ಸಿಎಂ ಯಡಿಯೂರಪ್ಪ ಘೋಷಿಸಿದ ಆರ್ಥಿಕ ಪ್ಯಾಕೇಜ್ "ಊಟಕ್ಕಿಲ್ಲದ ಉಪ್ಪಿನಕಾಯಿ"!
ಬೆಂಗಳೂರು, ಮೇ 19: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿರುವ 1250 ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿ ಅಂತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಪ್ಯಾಕೇಜ್ ಘೋಷಿಸುವ ಮುನ್ನ ನೆರೆ ರಾಜ್ಯಗಳನ್ನು ನೋಡಿಯಾದರೂ ಯಡಿಯೂರಪ್ಪ ಪಾಠ ಕಲಿಯಬೇಕಿತ್ತು ಎಂದರು. ಮೂಗಿಗೆ ತುಪ್ಪ ಸವರುವ ರೀತಿಯ ಪ್ಯಾಕೇಜ್ ಘೋಷಿಸುವ ಮೂಲಕ ಇತರೆ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ
ಬಡ ಕುಟುಂಬಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ ಮತ್ತು ದುಡಿಯುವ ವರ್ಗದ ಜನರಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡುವ ಪ್ಯಾಕೇಜ್ ಘೋಷಿಸಬೇಕು. ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಲಾಕ್ಡೌನ್ನ್ನು ಜಾರಿಗೊಳಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪ್ಯಾಕೇಜ್ ಮೊತ್ತದಲ್ಲೇ ತಪ್ಪು ಲೆಕ್ಕ ಎಂದ ಸಿದ್ದರಾಮಯ್ಯ
ಮುಖ್ಯಮಂತ್ರಿಗಳು 1250 ಕೋಟಿ ರೂ. ಪ್ಯಾಕೇಜ್ ಎಂದು ಹೇಳಿದ್ದಾರೆ. ಆದರೆ, ಅವರೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಪ್ಯಾಕೇಜ್ ಮೊತ್ತ 1111.82 ಕೋಟಿ ರೂಪಾಯಿ ಆಗುತ್ತದೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗಾಗಿ 494 ಕೋಟಿ ರೂಪಾಯಿ. ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಸರ್ಕಾರ ತನ್ನ ಕೈಯಿಂದ ನೀಡುವುದಲ್ಲ. ಕಾರ್ಮಿಕರ ಕಲ್ಯಾಣ ನಿಧಿಯಿಂದ ನೀಡುವ ಹಣವಾಗಿದೆ. ಕಾರ್ಮಿಕರು ತಮ್ಮ ಕೂಲಿ ಹಣದಲ್ಲಿ ನೀಡಿರುವ ವಂತಿಗೆಯನ್ನು ಪರಿಹಾರದ ಪ್ಯಾಕೇಜಿನಲ್ಲಿ ಸೇರಿಸಬಾರದು ಎಂದು ಆಗ್ರಹಿಸಿದರು.
Recommended Video
ಇದು ಸಾರ್ವಜನಿಕರಿಗೆ ಪ್ರಯೋಜನವಿಲ್ಲದ ಪ್ಯಾಕೇಜ್
ಸಹಕಾರ ಇಲಾಖೆಯಿಂದ ಪಿಎಲ್ಡಿ ಬ್ಯಾಂಕ್ ಇನ್ನಿತರೆ ಸಹಕಾರ ಬ್ಯಾಂಕುಗಳು ನೀಡಿರುವ 134.38 ಕೋಟಿ ರೂಪಾಯಿ ಸಾಲ ವಸೂಲಾತಿ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಇದನ್ನು ಸರ್ಕಾರ ಪರಿಹಾರ ಎಂಬಂತೆ ಬಿಂಬಿಸುವುದು ಸರಿಯಲ್ಲ. ಕಟ್ಟಡ ಕಾರ್ಮಿಕರ ಪರಿಹಾರ ಮತ್ತು ಸಾಲ ವಸೂಲಾತಿ ಮುಂದಕ್ಕೆ ಹಾಕಿರುವುದನ್ನು ಕೈ ಬಿಟ್ಟರೆ ಉಳಿಯವುದು 483.44 ಕೋಟಿ ರೂ. ಮಾತ್ರ ಆಗುತ್ತದೆ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಜನರಿಗೆ ಉಪಯೋಗವಾಗದ ಪ್ಯಾಕೇಜ್ ಎಂದು ಸಿದ್ದರಾಮಯ್ಯ ದೂಷಿಸಿದ್ದಾರೆ.
ಫಲಾನುಭವಿಗಳಿಗೆ ಸಿಗುತ್ತದೆಯೇ ಪರಿಹಾರ?
ಕಳೆದ ವರ್ಷ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 2,100 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದರು. ಅದರಲ್ಲಿ 850 ಕೋಟಿ ರೂ.ಗಳಷ್ಟು ಕಟ್ಟಡ ಕಾರ್ಮಿಕರ ನಿಧಿಯಿಂದಲೇ ಹಣವನ್ನು ಖರ್ಚು ಮಾಡಿ, ಸರ್ಕಾರ ಖರ್ಚು ಮಾಡಿದೆ ಎಂದು ಸುಳ್ಳು ಹೇಳಲಾಯಿತು. ಅಲ್ಲದೇ ಕಳೆದ ಬಾರಿ ಬಹುಪಾಲು ಹಣವನ್ನು ಬಾದಿತರಿಗೆ ನೀಡಲೇ ಇಲ್ಲ. 7.75 ಲಕ್ಷ ಆಟೋ, ಕ್ಯಾಬ್, ಚಾಲಕರಿಗೆ ತಲಾ 5,000 ರೂ. ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ವಾಸ್ತವದಲ್ಲಿ ಕೇವಲ 2.10 ಲಕ್ಷ ಜನರಿಗೆ ಮಾತ್ರ ನೀಡಲಾಯಿತು. ಹಾಗೆ ಸವಿತಾ ಸಮಾಜದ ಶೇ. 50 ಜನರಿಗೂ ಪರಿಹಾರ ಸಿಗಲಿಲ್ಲ. ಅದೇ ರೀತಿ ರೈತರಿಗೆ ಹೂ ಬೆಳೆಗಾರರಿಗೆ ಹಣ್ಣು ಬೆಳಗಾರರಿಗೆ ಘೋಷಿಸಿದ್ದ ಪರಿಹಾರದ ಹಣದ ಶೇ.50ರಷ್ಟು ಜನರಿಗೆ ಸಿಗಲಿಲ್ಲ ಎಂದರು.
ಬಿಜೆಪಿ ಸರ್ಕಾರಕ್ಕೆ ಜನಪರ ಯೋಚನೆಗಳಿಲ್ಲ
ಕರ್ನಾಟಕ ಸರ್ಕಾರ ಘೋಷಿಸಿರುವುದು ಒಂದು ಅವೈಜ್ಞಾನಿಕ ಪ್ಯಾಕೇಜ್ ಆಗಿದೆ. ತಮಿಳುನಾಡಿನಲ್ಲಿ 2.07,67,000 ಕುಟುಂಬಗಳಿಗೆ ತಲಾ 4,000 ರೂ.ಗಳ ಪ್ರಕಾರ ಸುಮಾರು 8,368 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದೆ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಎಂದು ಅಧಿಕಾರ ಹಿಡಿದ ಕರ್ನಾಟಕದಲ್ಲಿ ಯಾವುದೇ ಜನಪರ ಆಲೋಚನೆಗಳೇ ಇಲ್ಲ. ಅದೇ ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರವಿಲ್ಲದೇ ಉತ್ತಮ ರೀತಿ ಪರಿಹಾರ ನೀಡಲಾಗುತ್ತಿದೆ. ಇಂದು ಘೋಷಿಸಿದ ಪ್ಯಾಕೇಜ್ ಅಕ್ಕಪಕ್ಕದ ರಾಜ್ಯಗಳ ಎದುರು ತೀರಾ ಸಣ್ಣದಾಗಿದೆ. ಆಂಧ್ರ ಪ್ರದೇಶ, ದೆಹಲಿ, ಕೇರಳ ರಾಜ್ಯಗಳು ಜನಪರವಾದ ಪ್ಯಾಕೇಜುಗಳನ್ನು ಘೋಷಿಸಿವೆ ಎಂದು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಬರೆದ 12 ಪತ್ರಗಳಿಗೆ ಇಲ್ಲ ಸ್ಪಂದನೆ
ರಾಜ್ಯದಲ್ಲಿ ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಛಾಯಾಗ್ರಾಹಕರು, ಟೈಲರಿಂಗ್ ವೃತ್ತಿಯವರು, ಸವಿತಾ ಸಮಾಜದವರಿಗೂ ಪರಿಹಾರ ನೀಡಬೇಕು. ಸೋಂಕು ನಿಯಂತ್ರಣಕ್ಕೆ ಬರುವ ವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಮಾಡಬೇಕು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಮುಖ್ಯಮಂತ್ರಿಗಳಿಗೆ ಈವರೆಗೆ 12 ಪತ್ರಗಳನ್ನು ಬರೆದಿದ್ದೇನೆ. ಯಾವುದಕ್ಕೂ ಉತ್ತರ ನೀಡುವ ಸೌಜನ್ಯ ಕೂಡ ಸಿಎಂ ಅವರಿಗೆ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಜಾಯಮಾನ ಈ ಸರ್ಕಾರಕ್ಕೆ ಇಲ್ಲ ಎಂದು ಕಿಡಿ ಕಾರಿದ್ದಾರೆ.