'ಮೋದಿ ಸುನಾಮಿ' ಹೇಳಿಕೆಯನ್ನು ಸಮರ್ಥಿಸಿಕೊಂಡ ಅಣ್ಣಾಮಲೈ
ಬೆಂಗಳೂರು, ಅಕ್ಟೋಬರ್ 8: ದೇಶದಲ್ಲಿ ಮೋದಿ ಅವರ ಅಭಿವೃದ್ಧಿಯ ಸುನಾಮಿ ಶುರುವಾಗಿದೆ ಎಂದು ನೀಡಿದ್ದ ತಮ್ಮ ಹೇಳಿಕೆಯನ್ನು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಹೇಳಿಕೆಗೆ ಸೂಕ್ತವಾದ ಉದಾರಣೆಗಳನ್ನು ನೀಡಿ ಚರ್ಚಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಕುವೈತ್ನಲ್ಲಿ ಭಾರತೀಯ ಪ್ರವಾಸಿ ಪರಿಷದ್ ಶುಕ್ರವಾರ ಆಯೋಜಿಸಿದ್ದ 'ಕರುನಾಡ ಡಿಂಡಿಮ' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಣ್ಣಾಮಲೈ ಅವರು ಮೋದಿ ಅವರನ್ನು ಶ್ಲಾಘಿಸಿದ್ದರು.
ಅಭಿವೃದ್ಧಿಯ ಸುನಾಮಿ ಬರುತ್ತಿದೆ: ಮೋದಿಯನ್ನು ಹೊಗಳಿದ ಅಣ್ಣಾಮಲೈ
ಇಡೀ ಭಾರತ ಬಹಳ ವೇಗವಾಗಿ ಬದಲಾಗುತ್ತಿದೆ. ಸುನಾಮಿ ಬಂದಾಗ ಭೌಗೋಳಿಕ ಬದಲಾವಣೆಗಳು ಆಗುತ್ತವೆ. ಅದೇ ರೀತಿ ಭಾರತದಲ್ಲಿ ಅಭಿವೃದ್ಧಿಯ ಬದಲಾವಣೆಗಳು ಆಗುತ್ತಿವೆ. ಮುಖ್ಯವಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಇವು ಸಾಧ್ಯವಾಗುತ್ತಿವೆ. ಕೆಲವು ಸಾಮ್ರಾಜ್ಯಗಳು, ರಾಜರ ಆಡಳಿತದ ಬದಲಾದಾಗ ದೇಶದ ಮೂಲಭೂತ ತತ್ವಗಳು ಸಹ ಬದಲಾಗುತ್ತವೆ. ಅಶೋಕ, ಚಂದ್ರಗುಪ್ತ ಮೌರ್ಯ, ಅಕ್ಬರ್, ಬಾಬರ್ ರಾಜರ ಆಡಳಿತ ಬಂದಾಗ ಈ ಬದಲಾವಣೆಗಳಾಗಿದ್ದವು. ಹಾಗೆಯೇ ಈಗ ಅಭಿವೃದ್ಧಿ ತಳಹದಿಗಳು ಬದಲಾಗುತ್ತಿವೆ ಎಂದು ಹೇಳಿದ್ದರು.
ಅಣ್ಣಾಮಲೈ ವಿರುದ್ಧ ಟೀಕೆ
ಅಣ್ಣಾಮಲೈ ಅವರ ಹೇಳಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರೆ, ಇನ್ನು ಕೆಲವರು ಅಣ್ಣಾಮಲೈ ಅವರು ಬಿಜೆಪಿಯನ್ನು ಸೇರುವ ಒಂದೊಂದೇ ಹೆಜ್ಜೆಗಳನ್ನು ಇರಿಸುತ್ತಿದ್ದಾರೆ. 'ಸಿಂಗಂ' ಎಂದು ಹೆಸರಾಗಿದ್ದ ಅವರ ಮನಸ್ಸಿನಲ್ಲಿ ಈಗ 'ಸಂಘಂ' ಇದೆ ಎಂದು ಅವರು ಆರೆಸ್ಸೆಸ್ ಹಾಗೂ ಬಿಜೆಪಿಯ ತತ್ವಗಳೆಡೆಗೆ ವಾಲುತ್ತಿದ್ದಾರೆ. ಇದು ರಾಜಕೀಯ ಪ್ರವೇಶಿಸುವ ಮುನ್ಸೂಚನೆ ಎಂದು ಟೀಕಿಸಿದ್ದಾರೆ.
ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ
ನಿಮ್ಮ ಮಾತು ಆಘಾತಕಾರಿ
'ಭಾರತ ಬಹಳ ಚೆನ್ನಾಗಿದೆ ಎಂದು ನೀವು ಹೇಳಿದ್ದೀರಿ. ನೀವು ಹೇಗೆ ಆ ರೀತಿ ಹೇಳುತ್ತೀರಿ? ಸಾಮಾನ್ಯ ಜನರ ಸಂಕಷ್ಟ ಮತ್ತು ನೋವು ನಿಮಗೆ ಅರ್ಥವಾಗುತ್ತಿಲ್ಲವೇ? ನಿಮ್ಮ ಮಾತುಗಳನ್ನು ಕೇಳಿ ನನಗೆ ಆಘಾತವಾಯಿತು' ಎಂದು ಇರ್ಷಾದ್ ಬೈರಿಕಟ್ಟೆ ಎಂಬುವವರು ಅಣ್ಣಾಮಲೈ ಅವರ ಹೇಳಿಕೆಯನ್ನು ವಿರೋಧಿಸಿದ್ದರು.
ಆಡಿದ ಮಾತಿಗೆ ನಾನು ಬದ್ಧ
ಇರ್ಷಾದ್ ಅವರ ಆರೋಪಕ್ಕೆ ಸರಣಿ ಟ್ವೀಟ್ಗಳಲ್ಲಿ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಆಡಿದ ಪ್ರತಿ ಪದಕ್ಕೂ ಬದ್ಧನಾಗಿದ್ದೇನೆ ಮತ್ತು ಮಾತನಾಡುವುದನ್ನು ಮುಂದುವರಿಸುತ್ತೇನೆ. ಭಾರತದಲ್ಲಿನ ಆವರ್ತನೀಯ ಮತ್ತು ರಚನಾತ್ಮಕ ಆರ್ಥಿಕ ಬದಲಾವಣೆಗಳ ಬಗ್ಗೆ ಮಾತನಾಡಲು ಇದು ವೇದಿಕೆಯಲ್ಲ. ವಿದೇಶದಲ್ಲಿ 47 ಡಿಗ್ರಿ ಸೆಲ್ಸಿಯಸ್ನಲ್ಲಿ ಕಠಿಣವಾಗಿ ಪರಿಶ್ರಮ ಪಡುತ್ತಿರುವ ಅನಿವಾಸಿ ಭಾರತೀಯರು ಅದಕ್ಕೆ ತಕ್ಕಂತೆ ಗೌರವವನ್ನು ಪಡೆಯಬೇಕು. ಅಧಿಕಾರದಲ್ಲಿರುವ ಸರ್ಕಾರವು ದೇಶ ಮೊದಲು ಎಂಬ ನೀತಿಯನ್ನು ಯಾವಾಗಲೂ ಮುಂದಿಟ್ಟುಕೊಂಡು ಕಠಿಣ ಆದರೆ ರಾಜಿಯಾಗದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮನಸ್ಥಿತಿಯನ್ನು ಬದಲಿಸಬೇಕು
ನನ್ನ ನಡೆ ಸೇರಿದಂತೆ ನಮ್ಮ ಎಲ್ಲ ಚಟುವಟಿಕೆಗಳನ್ನೂ ಒಂದು ಪಕ್ಷ ಅಥವಾ ಸಿದ್ಧಾಂತಕ್ಕೆ ತಳುಕು ಹಾಕುವ ಮನಸ್ಥಿತಿಯಿಂದ ನಾವು ಮೊದಲು ಹೊರಬರಬೇಕು. ಪ್ರತಿಯೊಂದೂ ಜಾತಿ ಮತ್ತು ನಮಗೆ ಎಲ್ಲವೂ ದಕ್ಕುತ್ತದೆ ಎಂಬ ಸ್ವಘೋಷಿತ ಹೆಮ್ಮೆಯ ಸುತ್ತವೇ ಪ್ರತಿಯೊಂದೂ ಸುತ್ತುತ್ತಿದೆ ಎನ್ನುವಂತಹ ಭಾರತ ಸತ್ತುಹೋಗಿದೆ. ಡಾ. ಮನಮೋಹನ್ ಸಿಂಗ್ ಅವರ ಬಗ್ಗೆ ಹೆಮ್ಮೆಯುಂಟಾದಾಗ ಕೂಡ ಅವರನ್ನು ಹೊಗಳಿದ್ದೇನೆ. ನೀವು ನನ್ನ ಹಿಂದಿನ ಮಾತುಗಳನ್ನು ಪರಿಶೀಲಿಸಬಹುದು ಎಂದಿದ್ದಾರೆ.
ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?
ಭಾರತವನ್ನು ನೋಡುವ ಬಗೆ ಬದಲಾಗಿದೆ
ಮಧ್ಯಪ್ರಾಚ್ಯಕ್ಕೆ ಹೋಗಿ ಅಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳಿ. ಭಾರತೀಯರನ್ನು ಹೇಗೆ ದ್ವೇಷಿಸುತ್ತಿದ್ದರು ಮತ್ತು ಈಗ ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂದು. ನಿಜ. ಖಂಡಿತವಾಗಿಯೂ ಆರ್ಥಿಕತೆಯ ವೇಗ ಕುಸಿದಿದೆ. ಆದರೆ ಅದು ಇಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ.
ಇದನ್ನು ಸಂಪೂರ್ಣ ಪ್ರಬುದ್ಧ ತಿಳಿವಳಿಕೆಗಾಗಿ ಚೀನಾ-ಅಮೆರಿಕ ವ್ಯಾಪಾರ ಸಮರದ ಬಗ್ಗೆ ಓದಿ. ಸೌದಿ ಮತ್ತು ಇರಾನ್ ನೇತೃತ್ವದ ಮಧ್ಯಪ್ರಾಚ್ಯದ ಬಿಕ್ಕಟ್ಟು, ಆರ್ಟಿಎ ಕುಸಿತ, ಸಂಪನ್ಮೂಲಗಳ ಬಳಕೆಯಲ್ಲಿ ಹೊಸ ಬದಲಾವಣೆಯು ರಚನಾತ್ಮಕ ಬದಲಾವಣೆಗೆ ಎಡೆ ಮಾಡಿಕೊಡುತ್ತಿದೆ ಎಂದು ವಿವರಿಸಿದ್ದಾರೆ.
ನನಗೆ ದೇಶ ಮೊದಲು
ನೀವು ಇನ್ನೂ ಒಪ್ಪಿಕೊಳ್ಳುವುದಿಲ್ಲ ಎಂದಾದರೆ, ನಾನು ನಿಮ್ಮದೇ ಸ್ಥಳದಲ್ಲಿ ಸಾರ್ವಜನಿಕ ಚರ್ಚೆಗೆ ಸಿದ್ಧ. ನಾನು ಅಲ್ಲಿಗೆ ಬಂದು ಏನು ಹೇಳಿದ್ದೇನೆಯೋ ಅಷ್ಟನ್ನೂ ಸಮರ್ಥಿಸಿಕೊಳ್ಳಬಲ್ಲೆ. ಅದೇ ಸಮಯಕ್ಕೆ ಪ್ರಜಾಪ್ರಭುತ್ವದಲ್ಲಿ ನಿಜವಾಗಿ ನಂಬಿಕೆಯುಳ್ಳವನಾಗಿ ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತೀರಿ ಎಂದು ಭಾವಿಸುತ್ತೇನೆ. ಹಾಗೆಯೇ ನೀವು ನನ್ನ ಅಭಿಪ್ರಾಯಗಳನ್ನು ಒಪ್ಪಲೇಬೇಕು ಎನ್ನುವಂತಿಲ್ಲ. ಅದರಿಂದ ಯಾವ ಸಮಸ್ಯೆಯೂ ಇಲ್ಲ.
ನನಗೆ ದೇಶ ಮೊದಲು- ಯಾವಾಗಲೂ ಮತ್ತು ಎಂದೆಂದಿಗೂ. ದೇಶವನ್ನು ಮುಂಚೂಣಿಗೆ ಯಾರು ತರುತ್ತಾರೋ ನಾನು ಅಲ್ಲಿರುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ