ಬಿಜೆಪಿ ಟಿಕೆಟ್ ಸಿಗದ ಆಕಾಂಕ್ಷಿಗಳಿಂದ ಬಂಡಾಯದ ಬಾವುಟ
ಬೆಂಗಳೂರು, ಏಪ್ರಿಲ್ 09: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ ಅಂತಿಮಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ನರೇಂದ್ರ ಮೋದಿ ನೇತೃತ್ವದ ಚುನಾವಣಾ ಸಮಿತಿ ಒಪ್ಪಿಗೆ ಸಿಕ್ಕಿದೆ. ಭಾನುವಾರ(ಏಪ್ರಿಲ್ 07) ರಾತ್ರಿ 72 ಅಭ್ಯರ್ಥಿಗಳಿದ್ದ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಆದರೆ, ಇದರ ಬೆನ್ನಲ್ಲೆ, ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂಗಳಾದ ಕೆ .ಎಸ್ ಈಶ್ವರಪ್ಪ ಮತ್ತು ಆರ್ ಅಶೋಕ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗುವರೇ? ಎಂಬ ಕುತೂಹಲಕ್ಕೆ ಈಗ ಅರ್ಧ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಬಿಜೆಪಿ ಬೆನ್ನಿಗೆ ಬಂಡಾಯದವರಿಂದ ಗುದ್ದು ಸಿಕ್ಕಿದೆ.
ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ .ಆರ್ ರಮೇಶ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೊಡಿಸುವ ಭರವಸೆ ನೀಡಿದ್ದ ಮಾಜಿ ಡಿಸಿಎಂ ಆರ್ ಅಶೋಕ್ ಅವರು ರಮೇಶ್ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಎನ್. ಆರ್ ರಮೇಶ್ ಅವರ ಅಭಿಮಾನಿಗಳು ಭಾನುವಾರ ರಾತ್ರಿ ವೇಳೆ, ಆರ್ ಅಶೋಕ ಅವರ ಮನೆ ಮುಂದೆ ಜಮಾಯಿಸಿ, ಪ್ರತಿಭಟನೆ ಮಾಡಿದ್ದಾರೆ. ನಂಬಿಕೆ ದ್ರೋಹಿ ಅಶೋಕ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಟಿಕೆಟ್ ರಾಜಕೀಯ, ಅನ್ಯಾಯದ ಬಗ್ಗೆ ಸೋಮವಾರ ಮಧ್ಯಾಹ್ನ ಎನ್ .ಆರ್ ರಮೇಶ್ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಹಗರಣಗಳನ್ನು ಬಯಲು ಮಾಡುತ್ತಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ, ಯಡಿಯೂರು ವಾರ್ಡ್ ಮಾಜಿ ಸದಸ್ಯ ಎನ್.ಆರ್.ರಮೇಶ್ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆರ್.ಅಶೋಕ್, ಕೇಂದ್ರ ಸಚಿವ ಅನಂತ್ ಕುಮಾರ್ ಇಬ್ಬರಿಗೂ ಆಪ್ತರಾಗಿರುವ ರಮೇಶ್ಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ಉದ್ಯಮಿ ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ಸಿಕ್ಕಿದೆ.
ಚಿಕ್ಕಪೇಟೆ ಬಿಜೆಪಿ ಟಿಕೆಟ್ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳು!
ಅತ್ತ ಶಿಗ್ಗಾಂವಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಣ್ಣ ಬೇವಿನಮರದ ಅವರಿಗೆ ಟಿಕೆಟ್ ಕೈತಪ್ಪಿದೆ. ಕೆಎಸ್ ಈಶ್ವರಪ್ಪ ಅವರ ಆಪ್ತರಾದ ಸೋಮಣ್ಣ ಅವರ ಬದಲಿಗೆ ಬಿ.ಎಸ್ ಯಡಿಯೂರಪ್ಪ ಅವರ ಆಪ್ತರಾದ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಸಿಕ್ಕಿದೆ.ಇನ್ನು ಧಾರವಾಡದಲ್ಲಿ ಸೀಮಾ ಮಸೂತಿ, ಶಿವಮೊಗ್ಗದಲ್ಲಿ ರುದ್ರೇಗೌಡ ಹೀಗೆ ಟಿಕೆಟ್ ವಂಚಿತರ ಪಟ್ಟಿ ಬೆಳೆಯುತ್ತಿದೆ.