ವಿಡಿಯೋ: ಟಿಕೆಟ್ ಸಿಗದೆ ಕಣ್ಣೀರಿಟ್ಟ ರಾಜಕಾರಣಿಗಳ ಪಟ್ಟಿ
ಬೆಂಗಳೂರು, ಏಪ್ರಿಲ್ 17: ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆ, ಟಿಕೆಟ್ ಆಕಾಂಕ್ಷಿಗಳ ಬಂಡಾಯ, ಭಿನ್ನಮತ, ಆಕ್ರೋಶ, ಬೇಸರ, ಹತಾಶೆ ಕೊನೆಗೆ ಕಣ್ಣೀರಿಗೆ ಕರ್ನಾಟಕ ಸಾಕ್ಷಿಯಾಗಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಇಲ್ಲಿ ತನಕ ಎರಡು ಪಟ್ಟಿಯನ್ನು ಪ್ರಕಟಿಸಿದ್ದು, ಮೊದಲ ಪಟ್ಟಿಯಲ್ಲಿ 72 ಮಂದಿ ಅಭ್ಯರ್ಥಿಗಳು ಹಾಗೂ ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಅಂತಿಮ ಪಟ್ಟಿಯನ್ನು ಏಪ್ರಿಲ್ 17 ಅಥವಾ 18ರಂದು ಪ್ರಕಟವಾಗುವ ನಿರೀಕ್ಷೆಯಿದೆ.
ಬಿಜೆಪಿ 2ನೇ ಪಟ್ಟಿಯಲ್ಲಿ ಕಾಣಿಸಿಕೊಂಡ ಹೊಸ ಮುಖಗಳು
ಕಾಂಗ್ರೆಸ್ ತನ್ನ 218 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಜೆಡಿಎಸ್ 126ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಿದೆ. ಟಿಕೆಟ್ ಸಿಗದೆ ಕಣ್ಣೀರಿಟ್ಟವರ ಪೈಕಿ ಬಿಜೆಪಿಯ ಎಂಎಲ್ಸಿ ಶಶೀಲ್ ನಮೋಶಿ ಅವರು ಹೆಚ್ಚು ಸದ್ದು ಮಾಡಿದ್ದಾರೆ.
ಕುಟುಂಬ ರಾಜಕಾರಣದಿಂದ ಯಾರಿಗೆ ಸಿಕ್ತು ಟಿಕೆಟ್?
ಬಿಕ್ಕಿ ಬಿಕ್ಕಿ ಅತ್ತ ಶಶೀಲ್ ಅವರ ಗೋಳು ಬಿಜೆಪಿ ಹೈಕಮಾಂಡ್ ಮುಟ್ಟುವಂತ್ತಿತ್ತು. ಮಂಗಳವಾರದಂದು ಈ ಪಟ್ಟಿಗೆ ಬಿಜೆಪಿಯ ಬೇಳೂರು ಗೋಪಾಲಕೃಷ್ಣ ಕೂಡಾ ಸೇರ್ಪಡೆಗೊಂಡಿದ್ದಾರೆ. ಮಿಕ್ಕಂತೆ ಯಾರೆಲ್ಲ ಕಣ್ಣೀರಿಟ್ಟರು ಮುಂದೆ ಓದಿ..
ಬಾಗೇಪಲ್ಲಿ ಮಾಜಿ ಶಾಸಕ ಎನ್.ಸಂಪಂಗಿ
ಟಿಕೆಟ್ ತನಗೇ ಗ್ಯಾರಂಟಿ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಬಾಗೇಪಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಅವರಿಗೆ ನಿರಾಸೆ ಕಣ್ಣೀರು ಹಾಕಿದರು. ಬಾಗೇಪಲ್ಲಿಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಂಪಂಗಿ ಮನನೊಂದಿದಾರೆ.
ಸಂಪಂಗಿ ಅವರಿಗೆ ಟಿಕೆಟ್ ಕೊಡಿಸಲು ವಿಫಲರಾಗಿರುವ ಸಂಸದ ವೀರಪ್ಪ ಮೊಯ್ಲಿ ವಿರುದ್ಧ ಸಂಪಂಗಿ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಕೂಡಾ ನಡೆಸಿದ್ದಾರೆ.
ಸಾಗರ -ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಅವರು ಮಂಗಳವಾರದಂದು ಯಡೇನಹಳ್ಳಿಯಲ್ಲಿ ತಮ್ಮ ಬೆಂಬಲಿಗರ ಮುಂದೆ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ. ಸಾಗರದಲ್ಲಿ ಬಿಜೆಪಿಯಿಂದ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
|
ಶಶೀಲ್ ನಮೋಶಿ ಕಣ್ಣೀರು
ಬಿಜೆಪಿಯ ಮಾಜಿ ಎಂಎಲ್ಸಿ ಶಶೀಲ್ ನಮೋಶಿ ಅವರು ಬಿಜೆಪಿಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳದ್ದಕ್ಕೆ ಅಸಮಾಧಾನಗೊಂಡು ಗೋಳೋ ಎಂದು ಕಣ್ಣೀರಿಟ್ಟರು. ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಈ ಕ್ಷೇತದಲ್ಲಿ ಚಂದ್ರಕಾಂತ್ ಬಿ. ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ.
|
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ
ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಬಯಸಿದ್ದ ಶಾಸಕ ಬಸವರಾಜ ಶಿವಣ್ಣ ಅವರಿಗೆ ನಿರಾಶೆಯಾಗಿ, ಕಣ್ಣೀರು ಸುರಿಸಿದ್ದಾರೆ. ಈ ಕ್ಷೇತ್ರದಲ್ಲಿ ಎಂಎಲ್ಸಿಯಾಗಿರುವ, ಸಚಿವ ಎಸ್ ಆರ್ ಪಾಟೀಲ್ ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಲಾಗಿದೆ.
|
ಹಾವೇರಿ ಶಾಸಕ ಮನೋಹರ್ ತಹಸೀಲ್ದಾರ್
ಮಾಜಿ ಅಬಕಾರಿ ಸಚಿವ, ಹಾವೇರಿ ಶಾಸಕ ಮನೋಹರ್ ತಹಸೀಲ್ದಾರ್ ಅವರಿಗೆ ಅನಾರೋಗ್ಯ ಹಾಗೂ ವಯೋಮಿತಿ ಕಾರಣ ನೀಡಿ ಟಿಕೆಟ್ ನಿರಾಕರಿಸಲಾಗಿದೆ. ಹಾವೇರಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಆದರೆ, ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ಲಭಿಸಿದ್ದಕ್ಕೆ ಮನನೊಂದು ಮನೋಹರ್ ತಹಸೀಲ್ದಾರ್ ಅವರು ಕಣ್ಣೀರು ಹಾಕಿದರು.