ಸಂಘಟನಾ ಚತುರ ಸಂತೋಷ್ ಗೆ ಬಡ್ತಿ, ಬಿಜೆಪಿ ಅಧ್ಯಕ್ಷ ಸ್ಥಾನ ರವಿಗೆ ಖಾತ್ರಿ?
ಬೆಂಗಳೂರು, ಮೇ 06: ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮತ್ತೊಮ್ಮೆ ಮೋದಿ ಸರ್ಕಾರ ಬರಲಿದೆ ಎಂಬ ಆತ್ಮವಿಶ್ವಾಸ ಕರ್ನಾಟಕ ಬಿಜೆಪಿ ನಾಯಕರಲ್ಲಿ ಎದ್ದು ಕಾಣುತ್ತಿದೆ. ಇದರ ಜೊತೆಗೆ ರಾಜ್ಯದಲ್ಲಿ ಕಮಲ ಅರಳಲು ಕಾರಣರಾಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟ ಜಾರಿಯಲ್ಲಿದೆ. ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿ, ಬಿಡಲಿ, ಮೇ 23ರ ನಂತರ ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ಕಚೇರಿಗಳಲ್ಲಿ ಅಯಕಟ್ಟಿನ ಹುದ್ದೆಗಳ ಬದಲಾವಣೆಯಂತೂ ಖಚಿತ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ಯಡಿಯೂರಪ್ಪ ಅವರ ಅಧಿಕಾರಾವಧಿ ಏಪ್ರಿಲ್ 05ಕ್ಕೆ ಮುಕ್ತಾಯವಾಗಿದೆ. ಹೀಗಾಗಿ, ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೂ ಭಾರಿ ಲಾಬಿ ನಡೆಯುತ್ತಿದೆ. ಸುಮಾರು 13 ಆಕಾಂಕ್ಷಿಗಳು ರೇಸ್ನಲ್ಲಿದ್ದಾರೆ. ಒಕ್ಕಲಿಗ ಕೋಟಾದಲ್ಲಿ ಮಾಜಿ ಸಚಿವ ಸಿ.ಟಿ ರವಿ, ಮಾಜಿ ಡಿಸಿಎಂ ಆರ್ ಅಶೋಕ್ ಹೆಸರುಗಳು ಮುಂಚೂಣಿಯಲ್ಲಿವೆ. ಈ ನಡುವೆ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ ತನಕ ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ!
ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ಅವರಿಗೆ ಚುನಾವಣೆ ಫಲಿತಾಂಶದ ಬಳಿಕ ಮಹತ್ವದ ಜವಾಬ್ದಾರಿ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆಯಲ್ಲೂ ಸಂತೋಷ್ ಅವರು ಹೈಕಮಾಂಡ್ ನಾಯಕರಿಗೆ ನೆರವಾಗಲಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ ಸಂತೋಷ್
ಶಬರಿಮಲೆ ವಿವಾದದ ವಿಚಾರದಲ್ಲಿ ಪಕ್ಷ ವಹಿಸಿದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಪಾತ್ರ ವಹಿಸಿದ್ದಾರೆ. ಬಿಜೆಪಿಯ ಆಂತರಿಕ ಭಿನ್ನಮತವನ್ನು ಶಮನಗೊಳಿಸಿದ್ದಾರೆ. ಹೀಗಾಗಿ, ಅವರಿಗೆ ಬಡ್ತಿ ನೀಡಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆ ನೀಡುವ ಸಾಧ್ಯತೆ ಹೆಚ್ಚಿದೆ. ರಾಮ್ ಲಾಲ್ ಅವರ ಸ್ಥಾನಕ್ಕೆ ಸಂತೋಷ್ ಅವರನ್ನು ಕರೆತರಲಾಗುತ್ತದೆ. ಸಂತೋಷ್ ಅವರು ದೆಹಲಿಯಲ್ಲಿ ಅಧಿಕ ಕಾಲ ಉಳಿಯಬೇಕಾಗುತ್ತದೆ. ಕರ್ನಾಟಕದ ಆಗು ಹೋಗುಗಳನ್ನು ನಿಯಂತ್ರಿಸಲು ಸೂಕ್ತ ವ್ಯಕ್ತಿಯನ್ನು ಶಿಫಾರಸು ಮಾಡಬೇಕಾಗುತ್ತದೆ.
ಸಿಟಿ ರವಿ ಅಧ್ಯಕ್ಷ ಸ್ಥಾನಕ್ಕೆ ಖಾತ್ರಿ
ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆಗೊಳ್ಳಲು ಹೈಕಮಾಂಡ್ ಮಾಡಿದ ಯೋಜನೆಗಳಲ್ಲಿ ಸಿಟಿ ರವಿ ಸಕ್ರಿಯರಾಗಿದ್ದರು. ತಮಿಳುನಾಡಿನ ಉಸ್ತುವಾರಿ ವಹಿಸಿಕೊಂಡು, ತಮಿಳು ಭಾಷೆ ಕಲಿತು, ಸಂಘಟನೆಯಲ್ಲಿ ಯಶಸ್ವಿಯಾಗಿದ್ದರು. ದಕ್ಷಿಣದಲ್ಲಿ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಸಮರ್ಥವಾಗಿ ಸಂಘಟನೆ ಮಾಡಲು ರವಿ ಸೂಕ್ತ ಎಂದು ಸಂತೋಷ್ ಅವರು ಶಿಫಾರಸು ಮಾಡಿದ್ದಾರೆ.. ಹಾಗಾಗಿ ಬಿಜೆಪಿ ಹೈಕಮಾಂಡ್ ಕೂಡಾ ರವಿ ಪರ ಹೆಚ್ಚಿನ ಆಸಕ್ತಿ ಹೊಂದಿದೆ.
ಲೋಕ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ?
ರಾಜ್ಯಾಧ್ಯಕ್ಷ ಹುದ್ದೆಗೆ ಭಾರಿ ಲಾಬಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಆಕಾಂಕ್ಷಿಗಳಿದ್ದಾರೆ ಸಿಟಿ ರವಿ, ಆರ್ ಆಶೋಕ್, ಅರವಿಂದ್ ಲಿಂಬಾವಳಿ, ಬಿ ಶ್ರೀರಾಮುಲು ಹೆಸರು ಮುಂಚೂಣಿಯಲ್ಲಿವೆ. ಈ ಬಾರಿ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಯಿದೆ. ಲಿಂಗಾಯತ ವೀರಶೈವ ಮುಖಂಡರು, ಕುರುಬ ಹೀಗೆ ಜಾತಿ ಲೆಕ್ಕಾಚಾರ ಕೂಡಾ ನಡೆಯುತ್ತಿದೆ. ಆದರೆ, ಎಲ್ಲವನ್ನು ಮೀರಿ, ಮುಂದಿನ ಅವಧಿಯಲ್ಲಿ ಅಧಿಕಾರ ಸ್ಥಾಪನೆ ಮಾಡಲು ಬಿಜೆಪಿಗೆ ಬಲ ತುಂಬಬಲ್ಲಂಥವರನ್ನು ಮಾತ್ರ ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದೆ.
ಆರ್ ಅಶೋಕ್
ಮಾಜಿ ಉಪ ಮುಖ್ಯಮಂತ್ರಿ ಆರ್ ಆಶೋಕ್ ಅವರ ಜನಪ್ರಿಯತೆ ಹಳೆ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸೀಮಿತ ಎಂಬ ಮಾತಿದೆ. ಆದರೆ, ಇದನ್ನು ಅಶೋಕ್ ಅವರು ಈಗ ಸುಳ್ಳಾಗಿಸಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರದ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ಸೇರಿದಂತೆ ಪ್ರಮುಖ ಮುಖಂಡರು ರಾಜ್ಯದಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸರಿ ಸುಮಾರು 32ಕ್ಕೂ ಅಧಿಕ ವಿಭಾಗಳಿದ್ದ ಆಯೋಜನಾ ಉಸ್ತುವಾರಿಯನ್ನು ಆರ್ ಅಶೋಕ್ ವಹಿಸಿಕೊಂಡಿದ್ದರು. ರಾಜ್ಯದೆಲ್ಲೆಡೆ, ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಅಶೋಕ್ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದರ ಫಲವಾಗಿ ಅಧ್ಯಕ್ಷ ಸ್ಥಾನ ದೊರೆತರೂ ಅಚ್ಚರಿಯೇನಿಲ್ಲ.