ಜಿ.ವಿ.ಶ್ರೀರಾಮರೆಡ್ಡಿ ವ್ಯಕ್ತಿಯಲ್ಲ, ಹೋರಾಟದ ಪ್ರತೀಕ, ಚಳುವಳಿಗಳ ಸೃಷ್ಠಿಕರ್ತ
ಬೆಂಗಳೂರು, ಏ. 15: ಅತಿ ಹಿಂದುಳಿದ ತಾಲೂಕು ಬಾಗೇಪಲ್ಲಿ ಪಾಲಿಗೆ ಅಭಿವೃದ್ಧಿಯ ಹರಿಕಾರ. ಜನರಲ್ಲಿ ಹೋರಾಟದ ಮನೋಭಾವನೆ ಹುಟ್ಟು ಹಾಕಿದ ನಾಯಕ. ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟವನ್ನು ಮೂವತ್ತು ವರ್ಷಗಳ ಹಿಂದೆ ಹುಟ್ಟು ಹಾಕಿದ ಪ್ರಜಾ ನಾಯಕ. ಉಡುಪಿಯಲ್ಲಿ ಫಂಕ್ತಿಬೇಧ ಹಾಗೂ ಮಡೆ ಸ್ನಾನದ ವಿರುದ್ಧ ಹೋರಾಟ ರೂಪಿಸಿ ಮೌಢ್ಯದ ವಿರುದ್ಧ ತೊಡೆ ತಟ್ಟಿದ್ದ ಹೋರಾಟಗಾರ!
ಹೃದಯ ಸ್ಥಂಭನದಿಂದ ನಿಧನರಾದ ಬಾಗೇಪಲ್ಲಿ ಮಾಜಿ ಶಾಸಕ ಶ್ರೀರಾಮರೆಡ್ಡಿ ಒಬ್ಬ ಜನ ಪ್ರತಿನಿಧಿ ಎನ್ನುವುದಕ್ಕಿಂತಲೂ ಆತ ಹುಟ್ಟು ಹೋರಾಟಗಾರ. ಹೋರಾಟವನ್ನೇ ಉಸಿರಾಗಿಸಿಕೊಂಡು ಜೀವನ ನಡೆಸಿದ್ದು ಜಿ.ವಿ. ಶ್ರೀರಾಮರೆಡ್ಡಿ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮೈಗೂಡಿಸಿಕೊಂಡು ಅಸ್ತಿತ್ವವೇ ಇಲ್ಲದ ಸಿಪಿಐಎಂ ಪಕ್ಷದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ವಿಪರ್ಯಾಸ. ಬಾಗೇಪಲ್ಲಿ ಪ್ರತಿನಿಧಿಸಿದರೂ ಆತ ಇಡೀ ರಾಜ್ಯದ ಧ್ವನಿಯಾಗಿ ಸದನಲ್ಲಿ ಜ್ವಲಂತ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ಶ್ರೀರಾಮರೆಡ್ಡಿಯನ್ನು ಸರಿಗಟ್ಟುವ, ಮಣಿಸುವ ಮತ್ತೊಬ್ಬ ನಾಯಕ ವಿಧಾನಸೌಧದಲ್ಲಿ ಕಾಣಸಿಗುವುದೇ ಇಲ್ಲ!
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮೈಗೂಡಿಸಿಕೊಂಡಿದ್ದ ಜಿ.ವಿ. ಶ್ರೀರಾಮರೆಡ್ಡಿ ಹೋರಾಟವನ್ನೇ ನಂಬಿ ಜನ ನಾಯಕನಾಗಿ ಬೆಳೆದು ನಿಂತರು. ಕಮ್ಯುನಿಸಂ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಬಹುಶಃ ರೆಡ್ಡಿ ಬಯಸಿದ್ದರೆ ಯಾವುದೇ ರಾಷ್ಟ್ರೀಯ ಪಕ್ಷ ಕೆಂಪು ಹಾಸು ಹಾಕಿ ಆಹ್ವಾನಿಸಿತ್ತು. ಸಿಪಿಐಎಂನಿಂದ ಉಚ್ಛಾಟನೆಗೊಂಡರೂ ತನ್ನದೇ ಪ್ರಜಾ ಸಂಘರ್ಷ ಸಮಿತಿ ಹುಟ್ಟು ಹಾಕಿ ಅದರಿಂದ ಮತ್ತೆ ಹೋರಾಟ ಮಾಡಿ ಶಾಸಕರಾಗಲು ಪ್ರಯತ್ನಿಸಿದ್ದರು. ಅವರು ಯಾವತ್ತೂ ಹದಗೆಟ್ಟ ರಾಜಕೀಯ ಪಕ್ಷಗಳ ಜತೆ ಕೈ ಜೋಡಿಸದೇ ಇದ್ದಿದ್ದು ಅವರ ದಿಟ್ಟ ನಿರ್ಧಾರಗಳಿಗೆ ಹಿಡಿದ ಕನ್ನಡಿ. ಇಂತಹ
ಮಾದರಿ ಬಾಗೇಪಲ್ಲಿ ನಿರ್ಮಾಣ:
ಗಡಿ ತಾಲೂಕು ಬಾಗೇಪಲ್ಲಿ ಅತಿ ಹಿಂದುಳಿದ ಕ್ಷೇತ್ರ. ಸರ್ಕಾರಿ ಪಾಲಿಟೆಕ್ನಿಕ್ ತರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದರು. ಕೋರ್ಟ್ ಮೆಟ್ಟಿಲೇರಿ ಇಡೀ ಬಾಗೇಪಲ್ಲಿ ಪಟ್ಟಣದಲ್ಲಿ ಮೈದಾನ ನೆನಪಿಸುವ ರಸ್ತೆಗಳ ನಿರ್ಮಾಣಕ್ಕೆ ನಾಂದಿ ಹಾಡಿದ ಅಭಿವೃದ್ಧಿಯ ಹರಿಕಾರ ಎಂದರೇ ತಪ್ಪಾಗಲಾರದು. ಬಾಗೇಪಲ್ಲಿ ಕ್ಷೇತ್ರ ಇವರೆಗೂ ನೋಡದ ಮುಂದೆ ನೋಡದ ನಾಯಕನಾಗಿ ಕ್ಷೇತ್ರದ ಪ್ರಗತಿಗೆ ಶ್ರಮಿಸಿದ್ದರು.
ಕೋವಿಡ್ ನಿಂದ ಜರ್ಜರಿತ :
ಜಿ. ವಿ. ಶ್ರಿರಾಮರೆಡ್ಡಿ ಎರಡು ವರ್ಷದ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಒಬ್ಬ ಮಾಜಿ ಶಾಸಕರಾಗಿದ್ದರು ಅವರಿಗೆ ಎಲ್ಲೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಸರ್ಕಾರಿ ಆಸ್ಪತ್ರೆಗಳನ್ನೇ ಎಡತಾಕಿದ್ದರು. ಕೊನೆಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ, ಅದರಿಂದ ಅವರ ಆರೋಗ್ಯ ಸುಧಾರಿಸಲೇ ಇಲ್ಲ. ಮೊದಲೇ ಮಂಡಿ ನೋವಿನಿಂದ ಬಳಲುತ್ತಿದ್ದ ಜಿ.ವಿ. ಶ್ರೀರಾಮರೆಡ್ಡಿ ಅವರು ಕೋವಿಡ್ ನಿಂದ ಜರ್ಜರಿತರಾಗಿದ್ದರು. ಅಂದಿನಿಂದಲೇ ಅವರ ಧ್ವನಿ ಎಲ್ಲೂ ಕಾಣಸಿಗುವುದೇ ಅಪರೂಪವಾಯಿತು. ಅಂತಿಮವಾಗಿ ತನ್ನ ಹೋರಾಟದ ಪಯಣವನ್ನು ಕೊನೆಗೊಳಿಸಿದ್ದಾರೆ.
ಶಾಶ್ವತ ನೀರಾವರಿ ಸೂತ್ರಧಾರ:
ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆಯನ್ನು ಮೊದಲ ದರ್ಶನ ಮಾಡಿದವರೇ ಶ್ರೀರಾಮರೆಡ್ಡಿ. ಜನರಲ್ಲಿ ಶಾಶ್ವತ ನೀರಾವರಿ ಬಗ್ಗೆ ಅರಿವು ಮೂಡಿಸಿ ಹೋರಾಟದ ಮನೋಭಾವನೆಗೆ ನಾಂದಿ ಹಾಡಿದರು. ಅದರ ಭಾಗವಾಗಿಯೇ ಶಾಶ್ವತ ನೀರಾವರಿ ಹೋರಾಟ ಹುಟ್ಟಿಕೊಂಡಿದ್ದು, ಇಂದಿಗೂ ಜೀವಂತವಾಗಿ ನಡೆಯುತ್ತಲೇ ಇದೆ. ಉಡುಪಿಯಲ್ಲಿ ಫಂಕ್ತಿಬೇಧ, ಮಡೆ ಸ್ನಾನದ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟಿದ್ದೇ ಜಿ.ವಿ.ಶ್ರೀರಾಮರೆಡ್ಡಿ. ವೈಜ್ಞಾನಿಕ ಮನೋ ಭಾವನೆ ಮೈಗೂಡಿಸಿಕೊಂಡಿದ್ದ ಜಿ.ವಿ. ಶ್ರೀರಾಮರೆಡ್ಡಿ ಮೌಢ್ಯಗಳ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಹೋರಾಟದಲ್ಲಿ ಎಂದೂ ಅವರು ಸೋಲಲೂ ಇಲ್ಲ. ಇವತ್ತಿಗೂ ಪಂಕ್ತಿಬೇಧ ವಿಚಾರ ಬಂದರೆ ಮೊದಲು ನೆನಪಾಗುವುದೇ ಜಿ.ವಿ. ಶ್ರೀರಾಮರೆಡ್ಡಿ.
ಕಾರ್ಮಿಕರ ಜ್ವಲಂತ ಸಮಸ್ಯೆ ದರ್ಶನ:
ಶಾಸಕರಾಗಿ ವಿಧಾನಸೌಧದಲ್ಲಿ ಒಂದು ವಿಷಯ ಪ್ರಸ್ತಾಪಿಸಲು ನಿಂತರೇ ಇಡೀ ಸದನವೇ ಮೌನಕ್ಕೆ ಶರಣಾಗುತ್ತಿತ್ತು. ಕಾನೂನು ಪಂಡಿತರನ್ನು ಮೀರುಸುವ ಲಾಜಿಕ್ ಇಟ್ಟುಕೊಂಡು ವಿಷಯ ಪ್ರಸ್ತಾಪಿಸುತ್ತಿದ್ದರು. ಮುಚ್ಚು ಮರೆ ಇಲ್ಲದೇ ಭ್ರಷ್ಟಾಚಾರ, ಕಾರ್ಮಿಕರ ಜ್ವಲಂತ ಸಮಸ್ಯೆಗಳ ಬಗ್ಗೆ, ರೈತರ ಬಗ್ಗೆ ಧ್ವನಿಯೆತ್ತುದ್ದರು. ಯಾವ ಮುಜಗರಕ್ಕೂ ಒಳಗಗಾಗದೇ ನಾಡಿನ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು. ರೆಡ್ಡಿ ಅವರನ್ನು ಮಾತಲ್ಲಿ ಯಾರೂ ಮಣಿಸಲು ಅಗುತ್ತಿರಲಿಲ್ಲ. ಈವರೆಗೂ ಅಂತಹ ವಾಗ್ಮಿ ಅವಿಭಜಿತ ಕೋಲಾರ ಜಿಲ್ಲೆ ಕಂಡಿಲ್ಲ. ಮುಂದೆಯೂ ಕಾಣುವುದಿಲ್ಲ. ಒಳ್ಳೆಯ ಜನ ನಾಯಕರು ಇದ್ದರು ಮಾತನಾಡುವುದಿಲ್ಲ. ಮಾತನಾಡುವರು ಒಳ್ಳೆಯವರಾಗಿಲ್ಲ. ಈ ಎರಡನ್ನೂ ಮೈಗೂಡಿಸಿಕೊಂಡು ನಾಡಿನ ಸಮಸ್ಯೆಗಳನ್ನು ಸದನದಲ್ಲಿ ಮುಲಾಜಿಲ್ಲದೇ ಪ್ರಸ್ತಾಪಿಸುತ್ತಿದ್ದ ಏಕೈಕ ನಾಯಕ ಜಿ.ವಿ. ಶ್ರೀರಾಮರೆಡ್ಡಿ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಸ್ಮರಿಸಿದ್ದಾರೆ. ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎನ್ನುತ್ತಾರೆ ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ.
ನೋಟು ಪಡೆದು ವೋಟು ಪಡೆಯದ ಕ್ಷೇತ್ರವಾಗಿದ್ದ ಬಾಗೇಪಲ್ಲಿ ಕೊನೆಗೂ ಚುನಾವಣೆಯ ಅಕ್ರಮಗಳಿಗೆ ತಲೆ ಬಾಗಿದ್ದೇ ಜಿ.ವಿ. ಶ್ರೀರಾಮರೆಡ್ಡಿಯಂತರ ಹೋರಾಟಗಾರ ನಾಯಕ ಸೋಲನ್ನು ಅನುಭವಿಸುವಂತಾಯಿತು. ಜಿ.ವಿ. ಶ್ರೀರಾಮರೆಡ್ಡಿ ಅಂದ್ರೆ ವ್ಯಕ್ತಿಯಲ್ಲ, ಅದು ಚಳವಳಿಗಳ ಸೃಷ್ಟಿಕರ್ತ, ಹೋರಾಟದ ಪ್ರತೀಕವಾಗಿಯೇ ಕೊನೆ ದಿನಗಳ ವರೆಗೂ ಬದುಕು ತೋರಿಸಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.