ಕೊರೊನಾ: ಬಿಎಸ್ವೈ ಕೆಲಸ ಎಕ್ಸಲೆಂಟ್: ತಜ್ಞರ ಸಮಿತಿಯ ಡಾ.ಮಂಜುನಾಥ್ ವಿಶೇಷ ಸಂದರ್ಶನ
ಕೊರೊನಾ ವೈರಸ್ ಸೋಂಕಿತರಿಗೆ ನೀಡಬೇಕಾಗಿರುವ ಚಿಕಿತ್ಸೆ, ಈ ವೈರಸ್ ಹರಡದಂತೆ ತಡೆಗಟ್ಟಲು ತೆಗೆದುಕೊಳ್ಲಬೇಕಾದ ಕ್ರಮ, ಲಾಕ್ ಡೌನ್ ಸಡಿಲಿಸಬೇಕೇ ಅಥವಾ ಮುಂದುವರಿಸಬೇಕೇ ಎನ್ನುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಜ್ಞರ ಸಮಿತಿಯೊಂದನ್ನು ರಚಿಸಿ, ವರದಿ ನೀಡಲು ಮನವಿ ಮಾಡಿದ್ದರು.
ನಾರಾಯಣ ಹೆಲ್ತ್ ಸೆಂಟರ್ ನ ಡಾ. ದೇವಿ ಶೆಟ್ಟಿ, ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ.ನಾಗರಾಜ್, ನಿಮ್ಯಾನ್ಸ್ ಆಸ್ಪತ್ರೆಯ ಡಾ.ರವಿ ಮತ್ತು ಕಿಮ್ಸ್ ಆಸ್ಪತ್ರೆಯ ಡಾ.ಸುದರ್ಶನ್ ಈ ಸಮಿತಿಯಲ್ಲಿದ್ದರು. ಈ ಎಕ್ಸ್ ಪರ್ಟ್ ಕಮಿಟಿ, ಸಿಎಂಗೆ ತನ್ನ ವರದಿಯನ್ನು ಸಲ್ಲಿಸಿತ್ತು.
ಮೋದಿಯ ವಿದೇಶ ವ್ಯಾಮೋಹದಿಂದ ಭಾರತದಲ್ಲಿ ಲಸಿಕೆಗೆ ಅಭಾವ: ಶಶಿ ತರೂರ್
ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಡಾ. ಸಿ.ಎನ್.ಮಂಜುನಾಥ್, 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ, ಮಹಾಮಾರಿ ಕೊರೊನಾ ವಿಚಾರದ ಬಗ್ಗೆ ವಿಸ್ಕೃತವಾಗಿ ಮಾತನಾಡಿದ್ದಾರೆ.
ಲಾಕ್ ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ, ಸೋಂಕು ಕಾಣದ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಬೇಕೇ, ಏಪ್ರಿಲ್ ಹದಿನಾಲ್ಕರ ನಂತರ ಮದ್ಯದ ಎಂಆರ್ಪಿ ಮಳಿಗೆಗಳು ಓಪನ್ ಆಗಬೇಕೇ ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಡಾ.ಮಂಜುನಾಥ್ ಜೊತೆಗಿನ ಸಂದರ್ಶನದ ಆಯ್ದ ಭಾಗ ಇಂತಿದೆ:
ಹಂತ ಹಂತವಾಗಿ ಲಾಕ್ ಡೌನ್ ತೆಗೆದುಹಾಕಬೇಕು
ಪ್ರ: ಸರಕಾರಕ್ಕೆ ವರದಿಯನ್ನು ನೀಡುವಾಗ ಸಮಿತಿಯ ಮಾನದಂಡ ಏನಿತ್ತು?
ಡಾ.ಮಂಜುನಾಥ್: ಇಂತದ್ದೇ ಆದ ಮಾನದಂಡ ಇರಬೇಕು ಎಂದು ನಾವು ಪೂರ್ವ ನಿರ್ಧಾರ ಮಾಡಿಕೊಂಡಿರಲಿಲ್ಲ. ಸಮಿತಿಯ ಸದಸ್ಯರುಗಳು ಚರ್ಚಿಸಿ ನಿರ್ಧಾರ ಮಾಡಿರುವಂತದ್ದು. ವೈರಸ್ ಹರಡದಂತೆ ನೋಡಿಕೊಳ್ಳಲು, ಜೊತೆಗೆ, ಜನಜೀವನ ಅಸ್ತವ್ಯಸ್ತ ಆಗದಿರಲು ದೈನಂದಿನ ವಸ್ತುಗಳು ಜನರಿಗೆ ಸಿಗುವಂತಾಗಬೇಕು. ಅದಕ್ಕೆ ಏನು ಮಾಡಬೇಕು, ಅದನ್ನು ನಾವು ಗಣನೆಗೆ ತೆಗೆದುಕೊಂಡಿದ್ದೆವು.
ಈ ವೈರಸ್ ನ ಪ್ರಭಾವ ಸುಮಾರು ಮೂರು ತಿಂಗಳು ಇರುತ್ತದೆ. ಆ ಹಿನ್ನಲೆಯನ್ನು ನೋಡಿಕೊಂಡು ನಾವು ವರದಿ ನೀಡಬೇಕಾಗಿತ್ತು. ಈ ವೈರಸ್, ಸಂಪೂರ್ಣ ನಿರ್ನಾಮ ಆಯಿತು ಎಂದಾದ ಮೇಲೂ, ನಾವು ಸಾಮಾಜಿಕ ಅಂತರ ಕಾಪಾಡಿಕೊಳ್ಲಬೇಕಾಗಿರುವುದು ಅತ್ಯಂತ ಅವಶ್ಯಕ. ಹಂತ ಹಂತವಾಗಿ ಲಾಕ್ ಡೌನ್ ತೆಗೆದುಹಾಕಬೇಕು ಎನ್ನುವುದು ನಮ್ಮ ನಿಲುವಾಗಿತ್ತು.
ಲಾಕ್ ಡೌನ್ ಶೇ. 95 ಜಾರಿಯಾಗಿದೆ
ಪ್ರ: ಲಾಕ್ ಡೌನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗ ಬೇಕಿತ್ತಲ್ಲವೇ?
ಡಾ.ಮಂಜುನಾಥ್: ಬೆಂಗಳೂರಿನಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆಯಿದೆ. ಇದನ್ನು ಆಧರಿಸಿ ಹೇಳುವುದಾದರೆ, ಅತ್ಯಂತ ಪರಿಣಾಮಕಾರಿಯಾಗಿ ಲಾಕ್ ಡೌನ್ ಜಾರಿಯಾಗಿದೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಜನರು ಹೊರಗೆ ಬಂದಿರಬಹುದು. ನನ್ನ ಪ್ರಕಾರ ಶೇ. 95 ಇದು ಜಾರಿಯಾಗಿದೆ.
ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂದ ಪ್ರಯಾಣಿಕರನ್ನು ಬೇಗ ಸ್ಕ್ರೀನಿಂಗ್ ಮಾಡಿದ್ದು ಸರಕಾರದ ಸಾಧನೆ ಎಂದು ಹೇಳಬಹುದು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಅಧಿಕಾರಿಗಳ ಕೆಲಸವನ್ನು ಮೆಚ್ಚಲೇಬೇಕು. ಮುಖ್ಯಮಂತ್ರಿಗಳು ಅತ್ಯಂತ ಪರಿಣಾಮಕಾರಿಯಾಗಿ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಕೋವಿಡ್-19 ರೋಗದ ಲಕ್ಷಣಗಳೇನು: ಸಾವನ್ನೇ ಗೆದ್ದವರು ಹೇಳಿದ್ದಾರೆ ನೋಡಿ..
ಕೊರೊನಾ ಸೋಂಕು ಕಾಣದ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸ ಬೇಕಾ?
ಪ್ರ: ಕೊರೊನಾ ಸೋಂಕು ಕಾಣದ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವ ಅವಶ್ಯಕತೆಯಿದೆಯಾ?
ಡಾ.ಮಂಜುನಾಥ್: ಏಪ್ರಿಲ್ ಮೂವತ್ತರ ವರೆಗೆ, ಮುಂಜಾಗೃತಾ ಕ್ರಮವಾಗಿ ಮುಂದುವರಿಸುವುದು ಒಳ್ಳೆಯದು ಎನ್ನುವ ಸಲಹೆಯನ್ನು ವರದಿಯಲ್ಲಿ ನೀಡಿದ್ದೇವೆ. ಯಾವುದೇ ಕೇಸ್ ಗಳು ದಾಖಲಾಗದೇ ಇದ್ದಲ್ಲಿ, ಲಾಕ್ ಡೌನ್ ಸಡಿಲಗೊಳಿಸಬಹುದು. ಇಲ್ಲಾಂದರೆ, ಜನ ತುಂಬಾ ರಿಲ್ಯಾಕ್ಸ್ ಆಗಿ ಬಿಡುತ್ತಾರೆ.
manufacturing ಇಂಡಸ್ಟ್ರಿ
ಪ್ರ: manufacturing ಇಂಡಸ್ಟ್ರಿ ಮೇ ನಂತರ ಓಪನ್ ಮಾಡುವ ಬಗ್ಗೆ ನಿಮ್ಮ ವರದಿಯಲ್ಲಿತ್ತು. ಸೋಶಿಯಲ್ ಡಿಸ್ಟನ್ಸ್ ಪ್ರಮುಖವಾಗಿ ಜಾರಿಯಾಗದ ಜಾಗ ಅದೇ ಅಲ್ಲವೇ?
ಡಾ.ಮಂಜುನಾಥ್: ವರದಿಯಲ್ಲಿ ಅತ್ಯಂತ ಸ್ಪಷ್ಟವಾಗಿ ನಾವು ಹೇಳಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಅನುವು ಮಾಡಿಕೊಡಬಾರದು. ಅರ್ಧದಷ್ಟು ಜನರಿಗೆ ಒಂದು ವಾರ, ಇನ್ನೊಂದು ಅರ್ಧ ಕಾರ್ಮಿಕರಿಗೆ ಇನ್ನೊಂದು ವಾರ, ರೊಟೇಶನ್ ನಲ್ಲಿ ಕೆಲಸ ಮಾಡಿಸಬೇಕು.
ಕೆಲಸದಲ್ಲಿ ಇದ್ದವರೆಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿರುವುದು ಖಡ್ಡಾಯ. ಹೀಗೆ ಮಾಡಿದರೆ, ಯಾರಿಗೂ ವೇತನ ಕಟ್ ಆಗ ಬಾರದು ಎನ್ನುವುದು ಒಟ್ಟಾರೆ ಉದ್ದೇಶ.
ಮದ್ಯದ ಎಂಆರ್ಪಿ ಶಾಪ್ ಓಪನ್ ಮಾಡುವ ಬಗ್ಗೆ?
ಪ್ರ: ಮದ್ಯದ ಎಂಆರ್ಪಿ ಶಾಪ್ ಓಪನ್ ಮಾಡುವ ಬಗ್ಗೆ ಏನಾದರೂ ಚರ್ಚೆಗೆ ಬಂತಾ?
ಡಾ.ಮಂಜುನಾಥ್: ಸೈಕ್ರಾಸ್ಟಿಸ್ಟ್ ಕೂಡಾ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಹಾಕಿದ್ದರು. ಪಶ್ಚಿಮ ಬಂಗಾಳ ಸರಕಾರ ಕೆಲವು ಗಂಟೆಗಳ ಕಾಲ ಮದ್ಯದಂಗಡಿ ತೆರವು ಮಾಡುವ ನಿರ್ಧಾರಕ್ಕೆ ಬಂದಿದೆ. ಆದರೆ, ನಾವು ಸಲ್ಲಿಸಿದ ವರದಿಯಲ್ಲಿ ಆ ಬಗ್ಗೆ ಪ್ರಸ್ತಾವನೆಯನ್ನು ನಾವು ಸಲ್ಲಿಸಿಲ್ಲ. ಮುಖ್ಯಮಂತ್ರಿಗಳ ಜೊತೆಗಿನ ಮೀಟಿಂಗ್ ನಲ್ಲೂ ಅದು ಚರ್ಚೆಗೆ ಬಂದಿಲ್ಲ.