ಸೂತಕದ ಮನೆಯಲ್ಲಿ ಡಿಕೆಶಿ, ಎಚ್ಡಿಕೆ ಪರಸ್ಪರ ಎದುರಾದಾಗ!
ರಾಜ್ಯ ರಾಜಕಾರಣದಲ್ಲಿ ಉತ್ತರ ಪಶ್ಚಿಮದಂತಿರುವ ಎಚ್ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್, ಸೂತಕದ ಮನೆಯಲ್ಲಿ ರಾಜಕೀಯ ಮಾಡದೇ, ಆತ್ಮೀಯತೆಯಿಂದ ಮಾತನಾಡಿ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದರು.
ರಾಮನಗರ, ಜುಲೈ 23: ಸೂತಕದ ಮನೆಯಲ್ಲೂ ರಾಜಕೀಯ ಮೇಲಾಟ ನಡೆಸುವ ಅದೆಷ್ಟೋ ಘಟನೆಗಳು ನಮ್ಮ ಮುಂದಿವೆ.
ರಾಜ್ಯ ರಾಜಕಾರಣದಲ್ಲಿ ಉತ್ತರ ಪಶ್ಚಿಮದಂತಿರುವ ದೇವೇಗೌಡ್ರ ಕುಟುಂಬ ಮತ್ತು ಡಿ ಕೆ ಶಿವಕುಮಾರ್, ಸೂತಕದ ಮನೆಯಲ್ಲಿ ರಾಜಕೀಯ ಮಾಡದೇ, ಆತ್ಮೀಯತೆಯಿಂದ ಮಾತನಾಡಿ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದರು.
ರಾಮನಗರ ತಾಲೂಕಿನ ಹುಣಸೇನಹಳ್ಳಿಯ ನಿವಾಸಿಯಾಗಿರುವ ನಂಜಪ್ಪನವರು ಶುಕ್ರವಾರ (ಜುಲೈ 21) ವಿಧಿವಶರಾಗಿದ್ದರು. ಶನಿವಾರ ನಡೆದ ಇವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಗಮಿಸಿದ್ದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಂಜಪ್ಪನವರಿಗೆ ಅಂತಿಮ ನಮನ ಸಲ್ಲಿಸಿ ಡಿಕೆಶಿ ಹೊರಡುವ ವೇಳೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸುತ್ತಿದ್ದರು. ಕುಮಾರಸ್ವಾಮಿ ಬರುತ್ತಿರುವುದನ್ನು ಗಮನಿಸಿದ ಡಿ ಕೆ ಶಿವಕುಮಾರ್, ಕಾರಿನಿಂದ ಇಳಿದು ಕುಮಾರಸ್ವಾಮಿ ಬಳಿ ಹೋದರು.
ಕುಮಾರಸ್ವಾಮಿ ಕಾರು ಬಳಿ ಹೋಗಿ, ಕೈಕುಲುಕಿ ಕೆಲ ನಿಮಿಷ ಇಬ್ಬರೂ ನಾಯಕರು ಆತ್ಮೀಯತೆಯಿಂದ ಮಾತನಾಡಿಸಿದರು. ನಂತರ ಡಿ ಕೆ ಶಿವಕುಮಾರ್ ಬೆಂಗಳೂರು ಕಡೆ ತೆರಳಿದರೆ, ಕುಮಾರಸ್ವಾಮಿ ಮೃತ ನಂಜಪ್ಪನವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟರು.
ಇಬ್ಬರೂ ನಾಯಕರು ಒಬ್ಬರೊನ್ನಬ್ಬರು ಎದುರಾದಾಗ ಗುಸುಗುಸು ಮಾತನಾಡಲು ಆರಂಭಿಸಿದ ಸ್ಥಳೀಯರು, ಇಬ್ಬರೂ ಆತ್ಮೀಯತೆಯಿಂದ ಮಾತನಾಡುತ್ತಿದ್ದಾಗ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.