ಮಂಗಳವಾರ ಬೈನಾ ಬೀಚ್ ಕನ್ನಡಿಗರ ಮನೆಗಳ ತೆರವು?
ಕಾರವಾರ, ಸೆಪ್ಟೆಂಬರ್ 25: ಗೋವಾದ ಬೈನಾ ಕಡಲತೀರದ ಬಳಿಯ ಸುಮಾರು 55 ಕನ್ನಡಿಗರ ಮನೆಗಳ ತೆರವಿಗೆ ದಕ್ಷಿಣ ಗೋವಾ ಉಪ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಮಂಗಳವಾರ ತೆರವು ಕಾರ್ಯಾಚರಣೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇಡವೆಂದವರೇ ಈಗ ತೆರವು ಆದೇಶ ನೀಡಿದರು
ವಾಸ್ಕೋದ ಮುರಗಾಂವ ನಗರಪಾಲಿಕೆ ಮನೆಗಳನ್ನು ಖಾಲಿ ಮಾಡುವಂತೆ ಸೆಪ್ಟೆಂಬರ್ 7ರಂದು ಜಾರಿ ಮಾಡಿದ್ದ ನೋಟೀಸ್ ಅನ್ನು ಪ್ರಶ್ನಿಸಿ ಬೈನಾ ಕನ್ನಡಿಗರು ಮುಂಬೈ ಹೈಕೋರ್ಟ್ನ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಅದನ್ನು ರದ್ದುಪಡಿಸಿತ್ತು.
ನಾಗರಮಡಿಯ ದುರಂತ: ವಿವಾದಾತ್ಮಕ ಕಮೆಂಟ್ ಹಾಕಿದ್ದ ಯುವತಿ ವಿರುದ್ಧ ದೂರು
ಆಗ ಸರ್ಕಾರದ ಅಧಿಸೂಚನೆಯಂತೆ ತಮ್ಮ ಮನೆಗಳನ್ನು ಸಕ್ರಮಗೊಳಿಸಬೇಕು ಎಂದು ಉಪ ಜಿಲ್ಲಾಧಿಕಾರಿಗೆ ಕನ್ನಡಿಗರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ತೆರವು ಕಾರ್ಯಾಚರಣೆ ಮಾಡದಂತೆ ಉಪ ಜಿಲ್ಲಾಧಿಕಾರಿ ಕೂಡ ಈ ಹಿಂದೆ ನಗರಪಾಲಿಕೆಗೆ ಸೂಚಿಸಿದ್ದರು. ಆದರೆ ಅವರೇ ಈಗ ಈ ರೀತಿ ಆದೇಶಿಸಿರುವುದರಿಂದ ಬೈನಾ ಕನ್ನಡಿಗರು ಅತಂತ್ರರಾಗಿದ್ದಾರೆ.
ಬಸವಣ್ಣನ ಗುಡಿಯಲ್ಲಿ ಆಶ್ರಯ
ಕೆಲವರು ಮನೆಯಲ್ಲಿನ ಸಾಮಾನು ಸರಂಜಾಮುಗಳೊಂದಿಗೆ ಅಲ್ಲೇ ಸಮೀಪದಲ್ಲಿರುವ ಬಸವಣ್ಣನ ಗುಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಆ ಗುಡಿಯನ್ನೇ ಮೊದಲು ತೆರವುಗೊಳಿಸಲು ನಗರಪಾಲಿಕೆ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಭಾನುವಾರದಿಂದ ಪೊಲೀಸ್ ಗಸ್ತು ಕೂಡ ಆರಂಭವಾಗಿದೆ.
ಕರ್ನಾಟಕದ ನೆರವಿಗೆ ಕಾಯುತ್ತಿರುವ ಕನ್ನಡಿಗರು
ಪ್ರತೀ ಬಾರಿಯೂ ಬೈನಾದಲ್ಲಿ ಕನ್ನಡಿಗರ ತೆರವಿಗೆ ಆದೇಶಿಸಿದಾಗಲೂ ಕರ್ನಾಟಕ ಸರ್ಕಾರ ಸ್ಪಂದಿಸುತ್ತಿಲ್ಲ. ಸಮಸ್ಯೆ ಬಗೆಹರಿಸಲು ತನ್ನ ಮಂತ್ರಿಗಳನ್ನು ಗೋವಾಕ್ಕೆ ಕಳುಹಿಸಿಕೊಡುತ್ತದೆ. ಆದರೆ ಅದರಿಂದ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಉದ್ಯೋಗವಿಲ್ಲದೇ ಗೋವಾಕ್ಕೆ ಬಂದೆವೇ ವಿನಾ ಮೋಜು ಮಾಡಲು ಅಲ್ಲ. ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಸಿದರೆ ನಾವ್ಯಾರೂ ಬೇರೆ ರಾಜ್ಯದ ಹಂಗಿನಲ್ಲಿ ಜೀವಿಸುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಬೈನಾ ಕನ್ನಡಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಲೆ ಕೆಡಿಸಿಕೊಳ್ಳದ ಮಂತ್ರಿಗಳು
ಹಿಂದೊಮ್ಮೆ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಐವಾನ್ ಡಿಸೋಜ ಗೋವಾದ ಮುಖ್ಯಮಂತ್ರಿಯ ಜತೆ ಮಾತುಕತೆ ನಡೆಸಿದ್ದರು. ಆದರೆ ಅದು ಪ್ರಯೋಜನಕ್ಕೆ ಬಂದಿಲ್ಲ. ಮತ್ತೊಮ್ಮೆ ಆ ಬಗ್ಗೆ ಪ್ರಯತ್ನಿಸುವ ಗೋಜಿಗೆ ಮತ್ಯಾವ ಮಂತ್ರಿಗಳೂ ಹೋಗಿಲ್ಲ. ಬೈನಾದ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಯಾರೂ ಕೂಡ ಪ್ರಯತ್ನಿಸುತ್ತಿಲ್ಲ. ಬೈನಾದ ಶಾಸಕ ಮಿಲಿಂದ ನಾಯ್ಕರಿಗೂ ಅನೇಕ ಬಾರಿ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ ಎನ್ನುತ್ತಾರೆ ಬೈನಾದ ಕನ್ನಡಿಗರು.