ಗಣೇಶನ ಅವತಾರ : ಟಪಾಲ್ ಕೈಯಲ್ಲಿ ಜೆಡಿ(ಯು) ಟಪಾಲ್!
ಬಳ್ಳಾರಿ, ಮಾರ್ಚ್. 01 : ಅಂತೂ ಇಂತೂ ಟಪಾಲ್ ಗಣೇಶ್ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವೊಂದರಿಂದ ಆಹ್ವಾನ ಪಡೆದಿದ್ದಾರೆ. ಆರ್ಟಿಐ ಕಾರ್ಯಕರ್ತನಾಗಿ, ಜಿ. ಜನಾರ್ಧನರೆಡ್ಡಿ ಮತ್ತು ಅವರ ಸಹೋದರರ ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಲೇ ಪ್ರಾಣಾಪಾಯಕ್ಕೆ ಸಿಲುಕಿ ಜನಪ್ರಿಯತೆ ಪಡೆದವರು ಟಪಾಲ್ ಗಣೇಶ್.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎನ್ಸಿಪಿ, ಎಎಪಿ ಹೀಗೇ ಅನೇಕ ಪಕ್ಷಗಳ ಕದತಟ್ಟಿ ಈಗ ಜೆಡಿ(ಯು) ಟಿಕೆಟ್ ನಿಂದ ಆಹ್ವಾನ ಪಡೆದಿದ್ದಾರೆ.
ಜೆಡಿಯುನ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಅವರ ಮೂಲಕ ಪಕ್ಷಕ್ಕೆ ಆಹ್ವಾನ ಪಡೆದಿದ್ದು, ಮಹಿಮಾ ಪಟೇಲ್ ಅವರನ್ನು ಬಳ್ಳಾರಿಗೆ ಸ್ವಾಗತಿಸಿ, ತಮ್ಮ ಸ್ವಕ್ಷೇತ್ರದಲ್ಲೇ ತಮ್ಮ ಬೆಂಬಲಿಗರ ಜೊತೆಯಲ್ಲಿ ಪಕ್ಷಕ್ಕೆ ಸೇರುವ ವಿಚಾರ ಹೊಂದಿದ್ದಾರೆ.
ಮಾರ್ಚ್ 1 ರ, ಗುರುವಾರ ಬೆಳಗ್ಗೆಯಿಂದ 'ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ನನಗೆ ಮತ ನೀಡಿ' ಘೋಷ ವಾಕ್ಯದ ಅಡಿ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದಾರೆ. ತಮ್ಮದೇ ಆದ ಬೆಂಬಲಿಗರನ್ನು ಹೊಂದಿರುವ ಅವರು ತಮ್ಮ ಸುಧೀರ್ಘ ಹೋರಾಟವನ್ನೇ ಚುನಾವಣಾ ಬಂಡವಾಳ ಮಾಡಿಕೊಂಡು ಮತಕೇಳಲಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 15 - 17 ಸಾವಿರ ಸಂಖ್ಯೆಯಷ್ಟು ಬಲಿಜ ಜನಾಂಗದ ಮತದಾರರನ್ನು ಹೊಂದಿರುವ ಟಪಾಲ್ ಗಣೇಶ್, ಕೆ. ಭಾಸ್ಕರನಾಯ್ಡು, ಕೆ. ನಿರಂಜನನಾಯ್ಡು ನಂತರ ಆ ಜನಾಂಗದಿಂದ ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದಾರೆ. ರಾಜಕೀಯ ಸಭೆ ಸಮಾರಂಭಗಳನ್ನು ನಡೆಸಲಿಕ್ಕಾಗಿಯೇ ತಮ್ಮದೇ ಆದ ಸ್ವಂತದ ಸಭಾಂಗಣವನ್ನು, ಪ್ರಚಾರದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಒನ್ಇಂಡಿಯಾ ಜತೆ ಟಪಾಲ್ ಗಣೇಶ್ ಸಂದರ್ಶನ