ಕುಟುಂಬ ರಾಜಕಾರಣದಿಂದ ಯಾರಿಗೆ ಸಿಕ್ತು ಟಿಕೆಟ್?
ಬೆಂಗಳೂರು, ಏಪ್ರಿಲ್ 16: ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಸಾವಿರಾರು ಅರ್ಜಿಗಳನ್ನು ಪರಿಶೀಲಿಸಿ, ತನ್ನ ಮೊದಲ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಕುಟುಂಬ ರಾಜಕೀಯದ ದೆಸೆಯಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಗೊಂದಲ ಇನ್ನಷ್ಟು ಹೆಚ್ಚಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸೇರಿದಂತೆ ಬಹುತೇಕ ಟಿಕೆಟ್ ಗಾಗಿ ಬೇಡಿಕೆ ಇಟ್ಟವರ ಪೈಕಿ ಎಲ್ಲರಿಗೂ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದೆ. ಆದರೆ, ಲೋಕೋಪಯೋಗಿ ಸಚಿವ ಎಚ್. ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಪಶುಸಂಗೋಪನಾ ಸಚಿವ ಎ ಮಂಜು ಅವರ ಪುತ್ರ ಮಂಥರ್ ಗೌಡ ಅವರಿಗೆ ನಿರಾಶೆಯಾಗಿದೆ.
ನಿರೀಕ್ಷೆಯಂತೆ, ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರ ಪುತ್ರ ಸಂತೋಷ್ ಹಾಗೂ ಗೃಹಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಕ್ರಮವಾಗಿ ಚಿಕ್ಕನಾಯಕನಹಳ್ಳಿ ಹಾಗೂ ಜಯನಗರದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಎಲ್ಲಾ ಶಾಸಕರಿಗೂ ಟಿಕೆಟ್ ಸಿಕ್ಕಿಲ್ಲ
ಹಾಲಿ 122 ಶಾಸಕರ ಪೈಕಿ 119 ಶಾಸಕರಿಗೆ ಟಿಕೆಟ್ ಖಚಿತ ಎನ್ನಲಾಗಿತ್ತು. ಆದರೆ, 12 ಹಾಲಿ ಶಾಸಕರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಈ ಪೈಕಿ ಜಿ. ರಾಮಕೃಷ್ಣ (ಕಲಬುರಗಿ ಗ್ರಾಮಾಂತರ) ಅವರ ಬದಲಿಗೆ ಅವರ ಪುತ್ರ ವಿಜಯ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ. ಜೊತೆಗೆ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯ ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ ಅವರಿಗೂ ಟಿಕೆಟ್ ನೀಡಲಾಗಿದೆ.
ಮುನಿಯಪ್ಪ, ಜಯಚಂದ್ರ ಕುಟುಂಬಕ್ಕೆ ಟಿಕೆಟ್
ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೆ ಕೆಜಿಎಫ್ ನಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ಅವರಿಗೆ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಕುಟುಂಬ ರಾಜಕಾರಣಿಗಳ ಪಟ್ಟಿ ಬೆಳೆದಿದೆ
ಮಾಜಿ ಶಾಸಕ ಶ್ಯಾಮ್ ಭೀಮ್ ಘಾಟ್ಗೆ ಅವರ ಪುತ್ರ ಅಮಿತ್ ಘಾಟ್ಗೆ ಅವರಿಗೆ ಕುಡಚಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಇದೆ ರೀತಿ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಎಸ್. ಕೆ ಶ್ರೀನಿವಾಸ್ ಕರಿಯಣ್ಣ ಅವರಿಗೆ ಶಿವಮೊಗ್ಗ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ.
ಎಚ್. ಸಿ ಮಹದೇವಪ್ಪ ಅವರಿಗೆ ನಿರಾಶೆ
ಲೋಕೋಪಯೋಗಿ ಸಚಿವ ಎಚ್. ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಟಿ ನರಸೀಪುರದಿಂದ ಸುನೀಲ್ ಬೋಸ್ ಸ್ಪರ್ಧಿಸಲು ಬಯಸಿದ್ದರು. ಮಹದೇವಪ್ಪ ಅವರು ಬೆಂಗಳೂರಿನ ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದರಾಗಿದ್ದರು. ಪಶುಸಂಗೋಪನಾ ಸಚಿವ ಎ ಮಂಜು ಅವರ ಪುತ್ರ ಮಂಥರ್ ಗೌಡ ಅವರಿಗೆ ನಿರಾಶೆಯಾಗಿದೆ.