ಲಾಡ್ ಮತ್ತೊಂದು ಅಕ್ರಮ ಬಯಲಿಗೆಳೆದ ಹಿರೇಮಠ್
ಬೆಂಗಳೂರು, ಡಿ. 21: ಕಾನೂನುಬಾಹಿರ ಗಣಿ ವ್ಯವಹಾರದಲ್ಲಿ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಅವರನ್ನು ಸಚಿವ ಸ್ಥಾನದಿಂದ ಕೆಳೆಗಿಳಿಯವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು ಈ ಬಾರಿ ಲಾಡ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ಬಳಿ ಲಾಡ್ ಎಸಗಿರುವ ಮತ್ತೊಂದು ಅಕ್ರಮವನ್ನು ಬಯಲಿಗೆಳೆದಿರುವ ಹಿರೇಮಠ್ ಅವರು ಸಂಡೂರಿನ ನಾರಿಹಳ್ಳ ಡ್ಯಾಮ್ ಪಕ್ಕದ ಅರಣ್ಯ ಪ್ರದೇಶವನ್ನು ಮಾಜಿ ಸಚಿವ ಸಂತೋಷ್ ಲಾಡ್ ಕುಟುಂಬದವರು (ಸಂಸದ ಅನಿಲ್ ವಿ ಲಾಡ್ ಮತ್ತು ಅವರ ಸೋದರ ಅಶೋಕ್ ವಿ ಲಾಡ್) ಒತ್ತುವರಿ ಮಾಡಿಕೊಂಡು ಅದರಲ್ಲಿ ರೆಸಾರ್ಟ್ ನಿರ್ಮಾಣ ಮಾಡಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗಮನಾರ್ಹವೆಂದರೆ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಕೆ ಎನ್ ಸೋಮಶೇಖರ್ ಎಂಬುವವರು ಡಿಸೆಂಬರ್ 5ರಂದು ಕೋರ್ಟಿನಲ್ಲಿ PILದಾಖಲಿಸಿದ್ದಾರೆ. ಇದೇ ವೇಳೆ, ತುಂಗಭದ್ರಾ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲೂ ಅನಿಲ್ ಲಾಡ್ ಅವರು Kollur Mookambika Water Sports ಎಂಬ ರೆಸಾರ್ಟ್ ಅನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದೂ ಸಹ ಆರೋಪಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಿರೇಮಠ್ ಅವರು ಲಾಡ್ ಹೆಸರಲ್ಲಿ ಸಂಡೂರಿನಲ್ಲಿ 47.24 ಎಕರೆ ಅರಣ್ಯ ಪ್ರದೇಶವನ್ನು 2003ರಲ್ಲೇ ಒತ್ತುವರಿ ಮಾಡಿಕೊಂಡು ಅಲ್ಲಿ VSL Amazing & Valley Resorts ಎಂಬ ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಆ ರೆಸಾರ್ಟಿನಲ್ಲಿ ಅನೇಕ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿಯನ್ನೂ ಪಡೆದಿಲ್ಲ ಎಂಬ ಗಂಭೀರ ಆರೋಪ ಹೊರಿಸಿದ್ದಾರೆ.
ರಾಜಕಾರಣಿಗಳ ಅಕ್ರಮ ಕಾರ್ಯಗಳಿಗೆ ಈ ಅರಣ್ಯ ಪ್ರದೇಶ ಬಳಕೆಯಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಅಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸರಕಾರದ ರಕ್ಷಣೆ ದೊರಕುತ್ತಲೇ ಬಂದಿದೆ. ಇವರೆಲ್ಲಾ ಅಪರಾಧ ಚಟುವಟಿಕೆಯ ಆಧಾರದ ಮೇಲೆಯೇ ಮಂತ್ರಿಗಳಾಗುತ್ತಿದ್ದಾರೆ ಎಂದೂ ಹಿರೇಮಠ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತಮ್ಮನ್ನು ವಿಧಾನಸಭೆಗೆ ಕರೆಯಿಸಿಕೊಂಡು ವಾಗ್ದಂಡನೆಗೆ ಗುರಿಪಡಿಸುವ ಬೆದರಿಕೆ ಕ್ರಮಕ್ಕೆ ಜಗ್ಗದ ಹಿರೇಮಠ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪವನ್ನು ಪುನರುಚ್ಚರಿಸಿದರು. ಜತೆಗೆ ತಮ್ಮ ಆರೋಪಕ್ಕೆ ಮತ್ತೊಂದು ಆಯಾಮವನ್ನೂ ಒದಗಿಸಿದ್ದಾರೆ.
2003ರ ಇನ್ನೊಂದು ಅರಣ್ಯ ಪ್ರದೇಶ ಒತ್ತುವರಿ ಪ್ರಕರಣದಲ್ಲಿ ಕೆಆರ್ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ರಾಯಲ್ಪಾಡು ಹೋಬಳಿ ಜಿನಗಲಕುಂಟೆ ರಾಜ್ಯ ಅರಣ್ಯ ವ್ಯಾಪ್ತಿಯ ಹೊಸಹುಡ್ಕ ಗ್ರಾಮದಲ್ಲಿ 62 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಆದರೆ ಈ ಒತ್ತುವರಿಯನ್ನು ರಾಜಕೀಯ ಶಕ್ತಿಗಳನ್ನು ಬಳಕೆ ಮಾಡಿಕೊಂಡು ಮುಚ್ಚಿಡುವ ಯತ್ನ ನಡೆಸುತ್ತಿದ್ದಾರೆ ಎಂದು ಅವರು ಪುನರಾರೋಪಿಸಿದರು.
ಖರೀದಿ ಮಾಡಿದ್ದೇನೆ ಎಂದು ಅರಣ್ಯ ಭೂಮಿಯನ್ನು ತೋರಿಸುತ್ತಿದ್ದಾರೆ. ಆದರೆ ಅವರು ಖರೀದಿ ಮಾಡಿದ್ದು 40 ಎಕರೆಯ ಬೇರೆ ಜಮೀನು. ಇದಕ್ಕೆ ಸಂಬಂಧಪಟ್ಟಂತೆ ಸರ್ವೇ ನಡೆಸಲು ಹೋದವರಿಗೆ ಯಡಿಯೂರಪ್ಪ ಅಡ್ಡಿಪಡಿಸಿದ್ದಾರೆ. ಕಾಯ್ದೆಯನ್ನು ಮಾಡುವವರೇ ಕಾಯ್ದೆಯನ್ನು ಮುರಿದು ಮುಂದುವರಿಯುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ಮಂತ್ರಿಗಳೇ ಹಕ್ಕುಚ್ಯುತಿ ಹಾಕುತ್ತೇವೆ ಎಂದು ಹೇಳುತ್ತಿರುವುದು ವಿಪರ್ಯಾಸ. ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಸಂಪಾದಿಸಿದ ಅರಣ್ಯ ಪ್ರದೇಶಗಳನ್ನೆಲ್ಲಾ ಶೀಘ್ರ ವಾಪಸ್ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಶಾಸಕಾಂಗ, ಕಾರ್ಯಾಂಗ ಮೈ ಚಳಿ ಬಿಟ್ಟು ಕೆಲಸ ಮಾಡಬೇಕಿದೆ. ಸರಕಾರದಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಶಾಸಕರು, ಅಧಿಕಾರಿಗಳು, ಉದ್ಯಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ ಅವರು, ರಮೇಶ್ ಕುಮಾರ್, ಸಂತೋಷ್ ಲಾಡ್, ಅನಿಲ್ಲಾಡ್, ಅಧಿಕಾರಿಗಳಾದ ಪಿ.ಸಿ.ರೈ, ಉದ್ಯಮಿಗಳಾದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ ಸಿದ್ದಾರ್ಥ, ರಾಜಾ ಬಾಗಮಾನೆ ಮುಂತಾದವರು ಸರಕಾರಕ್ಕೆ ಮೋಸ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದರು.