ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಮತ್ತು ಪರೀಕ್ಷೆ : ಶೈಲೇಂದ್ರ ಕುಮಾರ್
ಬೆಂಗಳೂರು, ಏಪ್ರಿಲ್ 01 : 'ಚುನಾವಣೆ ಎಂಬುದು ಪ್ರಜಾಪ್ರಭುತ್ವದಲ್ಲಿ ಹಬ್ಬ ಮಾತ್ರವಲ್ಲ ಪರೀಕ್ಷೆ ಇದ್ದಂತೆ. ಈ ಪರೀಕ್ಷೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಜನನಾಯಕರಿಗೆ ಮಾತ್ರವಲ್ಲ, ಮತದಾನದ ಹಕ್ಕು ಹೊಂದಿರುವ ನಾಗರಿಕರಿಗೂ ಕೂಡ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು' ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಹೇಳಿದರು.
ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸಪತ್ರಿಕೆಗಳ ಏಪ್ರಿಲ್ ತಿಂಗಳ ಚುನಾವಣಾ ವಿಶೇಷಾಂಕಗಳನ್ನು ಅವರು ಬಿಡುಗಡೆ ಮಾಡಿ ಮಾತನಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮತದಾನ ದಿನದಂದು ರಜೆ ನೀಡಿದರೂ ಮತಗಟ್ಟೆಗೆ ಬಾರದೇ ಪ್ರವಾಸ ಹೋಗುವವರ ವಿರುದ್ಧ ಟೀಕಾ ಪ್ರಹಾರ ಮಾಡಿದ ಅವರು, 'ಹಬ್ಬದ ದಿನದಂದು ಮನೆಯಲ್ಲಿಯೇ ಇದ್ದು ಹಬ್ಬ ಆಚರಿಸಿದಂತೆ ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತಚಲಾಯಿಸಿ ಪವಿತ್ರ ಕರ್ತವ್ಯವನ್ನು ನಿರ್ವಹಿಸಬೇಕು' ಎಂದು ಕರೆ ನೀಡಿದರು.
ಮೊದಲ ಹಂತದ ಚುನಾವಣೆ: ಕಣದಲ್ಲಿ 241 ಅಭ್ಯರ್ಥಿಗಳು
'ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಜನಸಾಮಾನ್ಯರನ್ನು ಅಲ್ಲಿನ ಸಿಬ್ಬಂದಿ ಗೌರವಯುತವಾಗಿ ಕಾಣುವುದಿಲ್ಲ ಎಂಬ ಮಾತು ಜನಜನಿತವಾಗಿದೆ. ಆದರೆ, ಕರಿಯ ಕೋಟು ಧರಿಸಿ ಪೊಲೀಸ್ ಠಾಣೆ ಪ್ರವೇಶಿಸುವ ವಕೀಲರನ್ನು ಮಾತ್ರ ಪೊಲೀಸರು ಗೌರವಿಸುತ್ತಾರೆ ಎಂಬುದು ಎಲ್ಲರೂ ಗಮನಿಸಿದ ವಾಸ್ತವಾಂಶವಾಗಿದೆ' ಎಂದರು.
ನೀತಿ ಸಂಹಿತೆ : ನಟರ ಚಲನಚಿತ್ರ ಪ್ರದರ್ಶನಕ್ಕೆ ಸ್ಪಷ್ಟನೆ
'ತಿಳುವಳಿಕೆ ಇದ್ದವರಿಗೆ ಈ ಜಗತ್ತಿನಲ್ಲಿ ಮನ್ನಣೆ ದೊರೆಯುತ್ತದೆ ಎಂಬುದು ವ್ಯಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಸಂವಿಧಾನವನ್ನು ಅಧ್ಯಯನ ಮಾಡಿ ಅರಿವು ಹೊಂದುವುದು ಅತೀ ಮುಖ್ಯ' ಎಂದು ಶೈಲೇಂದ್ರ ಕುಮಾರ್ ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಅರಕೆರೆ ಜಯರಾಂ, '1952 ರಿಂದ ಈವರೆಗೆ ನಡೆದಿರುವ 16 ಲೋಕಸಭಾ ಚುನಾವಣಾ ಪ್ರಕ್ರಿಯೆಗಳಲ್ಲಿ ಮಾತ್ರವಲ್ಲದೆ ವರದಿಗಾರಿಕೆಯ ವಿಧಾನದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ' ಎಂದು ಹೇಳಿದರು.
'ನೆರೆಯ ಪಾಕಿಸ್ತಾನದಂತಹ ರಾಷ್ಟ್ರದಲ್ಲೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ಪದವೀಧರನಾಗಿರಬೇಕು ಎಂಬ ಮಾನದಂಡವಿದೆ. ಆದರೆ, ಭಾರತದಲ್ಲಿ ವಯೋಮಾನ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಾಗಿರಬೇಕೆಂಬುದೇ ಅರ್ಹತೆಯಾಗಿದೆ' ಎಂದು ತಿಳಿಸಿದರು.
'ಒಂದೆಡೆ ಚುನಾವಣಾ ವೆಚ್ಚಗಳೂ ಕೂಡ ತೀವ್ರ ಏರಿಕೆ ಕಂಡಿವೆ. ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೆ ಹಣವಂತರೇ ಆಗಬೇಕು ಎಂಬ ಅಲಿಖಿತ ನಿಯಮ ಜಾರಿಗೆ ಬಂದಂತಾಗಿದೆ. ಮತ್ತೊಂದೆಡೆ ನಮ್ಮ ಮಾಧ್ಯಮಗಳೂ ಕೂಡಾ ಜನಸಾಮಾನ್ಯರನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ವ್ಯಕ್ತಿ ವೈಭವೀಕರಣ ಸಂಸ್ಕೃತಿಯನ್ನು ಓಲೈಸ ಹೊರಟಿದೆ. ಈ ಹಿನ್ನಲೆಯಲ್ಲಿ ಸಾಮಾನ್ಯ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಒಂದು ಸಾಹಸವೇ ಅಗಿದೆ' ಎಂದು ಹೇಳಿದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಮಾತನಾಡಿ, 'ಮತದಾನ ಸಮಾನತೆಯ ವೇದಿಕೆಯಾಗಿದೆ. ಅಲ್ಲದೆ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಹಾಗೂ ಮಹಿಳಾ ಸಬಲೀಕರಣಕ್ಕೂ ಪುಷ್ಟಿ ನೀಡಿದೆ' ಎಂದು ಉದಾಹರಣೆ ಸಹಿತ ತಮ್ಮ ವಿಚಾರ ಮಂಡಿಸಿದರು.