ಚಿಕ್ಕಮಗಳೂರು: ಕಾಡೆಮ್ಮೆ ಹೋಯ್ತು, ಕಾಡಾನೆ ಬಂತು..!
Recommended Video
ಚಿಕ್ಕಮಗಳೂರು, ಜುಲೈ.19: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಸಮೀಪ ವಾಟೆಕಾನ್ ಎಂಬಲ್ಲಿ ಆನೆ ಪ್ರತ್ಯಕ್ಷವಾಗಿದೆ. ಏಕಾಏಕಿ ಕಾಫಿತೋಟದಿಂದ ಗ್ರಾಮದ ರಸ್ತೆಗೆ ಆನೆ ನುಗ್ಗಿದ್ದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರವಿ ಎಂಬುವವರ ತೋಟಕ್ಕೆ ನುಗ್ಗಿದ ಆನೆ ಕೆಲಕಾಲ ಅಲ್ಲಿಯೇ ಘರ್ಜಿಸಿದ್ದು, ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಬೆಳಗ್ಗೆಯಿಂದ ಸಂಜೆವರೆಗೂ ಕಾಫಿ ತೋಟದಲ್ಲೇ ಬೀಡು ಬಿಟ್ಟಿದ್ದ ಕಾಡಾನೆ, ರಸ್ತೆ ದಾಟಿ ಕಾಫಿ ತೋಟದ ಒಳಗೆ ಪ್ರಯಾಣ ಮಾಡುವಾಗ ಗ್ರಾಮದ ಯುವಕರು ಗಜರಾಜನ ಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.
ಬಸ್ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋ
ಕೆಲವು ಗಂಟೆಗಳ ಕಾಲ ಆನೆಯನ್ನು ಕಂಡು ಗ್ರಾಮಸ್ಥರು ಹಾಗೂ ವಾಹನ ಸವಾರರು ಭಯಭೀತರಾಗಿದ್ದರು. ಆದರೆ ಕೆಲ ಸಮಯದ ನಂತರ ಆನೆ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಆನೆ ಕಾಫಿ ತೋಟಕ್ಕೆ ನುಗ್ಗಿದ್ದರಿಂದ ಕಾಫಿ ಗಿಡಗಳೆಲ್ಲಾ ನಾಶವಾಗಿವೆ. ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಬುಧವಾರ ಮೂಡಿಗೆರೆ ತಾಲೂಕಿನ ಲೋಕವಳ್ಳಿ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಏಕಾಏಕಿ ಕಾಡೆಮ್ಮೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದರು. ಕಾಫಿತೋಟದ ಮೂಲಕ ಊರಂಚಿಗೆ ಬಂದ ಕಾಡೆಮ್ಮೆಯನ್ನು ಓಡಿಸಲು ಗ್ರಾಮಸ್ಥರು ಕೆಲ ಕಾಲ ಹರಸಾಹಸಪಟ್ಟಿದ್ದರು.
ಇನ್ನು ಕೆಲ ಯುವಕರು ಅಪರೂಪದ ಅತಿಥಿ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಎಂಜಾಯ್ ಮಾಡಿದ್ದರು. ಕಾಡೆಮ್ಮೆ ಬೆಳಗ್ಗೆಯಿಂದ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡೆಮ್ಮೆ ಓಡಿಸಲು ಹರಸಾಹಸ ಪಡುತ್ತಿದ್ದರು. ಇದೀಗ ಕಾಡಾನೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಶುರುವಾಗಿದೆ.