ಅಮಿತ್ ಶಾ ಎಚ್ಚರಿಕೆಗೂ ಡೋಂಟ್ ಕೇರ್ ಎಂದ ಎಂ.ಪಿ.ರೇಣುಕಾಚಾರ್ಯ
ಯಡಿಯೂರಪ್ಪನವರ ಸರಕಾರದ ಸಂಪುಟ ವಿಸ್ತರಣೆ ಆಗಿ ಒಂದು ವಾರ ಆಗುತ್ತಾ ಬಂದರೂ, ಅದರ ಅಸಮಾಧಾನದ ಹೊಗೆ ಇನ್ನೂ ಕಮ್ಮಿಯಾದಂತಿಲ್ಲ. ಹಾದಿಬೀದಿಯಲ್ಲಿ ಮಾತನಾಡಬಾರದೆಂದು ಎಚ್ಚರಿಕೆ ಕೊಟ್ಟರೂ, ಬೇಕಾಬಿಟ್ಟಿ ಹೇಳಿಕೆಗಳು ಮುಂದುವರಿಯುತ್ತಲೇ ಇದೆ.
ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದರೂ, ಪಕ್ಷದ ಮುಖಂಡರ ಅಶಿಸ್ತಿನ ಘಟನೆಗಳು ಮುಂದುವರಿಯುತ್ತಲೇ ಇದೆ.
ಬೆಳಗಾವಿಯಲ್ಲಿ ಅಮಿತ್ ಶಾ ಹೇಳಿದ 'ಡಬಲ್ ಇಂಜಿನ್ ಸರಕಾರ'ದ ನಿಜವಾದ ಅರ್ಥ ಇದೇನಾ?
ನಿಮ್ಮ ದೂರು ಏನಿದ್ದರೂ ವರಿಷ್ಠರ ಬಳಿ ಹೇಳಿಕೊಳ್ಳಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ಸಣ್ಣಪುಟ್ಟದ್ದಕ್ಕೆಲ್ಲಾ ದೆಹಲಿಗೆ ಬರಬೇಡಿ ಎಂದು ಅಮಿತ್ ಶಾ ಸೂಚಿಸಿದ್ದರು. ಆದರೂ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂ.ಪಿ.ರೇಣುಕಾಚಾರ್ಯ, ಸರಕಾರದ ವಿರುದ್ದ ಕಿಡಿಕಾರುತ್ತಲೇ ಬರುತ್ತಿದ್ದಾರೆ.
ಶಾಸಕರಾದ ಸುನೀಲ್ ಕುಮಾರ್, ಸತೀಶ್ ರೆಡ್ಡಿ ಮುಂತಾದವರು ಮೊದಲು ಸಂಪುಟ ವಿಸ್ತರಣೆಯ ಬಗ್ಗೆ ಅಪಸ್ವರ ಎತ್ತಿದ್ದರೂ, ವರಿಷ್ಠರ ಎಚ್ಚರಿಕೆಯ ನಂತರ ಸುಮ್ಮನಾಗಿದ್ದರು. ಆದರೆ, ರೇಣುಕಾಚಾರ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೆಹಲಿಗೆ ಹೋಗಿ ದೂರು ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ಅಮಿತ್ ಶಾ ಭಾಷಣ ಕೇಳಿ ನಗು ತಡೆಯಲಾಗಲಿಲ್ಲ!
ತಮ್ಮ ರಾಜಕೀಯ ಗುರು ಉರಿಮಜಲು ರಾಮಭಟ್
ತಮ್ಮ ರಾಜಕೀಯ ಗುರು ಉರಿಮಜಲು ರಾಮಭಟ್ ಅವರನ್ನು ಪುತ್ತೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಯತ್ನಾಳ್ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. "ನಾನು ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದೆ, ಈಗ ಮತ್ತೆ ಆ ಪರಿಸ್ಥಿತಿಯನ್ನು ಅವರೇ ನಿರ್ಮಾಣ ಮಾಡಿಕೊಂಡಿದ್ದಾರೆ"ಎಂದು ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯ ಭೇಟಿಯ ಸಂದರ್ಭದಲ್ಲಿ ಅಮಿತ್ ಶಾ
ರಾಜ್ಯ ಭೇಟಿಯ ಸಂದರ್ಭದಲ್ಲಿ ಅಮಿತ್ ಶಾ, ಪಕ್ಷದಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು. ಜೊತೆಗೆ, ಇಲ್ಲಿನ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸಿಕೊಳ್ಳಿ, ಎಲ್ಲದಕ್ಕೂ ದೆಹಲಿಗೆ ಬರಬೇಡಿ ಎಂದು ಹೇಳಿದ್ದರು. ಹಾಗಿದ್ದಾಗ್ಯೂ, ಎರಡು ಬಾರಿ ದೆಹಲಿಗೆ ಹೋಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದೂರು ನೀಡಿ ಬಂದಿದ್ದಾರೆ.
ಪ್ರಲ್ಹಾದ ಜೋಷಿ, ಹೈಕಮಾಂಡ್ ಪ್ರತಿನಿಧಿಗಳನ್ನು ಭೇಟಿಯಾದ ರೇಣುಕಾಚಾರ್ಯ
ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಮತ್ತು ಹೈಕಮಾಂಡ್ ಪ್ರತಿನಿಧಿಗಳನ್ನು ಭೇಟಿಯಾಗಿರುವ ರೇಣುಕಾಚಾರ್ಯ, ಸಚಿವ ಸಿ.ಪಿ.ಯೋಗೇಶ್ವರ್ ಅವರ ವಿರುದ್ದ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟ ದಾಖಲೆಯನ್ನು ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಗೆ ಮುನ್ನವೂ, ರೇಣುಕಾಚಾರ್ಯ ಅವರು ಯೋಗೇಶ್ವರ್ ವಿರುದ್ದ ಕಿಡಿಕಾರುತ್ತಲೇ ಇದ್ದರು.
Recommended Video
ವರಿಷ್ಠರನ್ನು ದೆಹಲಿಯಲ್ಲಿ ಭೇಟಿಯಾಗಿ ಬಂದಿದ್ದೇನೆ
ಯೋಗೇಶ್ವರ್ ಜೊತೆಗೆ ಬಸನಗೌಡ ಯತ್ನಾಳ್ ವಿರುದ್ದವೂ ರೇಣುಕಾಚಾರ್ಯ ದೂರು ಸಲ್ಲಿಸಿದ್ದಾರೆ. "ವರಿಷ್ಠರನ್ನು ದೆಹಲಿಯಲ್ಲಿ ಭೇಟಿಯಾಗಿ ಬಂದಿದ್ದೇನೆ, ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಉತ್ತಮ ಫಲ ಸದ್ಯದಲ್ಲೇ ಸಿಗುವ ನಿರೀಕ್ಷೆಯಿದೆ"ಎಂದು ರೇಣುಕಾಚಾರ್ಯ ಹೇಳಿದ್ದಾರೆ.