ಆತ್ಮಹತ್ಯೆಗೆ ಶರಣಾದ ಎಂಡೋಸಲ್ಫಾನ್ ಪೀಡಿತೆ
ಉಡುಪಿ, ನವೆಂಬರ್ 21 : ಎಂಡೋಸಲ್ಫಾನ್ ಪೀಡಿತ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಪರಿಹಾರ ಹಣ, ಮಾಸಾಶನ ಹೆಚ್ಚಳ, ಉಚಿತ ಚಿಕಿತ್ಸೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎರಡು ದಿನಗಳ ಹಿಂದೆ ಎಂಡೋಸಲ್ಫೋನ್ ಸಂತ್ರಸ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಆರ್ಡಿಯ ನಿವಾಸಿ ರೀತಾ ಶೆಟ್ಟಿ (21) ಮನೆ ಸಮೀಪದಲ್ಲಿನ ಬಾವಿಗೆ ಹಾರಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಡೋಸಲ್ಫಾನ್ ಪೀಡಿತೆಯಾಗಿದ್ದ ರೀತಾ ನಿತ್ಯಕರ್ಮ ಮಾಡುವುದಕ್ಕೂ ಮನೆಯವರನ್ನು ಅವಲಂಭಿಸಬೇಕಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. [ಎಂಡೋಸಲ್ಫಾನ್ ಸಂತ್ರಸ್ತರು ಸರ್ಕಾರದ ಮುಂದಿಟ್ಟ ಬೇಡಿಕೆಯೇನು?]
ರೀತಾ ಆರ್ಡಿಯ ಸುರೇಂದ್ರ ಶೆಟ್ಟಿ ಅವರ ಮಗಳು. ಈಕೆ ಎಂಡೋಸಲ್ಪಾನ್ ಪೀಡಿತೆಯಾಗಿದ್ದು ಕೈ ಮತ್ತು ಕುತ್ತಿಗೆಯ ಸ್ವಾಧೀನ ಕಳೆದುಕೊಂಡಿದ್ದಳು. ತಂದೆಯ ನೆರವಿನಿಂದ ಎಸ್ಎಸ್ಎಲ್ಸಿ ಓದಿದ್ದ ರೀತಾ ಸರ್ಕಾರದಿಂದ 3 ಸಾವಿರ ಮಾಸಿಕ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದರು. [ದಕ್ಷಿಣ ಕನ್ನಡದ ಎಂಡೋ ಪೀಡಿತರಿಗೆ ಉಚಿತ ಚಿಕಿತ್ಸೆ]
ಪ್ರತಿಭಟನೆ ನಡೆಸಿದ್ದರು : ನವೆಂಬರ್ 19ರಂದು ಪರಿಹಾರ ಹಣ, ಮಾಸಾಶನ ಹೆಚ್ಚಳ, ಉಚಿತ ಚಿಕಿತ್ಸೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಂಡೋಸಲ್ಫೋನ್ ಪೀಡಿತರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದರು.