ಜೂ.26, 27ರಂದು ಭಾರಿ ಮಳೆ ಸುರಿಯುವ ಮುನ್ಸೂಚನೆಯ ಜಿಲ್ಲೆಗಳಿವು: ಚೆಕ್ ಮಾಡಿ
ಬೆಂಗಳೂರು ಜೂ.25: ರಾಜ್ಯದಲ್ಲಿ ಮುಂದಿನ ಐದು ದಿನಗಳವರೆಗೆ (ಜೂ.30) ಕರಾವಳಿ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕಾಗಿರಲಿದೆ. ಪರಿಣಾಮ ಗುಡುಗು ಸಹಿತ ಧಾಕಾರಾರ ಮಳೆ ಸುರಿಯುವ ನೀರಿಕ್ಷೆ ಇದ್ದು, ಕರಾವಳಿ ಭಾಗಕ್ಕೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂ.30ರವರೆಗೆ ಭಾರಿ ಮಳೆ ಸುರಿಯಲಿದೆ. ಹೀಗಾಗಿ ಜೂ.28 ಹೊರತುಪಡಿಸಿ ಉಳಿದ ನಾಲ್ಕು ದಿನ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಜೂ.28 ಕ್ಕೆ ಕರಾವಳಿಗೆ ಮಳೆ ತುಸು ಬಿಡುವು ಕೊಡುವ ಲಕ್ಷಣಗಳಿವೆ. ಅಂದು ಮಳೆಯ ಪ್ರಮಾಣ ತುಸು ಇಳಿಕೆಯಾಗಲಿದ್ದು, ಮೂರು ಜಿಲ್ಲೆಗಳಿಗೂ 'ಯೆಲ್ಲೋ ಅಲರ್ಟ್'ನೀಡಲಾಗಿದೆ.
2 ದಿನಗಳಲ್ಲಿ ದೆಹಲಿಗೆ ಮಾನ್ಸೂನ್: ಈ 5 ರಾಜ್ಯಗಳಲ್ಲಿ ಮಳೆ
ಮಳೆ ನಿಗದಿತ ಅವಧಿಯಲ್ಲಿ ಕರಾವಳಿಯ ಸಮುದ್ರ ತೀರದಲ್ಲಿ ಪ್ರತಿ ಗಂಟೆಗೆ ಸುಮಾರು 50ಕಿ.ಮೀ.ಗಿಂತಲೂ ಜೋರಾಗಿ ಗಾಳಿ ಬೀಸಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಒಳನಾಡಿನಲ್ಲೂ ಅಧಿಕ ಮಳೆ ನಿರೀಕ್ಷೆ
ಜೂನ್ ಮೊದಲ ವಾರದಲ್ಲಿ ಉತ್ತರ ಒಳನಾಡಿನಲ್ಲಿ ಮುಂಗಾರು ಆರ್ಭಟಿಸಿದ್ದು, ಬಿಟ್ಟರೆ ನಂತರ ದಿನಗಳಲ್ಲಿ ತಣ್ಣಗಾಗಿತ್ತು. ಇದೀಗ ಮುಂದಿನ 3-4ದಿನ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಹೀಗಾಗಿ ಉತ್ತರದ ಬಳ್ಳಾರಿ, ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಗದಗ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಜೂ. 26 ಮತ್ತು ಜೂ.27ರಂದು ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಘೋಷಿಸಲಾಗಿದೆ.
ಕಳೆದ ವಾರದಿಂದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿ ಭಾಗದಲ್ಲಿ ಒಂದಷ್ಟು ಮಳೆ ಬಂದದ್ದು ಬಿಟ್ಟರೆ ಎಲ್ಲಿ ಹೇಳಿಕೊಳ್ಳುವಷ್ಟು ಮಳೆ ದಾಖಲಾಗಿರಲಿಲ್ಲ. ಇದೀಗ ಮುಂದಿನ ಎರಡು ದಿನದ ಮಳೆ ಮುನ್ಸೂಚನೆ ನೋಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎನ್ನಬಹುದು.
ದಕ್ಷಿಣ ಒಳನಾಡಿನಲ್ಲಿ ಮಳೆ ಕ್ಷೀಣ?
ಇದೇ ಐದು ದಿನದ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಅಷ್ಟಾಗಿ ಕಂಡು ಬಾರದು ಎಂದು ಅಂದಾಜಿಸಲಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮೋಡ ಮುಸುಕಿದ ಮತ್ತು ತಂಪು ವಾತಾವರಣ ಸಹಿತ ಬಿಸಿಲಿನ ದರ್ಶನವಾಗಲಿದೆ. ಕೆಲವೆಡೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲೆನಾಡಿನ 3ಜಿಲ್ಲೆಗೆ 'ಯೆಲ್ಲೋ ಅಲರ್ಟ್'
ದಕ್ಷಿಣ ಒಳನಾಡಿನ ಜಿಲ್ಲೆಗಳು ಆಗಿರುವ ಮಲೆನಾಡಿನ ಜಿಲ್ಲೆಗಳಿಗೆ ಜೂ.28 ಹೊರತುಪಡಿಸಿ ಉಳಿದ ನಾಲ್ಕು ದಿನಗಳು ಉತ್ತಮ ಮಳೆಯಾಗುವ ಸಂಭವವಿದೆ. ಈ ಕಾರಣದಿಂದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಿಗೆ ಧಾರಾಕಾರ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಜೋರು ಮಳೆ ಸುರಿದು ರಸ್ತೆ ಸಂಚಾರ ಅಸ್ತವೆಸ್ತವಾಗಿದೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.
ಬೆಂಗಳೂರಿಗೆ ಸಾಮಾನ್ಯ ಮಳೆ?
ಬೆಂಗಳೂರಲ್ಲಿ ಕಳೆದ ನಾಲ್ಕು ದಿನದಿಂದ ಮಳೆಯ ವಾತಾವರಣ ಕಂಡು ಬಂದಿಲ್ಲ. ಕೇವಲ ತಂಪು ವಾತಾವರಣ, ಕೆಲವು ಕಡೆಗಳಲ್ಲಿ ಮಾತ್ರ ಸೋನೆ ಇಲ್ಲವೆ ತುಂತುರು ಮಳೆ ದಾಖಲಾಗಿದೆ. ನಗರದಲ್ಲಿ ಮುಂಗಾರು ತುಸು ಬಿರುಸಾಗುವ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಮುಂದಿನ 48ಗಂಟೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷಿಸಬಹುದು. ಈ ವೇಳೆ ಗರಿಷ್ಠ ತಾಪಮಾನ 30ಡಿ. ಸೆ. ಹಾಗೂ ಕನಿಷ್ಠ ತಾಪಮಾನ 20 ಡಿ.ಸೆ.ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.