'ನೀವು ಕಲಿಯುಗದ ಕರ್ಣ: ದತ್ತ ಭಾವುಕ ಪತ್ರಕ್ಕೆ, ಓದುಗರ ಪ್ರತಿಕ್ರಿಯೆ
'ವೈಎಸ್ ವಿ ದತ್ತ ಅವರು ರಾಜಕೀಯ ಬಿಟ್ಟರೂ, ರಾಜಕೀಯ ಅವರನ್ನು ಬಿಡೋಲ್ಲ...' ವೈಎಸ್ ವಿ ದತ್ತ ಅವರ ಭಾವುಕ ಪತ್ರಕ್ಕೆ ಅಭಿಮಾನಿಯೊಬ್ಬರ ಪ್ರತಿಕ್ರಿಯೆ ಇದು!
ಜೂನ್ 24 ರಂದು ತಮ್ಮ ಜನ್ಮದಿನದ ನಿಮಿತ್ತ ಕಡೂರು ಮತದಾರರಿಗೆ ಅವರು ಬರೆದ ಭಾವುಕ ಪತ್ರವನ್ನು ಒನ್ ಇಂಡಿಯಾ ಪ್ರಕಟಿಸಿತ್ತು. ಈ ಪತ್ರಕ್ಕೆ ನೂರಾರು ಓದುಗರು ಅಷ್ಟೇ ಭಾವುಕತೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಆದರ್ಶ ನಾಯಕನಿಗೆ ಅಧಿಕಾರ, ಹಣ, ಅಂತಸ್ತು, ಹುದ್ದೆ ಎಲ್ಲಕ್ಕಿಂತಲೂ ಮುಖ್ಯವಾಗಿದ್ದು ಜನರ ಅಭಿಮಾನ ಎಂಬುದನ್ನು ಓದುಗರ ಈ ಪ್ರತಿಕ್ರಿಯೆಯೇ ತೋರಿಸಿಕೊಟ್ಟಿದೆ.
ಕಡೂರು ಮತದಾರರಿಗೆ ವೈ.ಎಸ್.ವಿ ದತ್ತ ಬರೆದ ಭಾವುಕ ಪತ್ರ
ರಾಜಕೀಯಕ್ಕೆ ಪ್ರವೇಶಿಸಿದ ಮೇಲೂ ನೈತಿಕತೆ, ಮಾನವೀಯತೆ, ಜೀವನ ಮೌಲ್ಯಗಳನ್ನು ಉಳಿಸಿಕೊಳ್ಳುವವರು ಕೆಲವರು ಮಾತ್ರ. ಅಧಿಕಾರ, ಹುದ್ದೆ, ಪ್ರತಿಷ್ಠೆ ಎಲ್ಲವನ್ನೂ ಮೀರಿ, ನೈಜ ಮಾನವತಾವಾದ, ನಂಬಿರುವ ಆದರ್ಶವನ್ನು ಪಾಲಿಸುವ ಕೆಲವೇ ಕೆಲವು ರಾಜಕಾರಣಿಗಳ ಸಾಲಲ್ಲಿ ಜೆಡಿಎಸ್ ನ ವೈಎಸ್ ವಿ ದತ್ತ ಅವರೂ ಒಬ್ಬರು.
2018 ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಬಿಜೆಪಿಯ ಬೆಳ್ಳಿ ಪ್ರಕಾಶ್ ಅವರ ವಿರುದ್ಧ ಅಚ್ಚರಿಯ ಸೋಲುಂಡರು.
'ಒನ್ ಇಂಡಿಯಾ' ಪ್ರಕಟಿಸಿದ್ದ ವೈಎಸ್ ವಿ ದತ್ತ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಇವುಗಳಲ್ಲಿ ಆಯ್ದ ಕೆಲವನ್ನಷ್ಟೇ ಇಲ್ಲಿ ಪ್ರಕಟಿಸಿದ್ದೇವೆ.
ನೀವು ಕಲಿಯುಗದ ಕರ್ಣ
ನೀವು ಕೌರವರ ಪಾಳಯದಲ್ಲಿರುವ ಕರ್ಣನ ಹಾಗೆ. ಕರ್ಣ ಒಳ್ಳೆಯವನು ಅಂತ ಜಗತ್ತಿಗೆ ಗೊತ್ತು. ಅಂದು ಕರ್ಣ ದಾನಶೂರ, ಒಳ್ಳೆಯವನು ಅಂತ ವಾಸುದೇವ ಕೌರವರ ಕಡೆಗೆ ವಾಲಿದ್ರೆ ಅಧರ್ಮ ಗೆಲ್ತಾ ಇತ್ತು. ನಿಮ್ಮಂತವರು ಬಿ.ಜೆ.ಪಿ ಗೆ ಬರುವುದೇ ತುಂಬಾ ಸರಿಯಾದ ನಿರ್ಣಯ ಎಂದು ವಿಶ್ವನಾಥ್ ಶೆಟ್ಟಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮೊಂದಿಗೆ ಕಾರ್ಯಕರ್ತರಿದ್ದಾರೆ
'ಬೇಜಾರು ಮಾಡ್ಕೋಬೇಡಿ ಸರ್. ಜೀವನದಲ್ಲಿ ಸೋಲು-ಗೆಲುವು, ಸುಖ-ದುಃಖ ಇದ್ದಿದ್ದೇ. ನಾನು ನಿಮ್ಮಷ್ಟು ದೊಡ್ಡವನಲ್ಲ. ಆದರೆ ತಿಳಿದಿದ್ದನ್ನು ಹೇಳಿದ್ದೇನೆ. ನಿಮ್ಮ ಜೊತೆ ನನ್ನಂಥ ಕಾರ್ಯಕರ್ತರು ತುಂಬಾ ಜನರಿದ್ದಾರೆ' ಎಂದಿದ್ದಾರೆ ಪ್ರದೀಪ್ ಕೆ ಸಿ.
ಸರಳ ಸಜ್ಜನಿಕೆ
ಸರ್, ದತ್ತ ಎಂದರೆ ನಮಗೆ ನಿಮ್ಮ ಪಕ್ಷ, ರಾಜಕೀಯ ನೆನಪಿಗೆ ಬರೋಲ್ಲ. ನಿಮ್ಮ ಸರಳತೆ, ಸಜ್ಜನಿಕೆ ನೆನಪಿಗೆ ಬರುತ್ತದೆ ಎಂದು ಅಭಿಮಾನ ಮೆರೆದಿದ್ದಾರೆ ಅಂಬರೀಶ್ ಎಸ್ ನಗರ.
ಹೂವು ದೇವರೊಂದಿಗಿದ್ದರೆ ಪ್ರಸಾದವಾಗುತ್ತದೆ!
ದತ್ತಣ್ಣ ... ನೀವು ತಿಳಿದವರು ಓದಿಕೊಂಡವರು. ಹೂವು ದೇವರ ಜೊತೆ ಇದ್ದರೆ ಪ್ರಸಾದವಾಗುತ್ತೆ , ಮನುಷ್ಯನ ಮುಡಿಯಲ್ಲಿದ್ದರೆ ಅಲಂಕಾರಕ್ಕಾಗುತ್ತೆ , ಮರಣದಲ್ಲಿದ್ದರೆ ಮಣ್ಣಾಗುತ್ತೆ , ಆದರೆ ಈ ಕತ್ತೆ ಕೋತಿಗಳ ಜೊತೆಯಲ್ಲಿದ್ರೆ ಹೊಸಕಿ ಹೋಗುತ್ತೆ. ಇದೆಲ್ಲ ನಿಮಗೆ ಗೊತ್ತಿರುತ್ತೆ ಎಂದ್ದಾರೆ ಶರತ್.
ಪಕ್ಷ ಉತ್ತಮ ಹುದ್ದೆ ನೀಡಲಿ
ನಿಸ್ವಾರ್ಥ ಜನರ ಮನಸ್ಸಿನಲ್ಲಿ ನೀವಿದ್ದೀರಿ, ನಿಮ್ಮನ್ನು ಸೋಲಿಸಿದ್ದಕ್ಕೆ ಅವರೆಲ್ಲ ಪಶ್ಚತಾಪ ಪಡುತಿದ್ದಾರೆ. ಒಳಗೊಳಗೇ ಅವರಷ್ಟಕ್ಕೆ ಅವರೇ, ಆಗಿರುವ ಅನಾಹುತಕ್ಕೆ ಶಪಿಸಿಕೊಳ್ಳುತಿದ್ದಾರೆ ಆದರೂ ನೀವು ದೃತಿಗೆಡದೆ ನಿಮ್ಮ ಕಾರ್ಯ ಮುಂದುವರಿಸಿರಿ. ಪಕ್ಷದಲ್ಲಿ ನಿಮಗೆ ಒಂದು ಜವಾಬ್ದಾರಿಯುತ ಉನ್ನತ ಸ್ಥಾನ ಕೊಟ್ಟು ಪ್ರಾಮಾಣಿಕರಿಗೆ ಬೆಲೆ ಇದೆ ಎಂದು ತೋರಿಸುವ ಜವಾಬ್ದಾರಿ ಪಕ್ಷದ ಮುಖ್ಯಸ್ಥರ ಮೇಲಿದೆ. ಅದು ಬೇಗ ಈಡೇರಲಿ. ಮುಂದಿನ ಜೆಡಿಎಸ್ ರಾಜ್ಯಾಧ್ಯಕ್ಷ ದತ್ತಣ್ಣ ನವರಿಗೆ ಒಳ್ಳೆಯದಾಗಲಿ ಜೈ ದತ್ತಣ್ಣ ಎಂದಿದ್ದಾರೆ ಬಾಲಕೃಷ್ಣ ಎಚ್.
ಈ ಕಾಲದಲ್ಲಿ ಇವೆಲ್ಲ ಸಾಮಾನ್ಯ!
ದತ್ತ ಸರ್! ಜನರು ಗೊತಿದ್ದೂ ಯಾರನ್ನು ಶಿಕ್ಷೆ ಕೊಡಲ್ಲ. ಚುನಾವಣೆ ಅಂದಮೇಲೆ ಹಣ , ಜಾತಿ, ರಾಜಕೀಯ ಎಲ್ಲ ಕೆಲಸ ಮಾಡುತ್ತೆ. ಹಾಗಾಗಿ ಸೋಲನ್ನು ಹೃದಯಕ್ಕೆ ತಂದು ಕೊಳ್ಳಬೇಡಿ. ಇವತ್ತಿನ ವ್ಯವಸ್ಥೆ ನಲ್ಲಿ ಇವೆಲ್ಲ ಸಾಮಾನ್ಯ. ಸಿದ್ದರಾಮಯ್ಯ ಅಂತ ಜನಪ್ರಿಯ ಮುಖ್ಯ ಮಂತ್ರಿ ಗೆ ಚೆನ್ನಾಗಿ ಹಣ ಸುಲಿಗೆ ಮಾಡಿ ಜಾತಿ ಆದಾರದ ಮೇಲೇ ಮತ ನೀಡಿ ಸೋಲಿಸಿದರು. ಇವತ್ತು ನಿಯತ್ತು ಅನ್ನೋದು ಬರಿ ರಾಜಕಾರಿಣಿಗಳಿಗೆ ಮಾತ್ರ ಅಲ್ಲ ಜನರಿಗೂ ಇಲ್ಲ . ಆದ್ರೂ ನಾವು ಇವರಜೊತೆನೆ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ ಶ್ರೀನಿವಾಸ್.
ದತ್ತಣ್ಣ ನೀವು ರಾಜಕೀಯದಲ್ಲಿ ಇರಬೇಕು
ದತ್ತಣ್ಣ ನೀವು ರಾಜಕೀಯದಲ್ಲಿ ಇರಬೇಕು. ಕಡೂರಿನ ಸರಳ ರಾಜಕಾರಣಿ ನೀವು. ಯಾವತ್ತೂ ರಾಜಕೀಯದಿಂದ ದೂರ ಸರಿಯಬಾರದು. ನಮ್ಮ ಕಡೂರಿನ ಜನ ನೀವು ಮಾಡಿದ್ದ ಕೆಲಸಕ್ಕೆ ಬೆಲೆ ಕೊಡಲಿಲ್ಲ. ನಮ್ಮ ಕಡೂರಿನ ಜನ ಮೂರ್ಖರು. ಬೇರೆಯವರು ಕೊಟ್ಟ ಹಣ, ಹೆಂದಕ್ಕೆ ಆಸೆಪಟ್ಟು ನಿಮ್ಮಂಥ ವ್ಯಕ್ತಿನ ಸೋಲಿಸಿದ್ದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ. ಈಗ ಗೆದ್ದಿರೋರು ಹೇಗೆ ಅಂತ ಕಡೂರು ಜನರಿಗೆ ಗೊತ್ತಾಗುತ್ತೆ. ಆಗ ಅವರೇ ನಮಗೆ ದತ್ತಣ್ಣನೇ ಸರಿಯಾದ ವ್ಯಕ್ತಿ ಅಂತಾರೆ. ನೀವು ಒಂದು ಒಳ್ಳೆಯ ಹುದ್ದೆ ಪಡೆದು ಕಡೂರು ಜನರಿಗೆ ನಿಮ್ಮ ಶಕ್ತಿಯನ್ನು ತೋರಿಸಿ ಎಂದಿದ್ದಾರೆ ಸೋಮಶೇಖರ್ ಸಿ ಬಿ.
ಅದೃಷ್ಟವನ್ನು ಎಡಗಾಲಲ್ಲಿ ಒದೆಯುತ್ತೇವೆ!
'ಸಾರ್ ನಾವು ಒಳ್ಳೆಯದನ್ನ ಯಾವತ್ತೂ ಗೌರವಿಸೋಲ್ಲ. ಹಣ ಹೆಂಡ ಜಾತಿ ಯೇ ಮುಖ್ಯ. ನೀವು ಆರಾಮಾಗಿ ಮನೆಲೆ ಇರಿ. ನಾವು ಭಾಗ್ಯವಂತರು ಆಗಬೇಕೆಂದು ಅನಿಸಿಲ್ಲ. ಬರೋ ಅದೃಷ್ಟ ನ ಎಡಗಾಲಿನಲ್ಲೇ ಒದ್ದು ಮುಂದಕ್ಕೆ ಹೋಗ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಸಾಯಿ ರಾಮ್.
ಸಂಸದರನ್ನಾಗಿ ಮಾಡಿ!
ದತ್ತ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿ ಎಂದು ಆಸಿಫ್ ಅಲಿ ಎಂಬುವವರು ಅಭಿಪ್ರಾಯ ತಿಳಿಸಿದ್ದಾರೆ. 'ಕಡೂರು ಜನರು ಈ ರೀತಿ ಮಾಡಬಾರದಿತ್ತು', 'ದತ್ತ ಅವರೇ ಮೋದಿಯವರನ್ನು ಬೆಂಬಲಿಸಿ', 'ನಿಮಗೆ ಜೆಡಿಎಸ್ ಪಕ್ಷ ತಕ್ಕುದಲ್ಲ', 'ದೇವೇಗೌಡರ ಶಿಷ್ಯ, ಡ್ರಾಮಾ ಕಿಂಗ್' ಇತ್ಯಾದಿ ಹಲವು ಅಭಿಪ್ರಾಯಗಳು ದತ್ತ ಅವರ ಪತ್ರದ ಕುರಿತು ಬಂದಿದೆ.