ಸಿಮಿ ಉಗ್ರರು ಧಾರವಾಡದಲ್ಲಿ 10 ತಿಂಗಳಿದ್ದರೂ ತಿಳಿಯಲಿಲ್ಲ ಏಕೆ?
ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ಈಗ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಧಾರವಾಡದತ್ತ ತಿರುಗಿದೆ. ಮಧ್ಯ ಪ್ರದೇಶದಲ್ಲಿ ತಪ್ಪಿಸಿಕೊಂಡಿರುವ ಐವರು ಸಿಮಿ ಉಗ್ರರು ಚರ್ಚ್ ಸ್ಟ್ರೀಟ್ ಸ್ಫೋಟಕ್ಕೂ ಮೊದಲು ಧಾರವಾಡದಲ್ಲಿ 10 ತಿಂಗಳುಗಳ ಕಾಲ ತಂಗಿದ್ದ ವಿಷಯ ಬೆಳಕಿಗೆ ಬಂದಿದೆ.
ಈ ಉಗ್ರರು ಸುಮಾರು ಒಂದೂವರೆ ವರ್ಷಗಳಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದಾರೆ. ಆದರೆ, 10 ತಿಂಗಳುಗಳ ಕಾಲ ಕರ್ನಾಟಕದಲ್ಲಿ ಸುಳಿವು ಕೂಡ ಸಿಗದಂತೆ ಬದುಕಿದ್ದುದು ಹೇಗೆ ಎಂಬುದೇ ಈಗ ಎದ್ದಿರುವ ಪ್ರಶ್ನೆ. [ಬೆಂಗಳೂರಲ್ಲಿ ಇಲ್ಲಿಯವರೆಗೆ 5 ಬಾರಿ ಬಾಂಬ್ ಸ್ಫೋಟ]
ಸುಳ್ಳು ದಾಖಲೆ ಸೃಷ್ಟಿಸಿದ್ದರು : ಪ್ರಸ್ತುತ ಈ ಉಗ್ರರು ತಂಗಿದ್ದ ಮನೆಯ ಮಾಲೀಕನನ್ನು ಪೊಲೀಸರು ಪ್ರಶ್ನೆಗೊಳಪಡಿಸಿದ್ದಾರೆ. ಮನೆಯ ಮಾಲೀಕ ಶಿವಾಜಿ ರಾವ್ ಕುಲಕರ್ಣಿ ಅವರಿಗೂ ಇವರು ಯಾರು, ಎಲ್ಲಿಂದ ಬಂದಿದ್ದರು ಎಂಬುದು ತಿಳಿದಿರಲಿಲ್ಲ. ಏಕೆಂದರೆ ಉಗ್ರರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮನೆಯನ್ನು ಬಾಡಿಗೆಗೆ ಪಡೆದಿದ್ದರು. [ದಕ್ಷಿಣ ಭಾರತದಲ್ಲಿ ಸಿಮಿಗೆ ಇದೆ ಶಕ್ತಿಯುತ ಜಾಲ]
ಸುತ್ತಲೂ ವಾಸಿಸುತ್ತಿದ್ದ ಯಾರಿಗೂ ಇವರ ಕುರಿತು ತಿಳಿದಿರಲಿಲ್ಲ. ಮನೆಯಲ್ಲಿದ್ದ ಐವರೂ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಯಾವುದೇ ರೀತಿಯ ಸಂಶಯಾಸ್ಪದ ವರ್ತನೆಯೂ ಕಂಡುಬಂದಿರಲಿಲ್ಲ ಎಂದು ಅವರನ್ನು ನೋಡಿದವರು ತಿಳಿಸಿದ್ದಾರೆ.
ಈ ಉಗ್ರರಿಗಾಗಿ ಸುಮಾರು ಒಂದೂವರೆ ವರ್ಷಗಳಿಂದ ಪೊಲೀಸ್ ಇಲಾಖೆ ಹುಡುಕುತ್ತಿದೆ. ಆದರೆ, ಇನ್ನೂ ಅವರ ಫೋಟೊಗಳನ್ನು ಪೊಲೀಸ್ ಠಾಣೆಗಳಿಗೆ ಬಿಡುಗಡೆಗೊಳಿಸಿಲ್ಲ. ಪುಣೆ ಮತ್ತು ಚೆನ್ನೈ ಸ್ಫೋಟಗಳಲ್ಲಿ ಈ ಸಿಮಿ ಉಗ್ರರ ಕೈವಾಡವಿರುವುದು ತಿಳಿದ ಮೇಲೆಯೂ ಅವರ ಫೋಟೊಗಳನ್ನು ಬಿಡುಗಡೆ ಮಾಡಿಲ್ಲ. ಪೊಲೀಸರ ಈ ವರ್ತನೆ ಅಚ್ಚರಿ ಮೂಡಿಸಿದೆ. [ಗುಪ್ತ ಮಾಹಿತಿ ಪತ್ತೆಗೆ ಟೆಕ್ಕಿಗಳ ಪಡೆ]
ಕರ್ನಾಟಕ ಪೊಲೀಸರಲ್ಲಿ ಇವರ ಫೋಟೊಗಳೇ ಇರಲಿಲ್ಲ. ಚರ್ಚ್ ಸ್ಟ್ರೀಟ್ನಲ್ಲಿ ಸ್ಫೋಟ ಸಂಭವಿಸಿದ ಮೇಲೆಯೇ ಅವರು ಮಧ್ಯ ಪ್ರದೇಶ ಪೊಲೀಸರಲ್ಲಿ ಉಗ್ರರ ಫೋಟೊ ಕಳುಹಿಸುವಂತೆ ಕೋರಿದ್ದಾರೆ.[ಬಾಂಬ್ ಸ್ಫೋಟ ನಂತರದ 10 ಪ್ರಮುಖ ಬೆಳವಣಿಗೆ]
ಈಗ ಎದ್ದಿರುವ ಪ್ರಶ್ನೆಯೆಂದರೆ ಇವರೆಲ್ಲರ ಫೋಟೊಗಳನ್ನು ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿತ್ತೇ? ಹಾಗೆ ಮಾಡಿದ್ದರೆ ಧಾರವಾಡದಲ್ಲಿ 10 ತಿಂಗಳ ಕಾಲ ತಂಗಿದ್ದ ಅವರನ್ನು ಹಿಡಿಯಲು ಅವಕಾಶವಿತ್ತಲ್ಲವೇ?