ಕುಡುಕರಿಗೆ ಆಸೆ ಹುಟ್ಟಿಸಿ ಮತ್ತೆ ತಣ್ಣೀರು ಸುರಿದ ಅಬಕಾರಿ ಸಚಿವ!
ಬೆಂಗಳೂರು, ಸೆಪ್ಟೆಂಬರ್ 5: ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಯೋಜನೆ ಇದೆ ಎಂದು ಬುಧವಾರ ಹೇಳಿಕೆ ನೀಡುವ ಮೂಲಕ ಕುಡುಕರಿಗೆ ಖುಷಿ ನೀಡಿದ್ದ ಅಬಕಾರಿ ಸಚಿವ ಎಚ್ ನಾಗೇಶ್ ಯೂಟರ್ನ್ ಹೊಡೆದಿದ್ದಾರೆ.
ಕೆಲವು ಊರುಗಳಲ್ಲಿ ಮದ್ಯದಂಗಡಿಗಳಿಲ್ಲ. ಇನ್ನು ಕೆಲವು ದೂರ ದೂರದಲ್ಲಿವೆ. ಇದರಿಂದ ಮದ್ಯಪ್ರಿಯರಿಗೆ ದೂರದ ಮದ್ಯದಂಗಡಿಗಳಿಗೆ ತೆರಳುವುದು ಕಷ್ಟ ಹಾಗಾಗಿ ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವಂತಹ ಸಂಚಾರಿ ಮದ್ಯ ಸೇವೆಯನ್ನು ಆರಂಭಿಸುವುದಾಗಿ ಎಚ್ ನಾಗೇಶ್ ಅವರು ಬುಧವಾರ ಹೇಳಿಕೆ ನೀಡಿದ್ದರು.
ಮದ್ಯಪ್ರಿಯರಿಗೆ ಸರ್ಕಾರದ ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಮದ್ಯ
ಆದರೆ ಇದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ, ಈ ಯೋಜನೆಗೆ ತಾವು ಅವಕಾಶ ನೀಡುವುದಿಲ್ಲ ಎಂದು ಅಬಕಾರಿ ಸಚಿವರು ಗುರುವಾರ ಹೇಳಿದ್ದಾರೆ. ಈ ಮೂಲಕ ಮನೆಗೇ ಮದ್ಯ ಸಿಗುತ್ತದೆ ಎಂಬ ಕುಡುಕರಿಗೆ ತೀವ್ರ ನಿರಾಶೆಯಾಗಿದೆ. ತಮ್ಮ ಸಂಪಾದನೆಯ ಹಣ ಕುಟುಂಬದ ಏಳಿಗೆಗೆ, ಜೀವನಕ್ಕೆ ಸಿಗದೆ ಮದ್ಯದ ಪಾಲಾಗುತ್ತಿರುವುದರಿಂದ ಸಂಕಷ್ಟದಲ್ಲಿರುವ ಕುಟುಂಬಗಳು ತುಸು ನೆಮ್ಮದಿಪಡುವಂತಾಗಿದೆ. ಅಬಕಾರಿ ಸಚಿವರ ಹೊಸ ಯೋಜನೆ ಮುಖ್ಯವಾಗಿ ಮಹಿಳೆಯರಲ್ಲಿ ತಳಮಳ ಹುಟ್ಟಿಸಿತ್ತು. ಜತೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.
ನಾನೇ ಅವಕಾಶ ನೀಡುವುದಿಲ್ಲ
''ಮನೆ ಮನೆ ಮದ್ಯ ಸರಬರಾಜಿಗೆ ನಾನೇ ಅವಕಾಶ ನೀಡುವುದಿಲ್ಲ. ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಹೆಣ್ಣುಮಕ್ಕಳಿಗೆ ನೋವು ಕೊಡುವ ಕೆಲಸ ಮಾಡುವುದಿಲ್ಲ'' ಎಂದು ಎಚ್ ನಾಗೇಶ್ ಸ್ಪಷ್ಟೀಕರಣ ನೀಡಿದರು.
''ಕೆಲವು ತಾಂಡಾಗಳಲ್ಲಿ ಈಗಲೂ ಕಳ್ಳಬಟ್ಟಿ ಬಳಕೆ ಆಗುತ್ತಿದೆ. ನಮ್ಮ ಸರ್ಕಾರವು ಕಳ್ಳಬಟ್ಟಿ ನಿರ್ಮೂಲನೆಯ ಗುರಿ ಹೊಂದಿದೆ. ಈ ಕುರಿತು ತಾಂಡಾಗಳಲ್ಲಿ ಅಭಿಯಾನ ಆರಂಭಿಸುತ್ತೇವೆ'' ಎಂದು ತಿಳಿಸಿದರು.
Recommended Video
ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೋರುತ್ತೇನೆ
''ಮನೆ ಮನೆಗೆ ಮದ್ಯ ಸರಬರಾಜು ಮಾಡುವ ವಿಚಾರದಲ್ಲಿ ಯಾವುದೇ ಆದೇಶ ನೀಡಿಲ್ಲ. ಕೆಲವು ರಾಜ್ಯಗಳಲ್ಲಿ ಇದು ಇದೆ ಎಂಬ ಉದಾಹರಣೆ ನೀಡಿದ್ದೆ ಅಷ್ಟೇ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಪ್ರಮಾದದ ಬಗ್ಗೆ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೋರುತ್ತೇನೆ'' ಎಂದು ಹೇಳಿದರು.
ಕುಡುಕರಿಗೂ ಬಂತು ಅಚ್ಛೇ ದಿನ್: ನಿಂತಲ್ಲೇ ಅಮಲೇರಿಸುವ ಸುದ್ದಿ!
ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ
ನಾಗೇಶ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 'ಮೊದಲೇ ನೆರೆ ಪರಿಹಾರ ನೀಡಿಲ್ಲ ಎಂದು ವಿರೋಧಪಕ್ಷಗಳು ಆರೋಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಏಕೆ ಈರೀತಿ ಹೇಳಿಕೆ ನೀಡಿರುವುದು? ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ' ಎಂದು ಯಡಿಯೂರಪ್ಪ ಅವರು ನಾಗೇಶ್ ವಿರುದ್ಧ ಕಿಡಿಕಾರಿದ್ದರು ಎನ್ನಲಾಗಿದೆ.
ಚೀಟಿ ಇದ್ದವರ ಮನೆಗೆ ಮದ್ಯ
''ಹಾಲು ಪೂರೈಕೆ ಮಾಡುವ ರೀತಿಯಲ್ಲಿಯೇ ಮನೆಮನೆಗೆ ಮದ್ಯ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಅದಕ್ಕೆ ಅವರು ಗುರುತಿನ ಚೀಟಿ ಹೊಂದಿರಬೇಕಾಗುತ್ತದೆ. ಜಿಲ್ಲಾಧಿಕಾರಿಗಳ ಬಳಿ ಈ ಕಾರ್ಡ್ ದೊರಕುತ್ತದೆ. ಈ ಚೀಟಿ ಹೊಂದಿದ್ದವರಿಗೆ ಮಾತ್ರ ಮದ್ಯವನ್ನು ಮನೆಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ'' ಎಂದು ಅವರು ಬುಧವಾರ ಹೇಳಿದ್ದರು.
ಬೆಂಗಳೂರಿನ 107 ಬಾರ್ & ರೆಸ್ಟೋರೆಂಟ್, ಪಬ್ ಲೈಸೆನ್ಸ್ ರದ್ದು
ಸರ್ಕಾರಕ್ಕೆ ಉತ್ತಮ ಆದಾಯ ಬರಲಿದೆ
''ಸಂಚಾರಿ ವೈನ್ ಶಾಪ್ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಎಲ್ಲೆಲ್ಲಿ ವೈನ್ ಶಾಪ್ಗಳು ಲಭ್ಯವಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯ ಬರಲಿದೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ'' ಎಂದು ತಿಳಿಸಿದರು.
ಆದಾಯ ಹೆಚ್ಚಳದ ಗುರಿ
ಜನರಿಗೆ ಗುಣಮಟ್ಟದ ಮದ್ಯ ಪೂರೈಕೆ ಮಾಡುವುದು ನಮ್ಮ ಗುರಿ. 2018-19ರಲ್ಲಿ 19,750 ಕೋಟಿ ಅಬಕಾರಿ ಆದಾಯದ ಗುರಿ ನಿಗದಿಪಡಿಸಲಾಗಿತ್ತು. 19,943 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. 2019-20ನೇ ಸಾಲಿನಲ್ಲಿ 21 ಸಾವಿರ ಕೋಟಿ ರೂ ಸಂಗ್ರಹದ ಗುರಿ ನಿಗದಿಪಡಿಸಿದ್ದೇವೆ. ಸಂತೋಷಕೂಟಗಳಲ್ಲಿ ಬೇರೆ ರಾಜ್ಯಗಳಿಂದ ಮದ್ಯ ತಂದು ಬಳಸುತ್ತಾರೆ. ಹಾಗಾಗಿ ಅಂತಹ ಅನಧಿಕೃತ ಪಾರ್ಟಿಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಇಲಾಖೆ ಕಡಿವಾಣ ಹಾಕಲಿದೆ ಎಂದು ನಾಗೇಶ್ ವಿವರಿಸಿದರು.