ಮೊದಲು ಇವಿಎಂ, ನಂತರ ಚುನಾವಣಾ ಆಯೋಗ, ಈಗ ಸುಪ್ರೀಂಕೋರ್ಟ್: ಸುರೇಶ್ ಕುಮಾರ್ ಲೇವಡಿ
ಬೆಂಗಳೂರು, ಜುಲೈ 17: ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿ ಮುಖಂಡ ಸುರೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, ಮೊದಲು ಇವಿಎಂ, ನಂತರ ಚುನಾವಣಾ ಆಯೋಗ, ಈಗ ಸುಪ್ರೀಂ ಕೋರ್ಟ್... ಮುಂದೆ ದಿನೇಶ್ ಗುಂಡೂರಾವ್ ಇನ್ಯಾರನ್ನು ಬಿಜೆಪಿ ಪರ ಎಂದು ಬಯ್ಯಬಹುದು? ಎಂದು ಸುರೇಶ್ ಲೇವಡಿ ಮಾಡಿದ್ದಾರೆ.
ಶಾಸಕಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣ: ದಿನೇಶ್ ಗುಂಡೂರಾವ್
ಸರ್ವೋಚ್ಛ ನ್ಯಾಯಾಲಯ ಇಂದು ಕೇವಲ ತೀರ್ಪು ಮಾತ್ರವಲ್ಲ ನ್ಯಾಯವನ್ನೂ ನೀಡಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿರುವ ಸುರೇಶ್ ಕುಮಾರ್, ಇದಕ್ಕೆ ತೀರ್ಪು-ನ್ಯಾಯ ಗಳ ನಡುವಿನ ಜಿಜ್ಞಾಸೆ ಯ ನಡುವೆ ಎನ್ನುವುದನ್ನು ಬ್ರಾಕೆಟ್ ನಲ್ಲಿ ಹಾಕಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಟ್ವಿಟ್ಟರ್ನಲ್ಲಿ ಅಸಮಾಧಾನ ಹೊರಹಾಕಿದ್ದ ದಿನೇಶ್ ಗುಂಡೂರಾವ್, ಶಾಸಕಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣ ಮಾಡಿದೆ ಎಂದು ಬರೆದುಕೊಂಡಿದ್ದರು.
ಸುಪ್ರೀಂಕೋರ್ಟ್ನ ಇಂದಿನ ತೀರ್ಪನ್ನು ಕಟುವಾಗಿ ವಿಮರ್ಶಿಸಿದ್ದ ದಿನೇಶ್ ಗುಂಡೂರಾವ್, ಸರ್ಕಾರವನ್ನು ಉರುಳಿಸಲು ಟೊಂಕಕಟ್ಟಿ ನಿಂತಿರುವ ಶಾಸಕರಿಗೆ ಸುಪ್ರೀಂಕೋರ್ಟ್ ತೀರ್ಪು ಸರಿಯಾಗಿ ಸಹಾಯ ಮಾಡಿದೆ ಎಂದು ಹೇಳಿದ್ದರು.
ಇಂದಿನ ಸುಪ್ರೀಂಕೋರ್ಟ್ ತೀರ್ಪು ಶಾಸಕಾಂಗದ ಮೇಲೆ ಅತಿಕ್ರಮಣ ಮಾಡಿದ್ದಾಗಿದೆ. ಇದೊಂದು ಕೆಟ್ಟ ತೀರ್ಪಾಗಿದ್ದು, ದೂಷಿತರಿಗೆ ರಕ್ಷಣೆ ನೀಡುವ, ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವ ತೀರ್ಪು ಇದಾಗಿದೆ ಎಂದು ದಿನೇಶ್, ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.