ನಿರ್ಣಾಯಕ ಉತ್ತರ ಕರ್ನಾಟಕ ಸಂಭಾಳಿಸುವ ಚಿಂತೆಯಲ್ಲಿ ದಳಪತಿಗಳು
ರಾಜ್ಯದ ಒಂದೊಂದು ಭಾಗದಲ್ಲಿ ಒಂದೊಂದು ಲೆಕ್ಕಾಚಾರ, ಅದೇ ರೀತಿ ಉತ್ತರ ಕರ್ನಾಟಕ ಭಾಗದ ರಾಜಕೀಯ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಬಹುತೇಕ ನೇರ ಹಣಾಹಣಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಕೆಲವೊಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಪ್ರಾಭಲ್ಯ ಉಳಿಸಿಕೊಂಡಿದೆ.
ಕಳೆದ ಚುನಾವಣೆಯಲ್ಲಿದ್ದ ಪರಿಸ್ಥಿತಿ ಈ ಬಾರಿಯೂ ಜೆಡಿಎಸ್ ಪಕ್ಷಕ್ಕಿದೆಯೇ ಎನ್ನುವುದನ್ನು ಅವಲೋಕಿಸಿದಾಗ, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಮುಖ ನಾಯಕರು ಪಕ್ಷ ತೊರೆದಿದ್ದರಿಂದ ದಳಪತಿಗಳಿಗೆ ಹಿನ್ನಡೆಯೆಂದೇ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.
'ದಲಿತರನ್ನೇ ಸಿಎಂ ಮಾಡುತ್ತೇನೆ ಎಂಬ ಆತ್ಮವಂಚನೆಯ ಸಂಕೇತ'
ಎರಡು ರಾಷ್ಟ್ರೀಯ ಪಕ್ಷಗಳ ಮೇಲಾಟದ ನಡುವೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಅದರಲ್ಲಿ ಪ್ರಮುಖವಾಗಿ, ಜೆಡಿಎಸ್ ಪಕ್ಷ ಒಂದು ನಿಲುವಿಗೆ ಅಂಟಿಕೊಳ್ಳದೇ ಇರುವುದು, ಪ್ರಮುಖ ಮುಖಂಡರ ಅನುಕೂಲ ರಾಜಕಾರಣ ಇತ್ಯಾದಿ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಇಂತಹ ನಿಲುವೇ ಪಕ್ಷ ತೊರೆಯಲು ಕಾರಣವಾದ ಅಂಶಗಳು ಎಂದು ಜೆಡಿಎಸ್ ತೊರೆದ ನಾಯಕರೇ ಆರೋಪಿಸಿದ್ದುಂಟು. ಉತ್ತರ ಕರ್ನಾಟಕದ ಹಿರಿಯ, ಲಿಂಗಾಯತ ಸಮುದಾಯದ ಮುಖಂಡ ಬಸವರಾಜ ಹೊರಟ್ಟಿ ಕೂಡಾ ಚುನಾವಣಾ ವರ್ಷದಲ್ಲಿ ಪಕ್ಷ ತೊರೆದದ್ದು ಕುಮಾರಸ್ವಾಮಿಗಾದ ಮಗುದೊಂದು ಹಿನ್ನಡೆ.
ರಾಜ್ಯದ 'ಕೈ' ನಾಯಕರಿಗೆ 'ದಳಪತಿ'ಗಳದ್ದೇ ಭಯ!
ಬೀದರ್ ದಕ್ಷಿಣದಿಂದ ಬಂಡೆಪ್ಪ ಕಾಶೆಂಪೂರ್
ಸದ್ಯ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಪ್ರತಿನಿಧಿಸುವ ಶಾಸಕರು ಇರುವುದು ಐವರೇ. ಅವರೆಂದರೆ, ಮಾನ್ವಿಯಲ್ಲಿ ರಾಜಾ ವೆಂಕಟಪ್ಪ ನಾಯಕ್, ಗುರಮಿಠಕಲ್ ನಿಂದ ನಾಗನಗೌಡ ಕಂದಕೂರ್, ಬೀದರ್ ದಕ್ಷಿಣದಿಂದ ಬಂಡೆಪ್ಪ ಕಾಶೆಂಪೂರ್, ಸಿಂಧನೂರುನಿಂದ ನಾಡಗೌಡ ವೆಂಕಟರಾವ್ ಮತ್ತು ನಾಗಠಾಣದಿಂದ ದೇವಾನಂದ ಚವಾಣ. ಸಿಂಧಗಿಯಲ್ಲಿ ಕಳೆದ ಬಾರಿ ಚುನಾವಣೆ ಗೆದ್ದಿದ್ದರೂ, ಉಪ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಮುಗ್ಗರಿಸಿತ್ತು.
ಜೆಡಿಎಸ್ಸಿನ ಎನ್.ಎಚ್.ಕೋನರೆಡ್ಡಿ ಪಕ್ಷವನ್ನು ತೊರೆದಿದ್ದಾರೆ
2018ರ ಅಸೆಂಬ್ಲಿ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ ನವಲಗುಂದದಲ್ಲಿ ಬಿಜೆಪಿ ಅಭ್ಯರ್ಥಿಗೆ ಉತ್ತಮ ಪೈಪೋಟಿಯನ್ನು ನೀಡಿ ಸೋತಿದ್ದ ಜೆಡಿಎಸ್ಸಿನ ಎನ್.ಎಚ್.ಕೋನರೆಡ್ಡಿ ಪಕ್ಷವನ್ನು ತೊರೆದದ್ದು ಕುಮಾರಸ್ವಾಮಿಗಾದ ಮತ್ತೊಂದು ಹಿನ್ನಡೆ. ಈ ಭಾಗದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಹೊರಟ್ಟಿಯವರ ಜೆಡಿಎಸ್ ತೊರೆಯುವ ನಿರ್ಧಾರ, ಪಕ್ಷಕ್ಕೆ ಹಿನ್ನಡೆಯನ್ನು ತಂದೊಡ್ಡಲಿದೆ. ಇದೇ ವೇಳೆ, ಬಿಜೆಪಿಗೆ ಇದು ಇನ್ನಷ್ಟು ಶಕ್ತಿಯನ್ನು ತಂದು ಕೊಡಲಿದೆ.
ನಾಯಕರು ಪಕ್ಷ ತ್ಯಜಿಸುವುದರಿಂದ ಜೆಡಿಎಸ್ ಭವಿಷ್ಯ ಏರುಪೇರಾಗುವುದಿಲ್ಲ
"ನಾಯಕರು ಪಕ್ಷ ತ್ಯಜಿಸುವುದರಿಂದ ಜೆಡಿಎಸ್ ಭವಿಷ್ಯ ಏರುಪೇರಾಗುವುದಿಲ್ಲ. ಹುಬ್ಬಳ್ಳಿ - ಧಾರವಾಡ ಭಾಗದಲ್ಲಿ ಪಕ್ಷ ದುರ್ಬಲವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಪಕ್ಷದ ಪುನಶ್ಚೇತನಕ್ಕೆ ದಾರಿಯನ್ನು ಕಂಡುಕೊಳ್ಳಲಾಗುವುದು"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯನ್ನು ಎದುರಿಸುವ ಅಭ್ಯರ್ಥಿ ನಮಗೆ ಇನ್ನೂ ಸಿಗುತ್ತಿಲ್ಲ ಎನ್ನುವ ಮಾತನ್ನು ಖುದ್ದು ಆ ಭಾಗದ ಜೆಡಿಎಸ್ ನಾಯಕರೇ ಒಪ್ಪಿಕೊಳ್ಳುತ್ತರೆ. 2018ರ ವಿಧಾನಸಭಾ ಚುನಾವಣೆಯಲ್ಲಿ, ಜೆಡಿಎಸ್, ಶೇ. 18.3 ರಷ್ಟು ಮತ ಹಂಚಿಕೆಯೊಂದಿಗೆ 38 ಸ್ಥಾನಗಳನ್ನು ಗೆದ್ದಿತ್ತು.
Recommended Video
ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಬಲಪಡಿಸುವುದು ಜೆಡಿಎಸ್ಸಿಗೆ ನಿರ್ಣಾಯಕ
ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಗುರಿ ಹೊಂದಿದ್ದರೂ ಸಹ, ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಬಲಪಡಿಸುವುದು ಜೆಡಿಎಸ್ಸಿಗೆ ನಿರ್ಣಾಯಕವಾಗುತ್ತದೆ. ಆದರೆ, ಪಕ್ಷ ಆ ದಿಕ್ಕಿನಲ್ಲಿ ಹೋಗಲು ವಸ್ತುನಿಷ್ಠ ಪ್ರಯತ್ನವನ್ನು ಮಾಡುತ್ತಿದೆಯಾ ಎನ್ನುವುದಿಲ್ಲಿ ಪ್ರಶ್ನೆ. ಹಳೇ ಮೈಸೂರು ಭಾಗವನ್ನು ಮಾತ್ರ ಕೇಂದ್ರೀಕರಿಸಿದೆ ಅಧಿಕಾರಕ್ಕೇರಲು ಸಾಧ್ಯವೇ? ಹಾಗಾಗಿ, ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿದೆ, ಸ್ಥಳೀಯ ಜನಪ್ರಿಯ ಮುಖಂಡರನ್ನು ಪಕ್ಷ ಕರೆಸಿಕೊಂಡು, ಟಿಕೆಟ್ ನೀಡಿದರೇ ಮಾತ್ರ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆ ಈಡೇರಬಹುದು ಎಂದು ನಿರೀಕ್ಷಿಸಬಹುದಷ್ಟೇ..