ರಾಮನಗರ: ಆನೆ ದಾಳಿಗೆ ಬೆಳೆ ನಾಶ, ಕ್ಯಾರೆ ಎನ್ನದ ಅಧಿಕಾರಿಗಳು
ರಾಮನಗರ, ಅಕ್ಟೋಬರ್ 14: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಗೆಚಗೆರೆ ಗ್ರಾಮದ ವ್ಯಾಪ್ತಿಯಲ್ಲಿ ಗಜಪಡೆಗಳು ರೈತರ ಕೃಷಿ ಭೂಮಿ ಮೇಲೆ ದಾಂಗುಡಿ ಇಟ್ಟು ಬೆಳೆಗಳ ನಾಶ ಮಾಡುತ್ತಿರುವ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ.
ಕಳೆದ 10 ದಿನಗಳಿಂದಲೂ ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು, ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆಗಳನ್ನ ತಿಂದು ಹಾಕುತ್ತಿವೆ. ಗಜಪಡೆಗಳ ದಾಳಿಯಿಂದ ಸಾವಿರಾರೂ ರೂಪಾಯಿ ಮೌಲ್ಯದ ರೈತರ ಬೆಳೆ ಸಂಪೂರ್ಣ ನಾಶವಾಗಿರುವುದರಿಂದ ಅನ್ನದಾತ ಸಂಕಷ್ಟದ ಸುಳಿಗೆ ಸಿಲುಕಿ ನಲುಗುತ್ತಿದ್ದಾನೆ.
ಅರಣ್ಯದಂಚಿನ ಗ್ರಾಮದ ರೈತರು ಪ್ರತಿನಿತ್ಯ ಜೀವವನ್ನ ಬಿಗಿಹಿಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾವು, ರಾಗಿ, ಬಾಳೆ ಸೇರಿದಂತೆ ರೈತರ ಬೆಳೆಗಳನ್ನ ಆನೆ ಹಿಂಡು ನಾಶಪಡಿಸುತ್ತಲೇ ಇದೆ.
ತಗೆಚಗೆರೆ ಗ್ರಾಮದ ವ್ಯಾಪ್ತಿಯಲ್ಲಿ ಗಜಪಡೆಗಳು ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನ ನಾಶಮಾಡಿವೆ. ಸುಮಾರು ಮೂರ್ನಾಲ್ಕು ಆನೆಗಳಿರುವ ಹಿಂಡು ಗ್ರಾಮದ ರೈತರ ಜಮೀನುಗಳ ಮೇಲೆ ಕಳೆದ 10 ದಿನಗಳಿಂದಲೂ ನಿರಂತರವಾಗಿ ಲಗ್ಗೆ ಹಿಡುತ್ತಲೆ ಇವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರ ಕೈಸೇರದ ಬೆಳೆ ಪರಿಹಾರದ ಹಣ
ವರ್ಷಗಳಿಂದ ಕಾಪಡಿಕೊಂಡು ಬಂದ ಮಾವಿನ ಮರ, ಬಾಳೆ ಗಿಡಗಳನ್ನ ಮುರಿದು ಹಾಕಿದ್ದಷ್ಟಲ್ಲದೆ, ರಾಗಿ ಬೆಳೆಯನ್ನ ತಿಂದು ಹಾಕಿ ರೈತರಿಗೆ ನಷ್ಟವನ್ನ ಉಂಟುಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಬೆಳೆ ನಷ್ಟದ ಪರಿಹಾರದ ಹಣವು ನಮ್ಮ ಕೈಸೇರುತ್ತಿಲ್ಲ. ಆನೆಗಳ ಹಾವಳಿ ಇದೇ ರೀತಿ ಮುಂದುವರೆದರೆ ವಿಷ ಕುಡಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬುದು ರೈತರ ಅಳಲಾಗಿದೆ.
ಸೋಲಾರ್ ಫೆನ್ಸಿಂಗ್ ಹಾಕಬೇಕೆಂಬುದು ಸ್ಥಳೀಯರ ಆಗ್ರಹ
ಆನೆಗಳು ಆಗಾಗ್ಗೆ ರೈತರ ಕೃಷಿ ಭೂಮಿಯ ಮೇಲೆ ದಾಂಗುಡಿ ಇಡುತ್ತಿರುವುದು ಅರಣ್ಯ ಇಲಾಖಾಧಿಕಾರಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆನೆಗಳು ಗ್ರಾಮದಂಚಿಗೆ ಬಾರದಂತೆ ಸೋಲಾರ್ ಫೆನ್ಸಿಂಗ್ ಹಾಕಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಆದ್ರೆ ಅರಣ್ಯ ಇಲಾಖೆಯಿಂದ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನು ತಗೆಚಗೆರೆ ಗ್ರಾಮಕ್ಕೆ ಹೊಂದುಕೊಂಡಂತ್ತೆ ತೆಂಗಿನ ಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶ ಇದ್ದು ಆನೆಗಳು ಅಲ್ಲಿಂದಿಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಲೆ ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಲೇ ಇವೆ.
ಹುಸಿಯಾದ ಬೆಳೆ ಪರಿಹಾರ
ಕಾಡು ಪ್ರಾಣಿಗಳಿಂದ ಪಸಲು ಹಾಳದರೆ ಸೂಕ್ತ ಪರಿಹಾರ ನೀಡುತ್ತೆವೆಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಅದರೆ, ಕಳೆದ ವರ್ಷ ಆನೆ ದಾಳಿಯಿಂದ ಅದ ಬೆಳೆ ನಷ್ಟಕ್ಕೆ ಇನ್ನು ಪರಿಹಾರ ಸಿಕ್ಕಿಲ್ಲ ಎನ್ನುವುದು ಇಲ್ಲಿನ ರೈತರ ಅಳಲು. ಇನ್ನು ಕೆಲ ರೈತರಿಗೆ ಪರಿಹಾರ ಸಿಕ್ಕರು ಅದು ಸಾವಿರಾರು ರೂಪಾಯಿ ನಷ್ಟವಾದರೆ ಕೇವಲ ನೂರಾರು ರೂಪಾಯಿಗಳು ಮಾತ್ರ.
ಇದಕ್ಕೆ ಬೇಕಿದೆ ಶಾಶ್ವತ ಪರಿಹಾರ
ಸತತ ಮಳೆಯಿಂದ ಬೆಳೆ ಕಳೆದುಕೊಳ್ಳುವ ಬೀತಿಯಲ್ಲಿರುವ ರೈತನಿಗೆ ಇದೀಗ ಗಜಪಡೆಗಳ ಹಾವಳಿ ಇನ್ನೊಂದು ತರದ ತಲೆನೋವು ತರಿಸಿದೆ. ಇತ್ತ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿದು ರೈತರು ವರ್ಷಾನುಗಟ್ಟಲೇ ಕಷ್ಟಪಟ್ಟು ಬೆಳೆದ ಬೆಳೆಗಳು ಗಜಪಡೆಗಳ ದಾಳಿಗೆ ನಾಶವಾಗುತ್ತಿರುವುದನ್ನ ತಡೆಯಬೇಕಿದೆ.