ಜೂ. 8ರಂದು ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ
ಬೆಂಗಳೂರು, ಜೂನ್ 7: ಬೆಂಗಳೂರು ಪದವೀಧರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಯು ನಾಳೆ (ಜೂನ್ 8) ನಡೆಯಲಿದೆ. ಬೆಳಿಗ್ಗೆ 7.00 ರಿಂದ ಸಂಜೆ 5.00 ಗಂಟೆವರೆಗೆ ಮತದಾನ ನಡೆಯಲಿದೆ ಎಂದು ಬೆಂಗಳೂರು ಪದವೀಧರರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ ಅವರು ತಿಳಿಸಿದರು.
ತಮ್ಮ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಕೇಂದ್ರ, ಉತ್ತರ ಮತ್ತು ದಕ್ಷಿಣ ವಲಯ) ವ್ಯಾಪ್ತಿಗಳು ಒಳಪಟ್ಟಿರುತ್ತದೆ ಎಂದರು.
ಸ್ಥಳೀಯ ಚುನಾವಣೆ: ಸರ್ಕಾರಕ್ಕೆ ಹೈಕೋರ್ಟ್ ಡೆಡ್ ಲೈನ್
ಬೆಂಗಳೂರು ಪದವೀಧರರ ಕ್ಷೇತ್ರದ ವ್ಯಾಪ್ತಿಯ ಒಟ್ಟು 65,354 ಮತದಾರರಿದ್ದಾರೆ (ಗಂಡು 38,451, ಹೆಣ್ಣು 26,891 ಮತ್ತು ಇತರೆ 12). ಈ ಕ್ಷೇತ್ರದ ವ್ಯಾಪ್ತಿಯಲ್ಲಿ 36 ಮುಖ್ಯ ಮತಗಟ್ಟೆಗಳು, 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 82 ಮತಗಟ್ಟೆಗಳಿರಲಿವೆ.
ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪದವೀಧರರು ಮಾತ್ರ ಮತ ಚಲಾಯಿಸಬಹುದಾಗಿದೆ. ಮತದಾರನ ಎಡಗೇ ಉಂಗುರದ ಬೆರಳಿಗೆ ಶಾಯಿ ಹಾಕಲಾಗುತ್ತದೆ.
ದಕ್ಷಿಣ ಶಿಕ್ಷಕರ ಕ್ಷೇತ್ರ: ಚುನಾವಣೆಗೆ ಭರದ ಸಿದ್ಧತೆ
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ, ಮಂಗಳೂರು, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಒಳಪಟ್ಟಿರುತ್ತವೆ. ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 19,402 ಮತದಾರರಿದ್ದಾರೆ (ಗಂಡು 13,461 ಹೆಣ್ಣು 5,940 ಮತ್ತು ಇತರೆ01). ಈ ವ್ಯಾಪ್ತಿಯಲ್ಲಿ 31 ಮುಖ್ಯ ಮತಗಟ್ಟೆಗಳು, ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 37 ಮತಗಟ್ಟೆಗಳಿರುತ್ತವೆ. ಇಲ್ಲಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧೆಯಲಿದ್ದಾರೆ.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿರುವ ಶಿಕ್ಷಕರು
ಮಾತ್ರ ಮತ ಚಲಾಯಿಸಬಹುದಾಗಿದೆ. ಮತ ಚಲಾಯಿಸುವಾಗ ಮತದಾರರು ಎಪಿಕ್ ಅಥವಾ ಚುನಾವಣಾ ಆಯೋಗದಿಂದ ಸೂಚಿಸಿರುವ 13 ದಾಖಲೆಗಳ ಪೈಕಿ ಯಾವುದಾದರೂ ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.
ಮತ ಚಲಾಯಿಸುವ ಉದ್ದೇಶಕ್ಕಾಗಿ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಕೇಂದ್ರದಿಂದಲೇ ಸರಬರಾಜು ಮಾಡಿರುವ ವೈಲೆಟ್ (VIOLET) ಸ್ಕೆಚ್ ಪೆನ್ನ್ನು ಮಾತ್ರ ಬಳಸಿ ಮತ ಚಲಾಯಿಸಬೇಕು. ಬೇರೆ ಯವುದೇ ಪೆನ್ನು, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ನು ಅಥವಾ ಅಭ್ಯರ್ಥಿಗಳ ಹೆಸರಿನ ಮುಂದೆ ಯಾವುದೇ ಸಹಿ, ಇನ್ಷಿಯಲ್ ಹಾಗೂ ಹೆಬ್ಬೆಟ್ಟಿನ ಗುರುತನ್ನು, ಇನ್ನಿತರೆ ಗುರುತುಗಳನ್ನು ಮಾಡಲು ಅವಕಾಶವಿರುವುದಿಲ್ಲ.
ಪ್ರಾಶಸ್ತ್ಯ ಮತವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ 1, 2, 3 ಇತ್ಯಾದಿ ಕ್ರಮದಲ್ಲಿ ಅಥವಾ I, II, III ಇತ್ಯಾದಿ ರೋಮನ್ ಅಂಕಿಗಳ ರೂಪದಲ್ಲಿ ಗುರುತು ಮಾಡಬೇಕು. ಇದರ ಬದಲಾಗಿ, ಒಂದು , ಎರಡು, ಮೂರು ಎಂಬುದಾಗಿ ಅಕ್ಷರ ರೂಪದಲ್ಲಿ ಬರೆಯುವಂತಿಲ್ಲ.
ಮತ ಎಣಿಕೆ
ಜೂನ್ 12 ರಂದು ಈ ಚುನಾವಣೆಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ರಾಮನಾರಾಯಣ್ ಚಲ್ಲಾರಾಮ್ ಕಾಲೇಜು, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ಬೆಳಿಗ್ಗೆ 8.00 ಗಂಟೆಯಿಂದ 14 ಎಣಿಕೆ ಟೇಬಲ್ಗಳಲ್ಲಿ ಮತ ಎಣಿಕೆ ನಡಡೆಯಲಿದೆ.