ಟಾರ್ಗೆಟ್ 28: ಬೆಂಗಳೂರಿನಲ್ಲಿ 'ಮನೆ ಮನೆಗೆ ಕುಮಾರಣ್ಣ'
ಬೆಂಗಳೂರು, ಜನವರಿ 12: ಬೆಂಗಳೂರಿನ ಮತದಾರರಿಗೆ ಜಾತ್ಯಾತೀತ ಜನತಾ ದಳದ ಬಗ್ಗೆ ಅರಿವು ಮೂಡಿಸಲು ಜೆಡಿಎಸ್ ಸಜ್ಜಾಗಿದೆ.
ಮಕರ ಸಂಕ್ರಾಂತಿ ಹಬ್ಬ ಮುಗಿದ ಮೇಲೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರಸ್ವಾಮಿ ಅವರು ತಮ್ಮ 'ಮನೆ ಮನೆಗೆ ಕುಮಾರಣ್ಣ' ಅಭಿಯಾನವನ್ನು ಬಿಬಿಎಂಪಿಯ ಪ್ರತಿ ವಾರ್ಡಿಗೆ ಕೊಂಡೊಯ್ಯಲು ಯೋಜನೆ ಹಾಕಿಕೊಂಡಿದ್ದಾರೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 10- 12 ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕೆಂಬ ಗುರಿ ಹೊಂದಿದ್ದಾರೆ. ಇದಕ್ಕಾಗಿ ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಪ್ರತಿ ವಾರ್ಡ್ಗಳಲ್ಲೂ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಯಲಿದೆ.
ಜನವರಿ 15ರ ನಂತರ ಆರಂಭವಾಗಿ ಫೆಬ್ರವರಿ ಅಂತ್ಯದವರೆಗೂ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಸರ್ಕಾರವು ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ರೈತರ ಪಕ್ಷ ಎನಿಸಿಕೊಂಡಿರುವ ಜೆಡಿಎಸ್, ನಗರಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಿಲ್ಲ ಎಂಬ ಅಪವಾದವನ್ನು ತೆಗೆದು ಹಾಕಲು ಎಲ್ಲಾ ರೀತಿಯಿಂದ ಜೆಡಿಎಸ್ ಸಜ್ಜಾಗಿದೆ.