ಕನ್ನಡ ಅಂದರೆ ನಮ್ಮ ಮನೆ, ಇಂಗ್ಲಿಷ್ ಎಂದರೆ ಹಿಡಿ ಕೊಡೆ!
ರಾಮನಗರ, ಜು. 8 : ಹಳ್ಳಿಗಾಡಿನ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಗಣಿತ ಮಾತ್ರವಲ್ಲ ಇಂಗ್ಲಿಷ್ ಅಂದ್ರೂ ಕಬ್ಬಿಣದ ಕಡಲೆ. ಇಂಗ್ಲಿಷ್ ಅಂದ್ರೆ ಸಾಕು ಹಳ್ಳಿಗಾಡಿನ ಬಹುತೇಕ ಮಕ್ಕಳು ಭಯಬೀಳುತ್ತಾರೆ. ಇದನ್ನು ಮನಗಂಡಿರುವ ಕರ್ನಾಟಕ ನವನಿರ್ಮಾಣ ವೇದಿಕೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಗ್ರಾಮೀಣ ಮಕ್ಕಳಲ್ಲಿರುವ ಇಂಗ್ಲಿಷ್ ಭಯವನ್ನು ಓಡಿಸಿ ನಗರ ಪ್ರದೇಶದ ಮಕ್ಕಳಂತೆ ಅರಳು ಹುರಿದಂತೆ ಇಂಗ್ಲಿಷ್ ಮತನಾಡಲಿ ಎಂಬ ಕಾರಣಕ್ಕೆ ನಾವು ಕನ್ನಡ ಇಂಗ್ಲಿಷ್ ತರ್ಜುಮೆ ಮತ್ತು ವ್ಯಾಕರಣದ ಪುಸ್ತಕಗಳನ್ನು ಲಕ್ಷ್ಮೀಪುರ ಗ್ರಾಮದ ಜನತಾ ರೂರಲ್ ಶಾಲೆಯ ಮಕ್ಕಳಿಗೆ ಉಚಿತವಾಗಿ ಮಂಗಳವಾರ ವಿತರಿಸಲಾಯಿತು.
ಕರ್ನಾಟಕ ನವನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ಅವರ ಪ್ರಕಾರ, ಕನ್ನಡ ಅಂದರೆ ಮನೆ, ಇಂಗ್ಲಿಷ್ ಎಂದರೆ ಕೊಡೆ. ಅಂದರೆ ಕನ್ನಡದ ಅನಿವಾರ್ಯತೆಯ ಜತೆಗೆ ಇಂಗ್ಲಿಷ್ ಕೂಡ ಪ್ರತಿಯೊಬ್ಬರಿಗೂ ಅಗತ್ಯ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನ ಉಚಿತವಾಗಿ ಹಂಚುವ ಕೆಲಸವನ್ನ ಮಾಡುತ್ತಿದ್ದೇವೆಂದರು.
ಕನ್ನಡ ನಮಗೆ ಮಾತೃಭಾಷೆ ಅದು ನಮ್ಮ ಸ್ವಂತ ಮನೆ, ಆದರೆ ಮಳೆ ಬಿಸಿಲು ಬಂದಾಗ ಕೊಡೆ ಹಿಡಿದುಕೊಳ್ಳುವ ರೀತಿಯಲ್ಲಿ ಇಂಗ್ಲಿಷ್ ಪರಿಪೂರ್ಣವಾಗಿ ಕಲಿತರೆ ವಿಶ್ವದ ಯಾವುದೇ ದೇಶದಲ್ಲೂ ಹೋಗಿ ಬದುಕನ್ನು ಸಾಗಿಸಬಹುದಾಗಿದೆ. ನಮ್ಮ ಹಳ್ಳಿ ಮಕ್ಕಳು ಕೀಳರಿಮೆ ತೊರದು ನಗರದ ಮಕ್ಕಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಇಂಗ್ಲಿಷ್ನ್ನ ನಿರರ್ಗಳವಾಗಿ ಸುಲಲಿತವಾಗಿ ಮಾತನಾಡಬೇಕೆಂದರು.
ಸಿರಿಗ್ರೂಪ್ನ ಎಂ.ಡಿ. ರಮೇಶ್ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ, ಪ್ರೊ. ರೇವಣಸಿದ್ದಯ್ಯ ಅವರು ಸಂಪಾದಿಸಿರುವ 200 ರು. ಬೆಲೆಯ ಪುಸ್ತಕದಲ್ಲಿ ಉಪಯುಕ್ತ ಮಾಹಿತಿಗಳು ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಶ್ರದ್ಧೆ ಇಟ್ಟು ಶ್ರಮವಹಿಸಿ ಅಧ್ಯಯನ ಮಾಡಿದರೆ ನಾಲ್ಕು ತಿಂಗಳಲ್ಲಿ ಪರಿಪೂರ್ಣವಾದ ಇಂಗ್ಲಿಷನ್ನ ಹಳ್ಳಿ ಮಕ್ಕಳು ಕಲಿಯಬಹುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಎಲ್ಲಾ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೂ ಧಾನಿಗಳ ಸಹಾಯದ ಮೂಲಕ ಪುಸ್ತಕಗಳನ್ನ ಹಂಚುವ ಕೆಲಸವನ್ನ ನವನಿರ್ಮಾಣ ವೇದಿಕೆ ಮಾಡಲಿದೆ. ಅವರ ಪ್ರಯತ್ನಕ್ಕೆ ನಾವುಗಳು ಕೂಡ ಹೆಚ್ಚಿನ ಸಹಕಾರ ನೀಡುತ್ತೇವೆ. ಹಳ್ಳಿಮಕ್ಕಳಿಗೆ ಇರುವ ಇಂಗ್ಲಿಷ್ ಭಯವನ್ನ ಓಡಿಸುವುದೇ ಈ ಪುಸ್ತಕದ ಉದ್ದೇಶ ಎಂದು ಅವರು ವಿವರಿಸಿದರು.
ಸರ್ಕಾರ ಮಾಡುವ ಕೆಲಸವನ್ನ ಕನ್ನಡಪರ ಸಂಘಟನೆಯೊಂದು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಕನ್ನಡದ ಜತೆಜತೆಗೆ ಇಂಗ್ಲಿಷ್ ಕೂಡ ಇತ್ತೀಚಿನ ಪೈಪೋಟಿಯುಗದಲ್ಲಿ ಅನಿವಾರ್ಯವೆಂಬ ಕಾರಣಕ್ಕೆ ಹಳ್ಳಿ ಮಕ್ಕಳು ಇಂಗ್ಲಿಷ್ ಕಲಿತ ಉನ್ನತವಾದುದದನ್ನ ಸಾಧಿಸಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಜಗದೀಶ್ ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಪ್ರಮುಖವಾಗಿ ಮುಖ್ಯಶಿಕ್ಷಕಿ ಬಿ.ವಿ.ಗೌರಿ, ಶಿಕ್ಷಕರ ಬಿ.ಸಿ.ರಮೇಶ್, ಬಿ.ಕೆ.ಶಿವಣ್ಣ, ಎಚ್.ಎಲ್.ಚಂದ್ರೇಗೌಡ, ವೆಂಕಟೇಶ್, ಜಗದೀಶ್, ಶಿವಗಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.