ಬಿಜೆಪಿಗೆ ಮಳೆ ಪರಿಹಾರಕ್ಕಿಂತ ಚುನಾವಣೆ ಮುಖ್ಯವಾಗಿದೆ: ಕುಮಾರಸ್ವಾಮಿ
ಬೆಂಗಳೂರು,ನ.20 : ರಾಜ್ಯದಲ್ಲಿ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಇಡೀ ರಾಜ್ಯವೇ ನಡುಗಡ್ಡೆ ಆಗಿದ್ದರೂ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ನೆರೆ, ಮಳೆ ನಿರ್ವಹಣೆಯಲ್ಲಿ ಅಧಿಕಾರಿಗಳು ಮತ್ತು ಸರಕಾರದ ನಡುವೆ ಹೊಂದಾಣಿಕೆ, ಸಮನ್ವಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೆರೆಯಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಬೆಳೆದಿದ್ದ ಫಸಲು ಕೈಗೆ ಬಾರದೇ ಅನ್ನದಾತ ದುಃಖದಲ್ಲಿ ಇದ್ದಾನೆ. ಆದರೆ ಸಚಿವರು, ಶಾಸಕರು ಶಂಖ ಊದಿಕೊಂಡು ತಿರುಗುತ್ತಿದ್ದರೆ, ಅಧಿಕಾರಿಗಳು ಮಾತ್ರ ತಮ್ಮ ಪಾಡಿಗೆ ಅವರಿದ್ದಾರೆ ಎಂದು ಟೀಕಿಸಿದರು.
ಮಳೆಯಿಂದಾಗಿ ರೈತರಿಗೆ, ಗ್ರಾಹಕರಿಗೆ ನಿರಂತರ ಸಮಸ್ಯೆ ಆಗುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನೆರೆಯಿಂದ ನಡುಗಡ್ಡೆಗಳಂತೆ ಆಗಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರು ಶಂಖ ಊದಲು ಹೋಗಿದ್ದಾರೆ. ಮುಖ್ಯಮಂತ್ರಿಗಳು ಕೂಡ ಹೋಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಎರಡೂ ಜಿಲ್ಲೆಗಳಲ್ಲಿ ಮಳೆ ಜಾಸ್ತಿ ಆಗಿದೆ. ನೀರು ಮನೆಗಳು ಮತ್ತು ತೋಟಗಳಿಗೆ ನುಗ್ಗಿದೆ. ಬೆಳೆದಿದ್ದ ಬೆಳೆ ನೆಲದ ಮೇಲೆ ಮಲಗಿದೆ. ಆದರೆ ಸರಕಾರ ಮಾತ್ರ ಅತೀವ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ ನಿಡಿದ್ದಾರೆ. ಆದರೆ, ಅವರು ಮಂತ್ರಿಗಳಿಗೆ ಹೋಗಲು ಹೇಳಿಲ್ಲ. ಇದರ ಅರ್ಥವೇನು? ಆದರೆ ಯಾರೂ ಕೂಡ ಜನರ ಬಳಿ ಹೋಗಿಲ್ಲ. ಬಿಜೆಪಿಯವರಿಗೆ ಮಳೆ- ನೆರೆ ಪರಿಹಾರಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ ಎಂದು ಟೀಕಿಸಿದರು.
ಸರ್ಕಾರಕ್ಕೂ ಅಧಿಕಾರಿಗಳಿಗೂ ಸಮನ್ವಯವೇ ಇಲ್ಲ. ಸರ್ಕಾರಕ್ಕೆ ಜನರಿಗಿಂತ ಚುನಾವಣೆಯೇ ಮುಖ್ಯವಾಗಿದೆ. ನಿಮ್ಮ ಶಂಖ ನಾದವನ್ನು ಹದಿನೈದು ದಿನ ಮುಂದೂಡಿ. ಈಗ ಶಂಖ ಊದಿ ನೀವು ಯಾವ ಚುನಾವಣೆ ಗೆಲ್ಲಬೇಕು? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಸರಕಾರ ಮತ್ತು ಆಡಳಿತಾರೂಢ ಪಕ್ಷ ಬಿಜೆಪಿಗೆ ಬಿಸಿ ಮುಟ್ಟಿಸಿದರು.
ಸಾಧನೆಯ ಆಧಾರದ ಮೇಲೆ ಶಂಖ ಊದಿದರೆ ಪರಿಷತ್ ಚುನಾವಣೆ ಮೇಲೆ ಏನೂ ಪರಿಣಾಮ ಆಗಲ್ಲ. ನೀವು ಎಲ್ಲಿ ಕೂತರೂ ಚುನಾವಣೆ ಗೆಲ್ಲುತ್ತೀರಿ, ಹೇಗೆ ಗೆಲ್ಲಬೇಕು ಅಂತಾ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಅವರು ಬಿಜೆಪಿ ಪಕ್ಷದ ಕಾಳೆದದರು.
ಸೋಮವಾರ ಅಭ್ಯರ್ಥಿಗಳ ಪಟ್ಟಿ:
ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಇಂದು ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಮಗೆ ಶಕ್ತಿ ಇರುವ ಆರು ಅಥವಾ ಎಂಟು ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತೇವೆ. ಕೋಲಾರ ಅಭ್ಯರ್ಥಿ ನಾಳೆ ಸಂಜೆ ತೀರ್ಮಾನ ಮಾಡಲಾಗುವುದು. ಮಂಡ್ಯದಲ್ಲಿ ಹಾಲಿ ಸದಸ್ಯರೇ ಮರು ಸ್ಫರ್ಧೆ ಮಾಡುತ್ತಿದ್ದಾರೆ. ದೇವೇಗೌಡರ ಜತೆ ಅಂತಿಮ ಚರ್ಚೆ ಮಾಡಿ ಅಂತಿಮ ಪ್ರಕಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಸಂದೇಶ್ ನಾಗರಾಜ್, ಸಿ.ಆರ್. ಮನೋಹರ್ ಬಗ್ಗೆ ಪ್ರಸ್ತಾಪ ಇಲ್ಲ:
ನಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಂದೇಶ್ ನಾಗರಾಜ್ ಮತ್ತು ಸಿ.ಆರ್. ಮನೋಹರ್ ಮತ್ತೆ ಪಕ್ಷಕ್ಕೆ ವಾಪಸ್ ಬರುವ ವಿಚಾರ ನನ್ನ ಮುಂದೆ ಪ್ರಸ್ತಾಪ ಇಲ್ಲ. ನಮ್ಮ ಮೇಲೆ ನಂಬಿಕೆ ಇಲ್ಲ ಅಂತ ಅವರು ಹೋದವರು. ಮೂರು ವರ್ಷದ ಹಿಂದೆಯೇ ಪಕ್ಷ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ಕುಟುಂಬದ ಸ್ಫರ್ಧೆ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ. ಸಾ.ರಾ.ಮಹೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಗ್ಗೆಯೂ ನನ್ನ ಮುಂದೆ ಯಾವುದೇ ಪ್ರಸ್ತಾಪ ಬಂದಿಲ್ಲ. ಹಾಗಾಗಿ ನಾನು ಉತ್ತರ ಕೊಡುವುದು ಅನವಶ್ಯಕ ಎಂದು ಅವರು ತಿಳಿಸಿದರು.