ಸಿದ್ದು ಸರಕಾರದ ಕ್ಯಾಬಿನೆಟ್ ಸಚಿವರೊಬ್ಬರ ರಾಸಲೀಲೆ ಬಯಲು?
ವರ್ಗಾವಣೆಗಾಗಿ ಶಕ್ತಿಸೌಧಕ್ಕೆ ಆಗಮಿಸಿದ ಮಹಿಳೆಯೊಬ್ಬರ ಜೊತೆ ಸಚಿವ ಮೇಟಿ ಮತ್ತು ಅವರ ಪುತ್ರ 'ರಂಗೀನಾಟ'ದಲ್ಲಿ ತೊಡಗಿದ್ದ ವಿಡಿಯೋ ಬಳ್ಳಾರಿಯ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಎನ್ನುವವರ ಬಳಿ ಇದೆ ಎಂದು ಕನ್ನಡ ವಾಹಿನಿಗಳು ವರದಿ ಮಾಡುತ್ತಿವೆ.
ಬೆಂಗಳೂರು, ಡಿ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಕ್ಯಾಬಿನೆಟ್ ಸಚಿವರೊಬ್ಬರು ನಡೆಸಿದ್ದಾರೆ ಎನ್ನಲಾಗುತ್ತಿರುವ ರಾಸಲೀಲೆಯ ವಿಡಿಯೋ ತನ್ನ ಬಳಿಯಿದೆ ಎಂದು ಆರ್ಟಿಐ ಕಾರ್ಯಕರ್ತರೊಬ್ಬರು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ವರ್ಗಾವಣೆಗಾಗಿ ಶಕ್ತಿಸೌಧಕ್ಕೆ ಆಗಮಿಸಿದ ಮಹಿಳೆಯೊಬ್ಬರ ಜೊತೆ ಅಬಕಾರಿ ಸಚಿವ ಎಚ್ ವೈ ಮೇಟಿ ಮತ್ತು ಅವರ ಪುತ್ರ 'ರಂಗೀನಾಟ'ದಲ್ಲಿ ತೊಡಗಿದ್ದ ವಿಡಿಯೋ ಬಳ್ಳಾರಿಯ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಎನ್ನುವವರ ಬಳಿ ಇದೆ ಎಂದು ಕನ್ನಡ ಸುದ್ದಿವಾಹಿನಿಗಳು ವರದಿ ಮಾಡುತ್ತಿವೆ. (ಟಿಪ್ಪು ವೇದಿಕೆಯಲ್ಲೇ ಅರೆ ನಗ್ನ ಚಿತ್ರ ವೀಕ್ಷಿಸಿದ ತನ್ವೀರ್)
ರಾಸಲೀಲೆಯ ಸಿಡಿ ಬಿಡುಗಡೆ ಮಾಡದಂತೆ ಸಚಿವರು ಮತ್ತು ಅವರ ಬೆಂಬಲಿಗರು ಆರ್ಟಿಐ ಕಾರ್ಯಕರ್ತನಿಗೆ ಧಮ್ಕಿ ಹಾಕಿದ್ದಾರೆ ಎಂದು ವಾಹಿನಿಗಳು ಪ್ರಸಾರ ಮಾಡುತ್ತಿವೆ.
ಸಿಡಿ ಬಿಡುಗಡೆ ಮಾಡಿದ್ದೇ ಆದಲ್ಲಿ ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ಆರ್ಟಿಐ ಕಾರ್ಯಕರ್ತನಿಗೆ ಜೀವ ಬೆದರಿಕೆಯೊಡ್ಡಿರುವ ಆಡಿಯೋ ವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ.
ಸಚಿವರ ಆಪ್ತ ಸಹಾಯಕರಿಂದ ಮಹಿಳೆಯ ಪರಿಚಯ ಸಚಿವರಿಗಾಗಿದ್ದು, ಘಟನೆಯ ನಂತರ ವಿಷಯವನ್ನು ಮಾಧ್ಯಮಗಳಿಗೆ ತಿಳಿಸುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದರು.
ಇದು ಬಹಿರಂಗವಾಗಬಾರದು ಎಂದಿದ್ದರೆ 15 ಕೋಟಿ ನೀಡಬೇಕೆಂದು ಮಹಿಳೆ ಬ್ಲ್ಯಾಕ್ ಮೇಲ್ ಗೆ ಇಳಿದಿದ್ದರು. ನಂತರ ಚೌಕಾಸಿಗೆ ಇಳಿದಿದ್ದ ಸಚಿವರು 10-25 ಲಕ್ಷ ಕೊಡುವ ಆಫರ್ ನೀಡಿದ್ದರು ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಇದಕ್ಕೆ ಒಪ್ಪದ ಮಹಿಳೆಗೆ ಐದು ಪೈಸೆ ಕೊಡೋಲ್ಲಾ ಏನು ಬೇಕಾದರೂ ಮಾಡಿಕೋ ಎಂದು ಸಚಿವರು ಆವಾಜ್ ಹಾಕಿದ್ದರು.
ರಾಸಲೀಲೆಯ ವಿಡಿಯೋ ನನ್ನ ಬಳಿ ಇರುವ ಹಿನ್ನೆಲೆಯಲ್ಲಿ ಸಚಿವರ ಬೆಂಬಲಿಗರು ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮಾಧ್ಯಮಗಳಲ್ಲಿ ಅವಲತ್ತು ತೋಡಿಕೊಂಡಿದ್ದಾರೆ.