ್ ಮಾಡುವಂತೆ ಸಲಹೆ ಕೊಡಲಾಗಿದೆ. ಯಾರು ಕೂಡ ಸಂಚಾರ ಮಾಡಲು ಅವಕಾಶ ಕೊಡಬಾರದು. ವಿಮಾನ, ಬಸ್ಸು, ರೈಲು ಹಾಗೂ ಮೆಟ್ರೊ ಟ್ರೇನ್ ಸ್ಥಗಿತ ಮುಂದುವರಿಯಬೇಕು. ಸಾರ್ವಜನಿಕ ಶೌಚಾಲಯ, ಜಿಲ್ಲೆ ಬಸ್ಸು, ಕಾರು, ವಾಹನ ಸಂಚಾರ ಬಂದ್ ಮಾಡಬೇಕು. ಗೂಡ್ಸ್, ಮೆಡಿಕಲ್ ವಾಹನಗಳಿಗೆ ವಿನಾಯಿತಿ ಕೊಡಬೇಕು. ಗುಟ್ಕಾ, ಚ್ಯೂಯಿಂಗ್ ಗಮ್ ಬ್ಯಾನ್ ಮಾಡಬೇಕು. ಪ್ರಮುಖವಾಗಿ 3-4 ವಾರಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಿ ಪರೀಕ್ಷೆ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ.
ಮುಂದಿನ ಆರು ತಿಂಗಳವರೆಗೆ ಹೆಚ್ಚಿನ ಎಚ್ಚರ ಅಗತ್ಯ
ಸಮಿತಿಯು ಲಾಕ್ಡೌನ್ನ್ನು ಹಂತ ಹಂತವಾಗಿ ಸಡಿಲಗೊಳಿಸಿದರು ಮುಂದಿನ ಆರು ತಿಂಗಳ ವರೆಗೆ ಹೆಚ್ಚಿನ ಎಚ್ಚರ ವಹಿಸಬೇಕು. ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಲಾಕ್ ಡೌನ್ ಮುಂದುವರೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಲಾಕ್ಡೌನ್ ಜಾರಿಯಾದ ನಂತರ ನಂತರ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್ಡೌನ್ ಮಾಡಬೇಕು. ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು. ಶಾಲೆ ಕಾಲೇಜುಗಳನ್ನು ಮೇ 31ರ ವರೆಗೆ ಮುಚ್ಚಬೇಕು. ಎಸಿ ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು. ಐಟಿ, ಬಿಟಿ ಉದ್ಯಮಗಳು, ಅತ್ಯಾವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು. ಅಂತಾರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು. ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು. ಕೋವಿಡ್ ಪ್ರಕರಣಗಳು ವರದಿಯಾದಾಗ ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು. ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Exclusive: ಕರ್ನಾಟಕ ಕೊರೊನಾ ಹಾಟ್ಸ್ಪಾಟ್ನ ಪ್ರತ್ಯಕ್ಷ ವರದಿ; ವಿವರಗಳು ಗಂಭೀರ
ಕೇಂದ್ರದ ಮಾರ್ಗಸೂಚಿ, ಸಮಿತಿ ಶಿಫಾರಸುಗಳ ಆಧಾರದಲ್ಲಿ ಕ್ರಮ
ಕೊರೊನಾ ವೈರಸ್ ಹರಡುವಿಕೆ ಬಗ್ಗೆ ಈಗಲೇ ತೀರ್ಮಾನಕ್ಕೆ ಬರದಿರಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಲಾಕ್ಡೌನ್ ಮುಂದುವರೆಸುವಂತೆ ಮನವಿ ಮಾಡಿಕೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನಾಳೆ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ.
ರಾಜ್ಯ ಸಂಪುಟ ಸಭೆಯಲ್ಲಿ ಲಾಕ್ಡೌನ್ ತೆರವು ತೀರ್ಮಾನ
ಡಾ. ದೇವಿಶೆಟ್ಟಿ ಅವರ ನೇತೃತ್ವದ ಸಮಿತಿಯು ಮುಂದಿನ 15 ದಿನಗಳ ಅವಧಿಗೆ ಶಿಫಾರಸುಗಳನ್ನು ಮಾಡಿದೆ. ನಂತರ ಪರಿಸ್ಥಿತಿ ನಂತರ ಮುಂದೆ ಅಧ್ಯಯನ ಮಾಡಿ ತೀರ್ಮಾನ ಕೈಗೊಳ್ಳಲು ಸಲಹೆ ಕೊಡಲಾಗಿದೆ. ನಾಳೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ತಜ್ಞರು ಕೊಟ್ಟಿರುವ ಶಿಫಾರಸುಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಧ್ಯಯನ ವರದಿ ಕೊಟ್ಟಿರುವ ತಜ್ಞರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.