ಬಿಜೆಪಿಯಲ್ಲಿ ಟಿಕೆಟ್ ಬಿಕ್ಕಟ್ಟು, 10 ಕ್ಷೇತ್ರದಲ್ಲಿ ಬಂಡಾಯ
Recommended Video
ಬೆಂಗಳೂರು, ಏಪ್ರಿಲ್ 10: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಬಿಕ್ಕಟ್ಟು ಆರಂಭವಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಸುಮಾರು 10 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ ಅಂತಿಮಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ನರೇಂದ್ರ ಮೋದಿ ನೇತೃತ್ವದ ಚುನಾವಣಾ ಸಮಿತಿ ಒಪ್ಪಿಗೆ ಸಿಕ್ಕಿತು. ಭಾನುವಾರ(ಏಪ್ರಿಲ್ 07) ರಾತ್ರಿ 72 ಅಭ್ಯರ್ಥಿಗಳಿದ್ದ ಅಧಿಕೃತ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಇದರ ಬೆನ್ನಲ್ಲೆ, ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂಗಳಾದ ಕೆ .ಎಸ್ ಈಶ್ವರಪ್ಪ ಮತ್ತು ಆರ್ ಅಶೋಕ, ಸಂಸದ ಅನಂತ್ ಕುಮಾರ್ ಅವರುಗಳು ಸದ್ಯ ಬಂಡಾಯಗಾರರ ಟಾರ್ಗೆಟ್ ಆಗಿದ್ದು, ಹಲವೆಡೆ ಪ್ರತಿಭಟನೆ, ಘೋಷಣೆಗಳು ಕೇಳಿ ಬಂದಿವೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇತ್ತ ಬಿಜೆಪಿ ಹಿರಿಯ ನಾಯಕರು ಮಾತ್ರ, ಬಂಡಾಯ, ಭಿನ್ನಮತ ಎಂಬುದು ನಮ್ಮಲ್ಲಿಲ್ಲ ಎಂದು ಹೇಳಿ ಎರಡನೇ ಪಟ್ಟಿ ತಯಾರಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಚುನಾವಣಾ ಉಸ್ತುವಾರಿ ಸಮಿತಿ ಸಭೆಯಲ್ಲಿ ಪಿಯೂಶ್ ಗೋಯೆಲ್, ಪ್ರಕಾಶ್ ಜಾವಡೇಕರ್, ಮುರಳೀಧರ ರಾವ್ ಅಲ್ಲದೆ ಶೋಭಾ ಕರಂದ್ಲಾಜೆ ಕೂಡಾ ಇದ್ದಾರೆ.
ಶಿಗ್ಗಾಂವಿಯಲ್ಲಿ ಬಂಡಾಯವಿಲ್ಲ : ಈಶ್ವರಪ್ಪ
ಶಿಗ್ಗಾಂವಿ ಕ್ಷೇತ್ರದಿಂದ ಸೋಮಣ್ಣ ಬೇವಿನಮರದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲ್ಲ. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಪ್ರತಿ ಕ್ಷೇತ್ರಕ್ಕೂ 10-15 ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳೆಲ್ಲರನ್ನೂ ಸಮಾಧಾನ ಮಾಡುವುದು ಸಾಧ್ಯವಿಲ್ಲ. ಟಿಕೆಟ್ ವಂಚಿತರನ್ನು ತಣಿಸಲು ಸಮಾಧಾನ ಮೋರ್ಚಾ ಆರಂಭಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದ್ದಾರೆ.
ಹಿಂದುಳಿದವರ ಸಂಘಟನೆಗಾಗಿ ರೂಪುಗೊಂಡ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಸೋಮಣ್ಣ ಬೇವಿನಮರದ ಅವರಿಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಈಶ್ವರಪ್ಪ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಅವರ ಆಪ್ತ ಬಸವರಾಜ ಬೊಮ್ಮಾಯಿ ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ರೇವೂ ನಾಯಕ್ ಬೆಳಮಗಿ
ನಾಲ್ಕು ಬಾರಿ ಶಾಸಕರಾಗಿ, 2009 ಹಾಗೂ 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿದ್ದ ರೇವೂ ನಾಯಕ್ ಬೆಳಮಗಿ ಅವರು ಕೂಡಾ ಈಗ ಟಿಕೆಟ್ ವಂಚಿತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಳಮಗಿ ಅವರು ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಮೊದಲ ಪಟ್ಟಿಯಂತೆ ಈ ಕ್ಷೇತ್ರಾಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಟಿಕೆಟ್ ಸಿಕ್ಕಿದೆ.
ಬಿಬಿಎಂಪಿಯ ಮಾಜಿ ಸದಸ್ಯ ಜಿ.ಎಚ್.ರಾಮಚಂದ್ರ
ಬಿಬಿಎಂಪಿಯ ಮಾಜಿ ಸದಸ್ಯ ಜಿ.ಎಚ್.ರಾಮಚಂದ್ರ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಿಂದೆ ಎರಡು ಬಾರಿ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಟಿಕೆಟ್ ಪಡೆಯಲು ಅವರು ಪ್ರಯತ್ನ ನಡೆಸಿದ್ದರು. ಪಿ.ಎಂ.ಮುನಿರಾಜು ಗೌಡ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಇದರಿಂದಾಗಿ ಜಿ.ಎಚ್.ರಾಮಚಂದ್ರ ಅವರು ಅಸಮಾಧಾನಗೊಂಡಿದ್ದಾರೆ. 3ನೇ ಬಾರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರ- ತಿಪ್ಪೇಸ್ವಾಮಿ
ಮೊಳಕಾಲ್ಮೂರು ಕ್ಷೇತ್ರದಿಂದ ಸಂಸದ ಶ್ರೀರಾಮುಲು ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಈ ಕ್ಷೇತ್ರ ಹಾಲಿ ಶಾಸಕ ಬಿಎಸ್ ಆರ್ ಕಾಂಗ್ರೆಸ್ ನ ಎಸ್ ತಿಪ್ಪೇಸ್ವಾಮಿ ಮುನಿಸಿಕೊಂಡಿದ್ದಾರೆ.
ಬಳ್ಳಾರಿ ಮಾಜಿ ಸಂಸದೆ ಜೆ. ಶಾಂತ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ ಬಗ್ಗೆ ಕೇಳಿ ಬಂದಿತ್ತು. ನಾಯಕ ಜನಾಂಗದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಬಳ್ಳಾರಿಯಿಂದ ಬಿ. ಶ್ರೀರಾಮುಲುಗೆ ಇಲ್ಲಿಂದ ಸ್ಪರ್ಧಿಸಿ ಎಂದು ಸೂಚಿಸಿದೆ.
ಎನ್ ಆರ್ ರಮೇಶ್- ಚಿಕ್ಕಪೇಟೆ
ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ .ಆರ್ ರಮೇಶ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೊಡಿಸುವ ಭರವಸೆ ನೀಡಿದ್ದ ಮಾಜಿ ಡಿಸಿಎಂ ಆರ್ ಅಶೋಕ್, ಸಂಸದ ಅನಂತಕುಮಾರ್ ಅವರು ರಮೇಶ್ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವ ಯಾವ ಕ್ಷೇತ್ರದಲ್ಲಿ ಬಂಡಾಯ
* ಚಿಕ್ಕಪೇಟೆ-ಎನ್. ಆರ್ ರಮೇಶ್(ಉದಯ್ ಗರುಡಾಚಾರ್)
* ವಿಜಯಪುರ ನಗರ- ಅಪ್ಪು ಪಟ್ಟಣಶೆಟ್ಟಿ(ಬಸನಗೌಡ ಪಾಟೀಲ್ ಯತ್ನಾಳ್)
*
ಶಿಗ್ಗಾಂವ್-ಸೋಮಣ್ಣ
ಬೇವಿನಮರದ
(ಬಸವರಾಜ
ಬೊಮ್ಮಾಯಿ)
*
ಮೊಳಕಾಲ್ಮೂರು-ತಿಪ್ಪೇಸ್ವಾಮಿ
(ಶ್ರೀರಾಮುಲು)
*
ರಾಜರಾಜೇಶ್ವರಿ
ನಗರ-ರಾಮಚಂದ್ರ(ಪಿ.ಎಂ
ಮುನಿರಾಜು)
* ಬೈಲಹೊಂಗಲ- ಜಗದೀಶ್ ಮೆಟಗುಡ್ಡ (ವಿಶ್ವನಾಥ್ ಪಾಟೀಲ್)
* ಮುದ್ದೇಬಿಹಾಳ- ಮಂಗಳಾದೇವಿ ಬಿರಾದರ್ (ಎ.ಎಸ್ ಪಾಟೀಲ್ ನಡಹಳ್ಳಿ)
* ಗುಲಬರ್ಗಾ ದಕ್ಷಿಣ- ರೇವೂ ನಾಯಕ್ ಬೆಳಮಗಿ (ದತ್ತಾತ್ರೇಯ ರೇವೂರ್)