ಕೊಗ್ರೆ ಗ್ರಾಮದಲ್ಲಿ ಎರಡು ತಿಂಗಳಿಂದ ಭೂಕಂಪದ ಅನುಭವ: ಆತಂಕದಲ್ಲಿ ಜನ
ಚಿಕ್ಕಮಗಳೂರು, ಆಗಸ್ಟ್.10: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ ಜನರಿಗೆ ಭೂಕಂಪದ ಅನುಭವವಾಗಿದೆ. ಭೂಮಿ ಒಳಗಿಂದ ಕೇಳಿ ಬಂದ ಭಾರೀ ಸದ್ದಿಗೆ ಮನೆಯಿಂದ ಜನ ಹೊರಬಂದಿದ್ದಾರೆ.
ಕಳೆದೆರಡು ತಿಂಗಳಿಂದ ಆಗಾಗ್ಗೆ ಇಂಥ ಅನುಭವವಾಗುತ್ತಿದ್ದು, ಶಬ್ದವಾದಾಗ ಪಾತ್ರೆ ಹಾಗೂ ಗೃಹಪಯೋಗಿ ವಸ್ತುಗಳು ಕೆಳಗೆ ಬೀಳುತ್ತಿವೆ. ಒಂದೆಡೆ ಮಳೆಯ ಅಬ್ಬರ ಹೆಚ್ಚಾಗಿದ್ದು, ಮತ್ತೊಂದೆಡೆ ಭೂಮಿಯೊಳಗಿಂದ ಭಾರೀ ಸದ್ದು ಕೇಳಿ ಬರುತ್ತಿದೆ.
ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪ, 5.9 ತೀವ್ರತೆ ದಾಖಲು
ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ಯಾವ ಸಮಯದಲ್ಲಿ ಏನಾಗಬಹುದೋ ಎಂಬ ಭೀತಿಗೆ ಒಳಗಾಗಿದ್ದಾರೆ. ಈ ಕುರಿತು ಅಂದರೆ ಈ ಪ್ರದೇಶದಲ್ಲಿ ಭೂಮಿಯೊಳಗೆ ನಡೆಯುತ್ತಿರುವ ಅಸಹಜ ಕ್ರಿಯೆಯ ಬಗ್ಗೆ ವಿಪತ್ತು ನಿರ್ವಹಣಾ ಇಲಾಖೆಯ ಮೂಲಕ ತುರ್ತು ಸಂಶೋಧನೆ ಮಾಡಿಸಿಕೊಡಬೇಕೆಂದು ಕೊಗ್ರೆಮನೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದಾರೆ.
ಆಗಾಗ ರಾಜ್ಯದ ಕೆಲವೆಡೆ ಇಂತಹ ಭೂಕಂಪದ ಅನುಭವವಾಗುತ್ತಿರುತ್ತದೆ. ಕಳೆದ ವರ್ಷ ಇದೇ ಸಮಯಕ್ಕೆ ಅಂದರೆ ಆಗಸ್ಟ್ 18 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಜನರಿಗೆ ಭೂಕಂಪದ ಅನುಭವವಾಗಿದ್ದು, ಆತಂಕದಿಂದ ಮನೆಯಿಂದ ಹೊರಗೆ ಓಡಿಬಂದ ಘಟನೆ ನಡೆದಿತ್ತು.
ಆದರೆ ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.