ಸಿದ್ದರಾಮಯ್ಯ ವಿರುದ್ಧ ತೋಳೇರಿಸಿದ್ದ ಸುರೇಶ್ ಬಾಬು ಕೈ ಪಾಲು?
ಬಳ್ಳಾರಿ, ಫೆಬ್ರವರಿ 05: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ವಿಧಾನಸಭೆಯಲ್ಲಿ ತೋಳೇರಿಸಿ, ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಕಾರಣವಾಗಿದ್ದ ಕಂಪ್ಲಿಯ ಬಿಜೆಪಿ ಶಾಸಕ, ಬಿ. ಶ್ರೀರಾಮುಲು ಅವರ ಸೋದರಳಿಯ, ಟಿ.ಚ್. ಸುರೇಶ್ಬಾಬು ಅವರು ಕಾಂಗ್ರೆಸ್ ಸೇರುವ ವಿಚಾರ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ.
ಕಾಂಗ್ರೆಸ್ನ ಉನ್ನತ ಮೂಲಗಳ ಪ್ರಕಾರ, ಬಳ್ಳಾರಿ ನಗರ ನಿವಾಸಿ ಶಾಸಕ ಟಿ.ಎಚ್. ಸುರೇಶಬಾಬು ಅವರು ಒಬ್ಬರೇ ಪಕ್ಷ ತೊರೆಯುತ್ತಿಲ್ಲ. ಜತೆಗೆ ಬಿಜೆಪಿ ಮುಖಂಡರ ಜೊತೆಯಲ್ಲಿ ಆತ್ಮೀಯತೆ ಹೊಂದಿರುವ, ವಿಧಾನಪರಿಷತ್ತಿನ ಓರ್ವ ಸದಸ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆತರಲು ಉತ್ಸುಕರಾಗಿದ್ದಾರೆ.
ಆನಂದ್ ಸಿಂಗ್ ಎಂಟ್ರಿಯಿಂದ ಬಿರುಕುಗೊಂಡ ಬಳ್ಳಾರಿ ಕಾಂಗ್ರೆಸ್
ಮೊದಲನೆಯ ಹಂತದಲ್ಲಿ ಸಿದ್ಧರಾಮಯ್ಯ ಅವರ ಗೃಹ ಕಚೇರಿಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮತ್ತು ಕಾಂಗ್ರೆಸ್ಸಿನ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಅವರೇ ಮುತುವರ್ಜಿ ವಹಿಸಿ ಟಿ.ಎಚ್. ಸುರೇಶ್ಬಾಬು ಅವರನ್ನು ಮೇಲ್ಕಾಣಿಸಿದ ಮುಖಂಡರ ಬಳಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಕೊನೆಗೂ ಒಪ್ಪಿದ ಸಿದ್ದರಾಮಯ್ಯ
ಟಿ.ಎಚ್. ಸುರೇಶಬಾಬು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆರಂಭದಲ್ಲಿ ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ಹಿರಿಯ ಮುಖಂಡರ ಒತ್ತಡ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ಸಿಗೆ ಆಹ್ವಾನಿಸಲು ತಲೆದೂಗ'ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಬೇಲ್ಡೀಲ್' ಪ್ರಕರಣ ಅಡ್ಡಿ
ಪಕ್ಷದ ಹೈಕಮಾಂಡ್ ಟಿ.ಎಚ್. ಸುರೇಶಬಾಬು ವಿರುದ್ಧದ ಬೇಲ್ಡೀಲ್' ಪ್ರಕರಣದ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿದೆ. ಚುನಾವಣೆಯ ಪೂರ್ವದಲ್ಲಿ ಈ ಪ್ರಕರಣದ ಕುರಿತು ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ತೀರ ತೀರ ಕಡಿಮೆ ಎನ್ನಲಾಗಿದೆ, ಉನ್ನತ ಮಟ್ಟದಲ್ಲಿ ಈ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬಿಜೆಪಿಗೆ ಜಿಲ್ಲೆಯಲ್ಲಿ ತೀವ್ರ ಆಘಾತ
ಕರ್ನಾಟಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಉತ್ಸಾಹದಲ್ಲಿದೆ. ಈಗಾಗಲೇ ಬಿ. ನಾಗೇಂದ್ರ, ಬಿ.ಎಸ್. ಆನಂದಸಿಂಗ್ ಅವರನ್ನು ಬಿ. ಶ್ರೀರಾಮುಲು - ಜಿ. ಜನಾರ್ದನರೆಡ್ಡಿ ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು, ಕಾಂಗ್ರೆಸ್ಸಿಗೆ ಸೇರಿಸಿಕೊಂಡಿರುವ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸೆಳೆದುಕೊಂಡಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ತೀವ್ರ ಆಘಾತ ನೀಡಲಿದೆ ಎಂದೇ ವಿಶ್ಲೇಷಿಸಲಾಗಿದೆ.
ಬಳ್ಳಾರಿ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟ
ಸಂತೋಷ್ ಲಾಡ್ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಯಾರನ್ನೂ ಸಂಪರ್ಕ ಮಾಡದೇ ಕೇವಲ ಹೈಕಮಾಂಡ್ ಹಂತದಲ್ಲಿ ಮಾತುಕತೆ ನಡೆಯಿಸಿ, ಆನಂದಸಿಂಗ್, ನಾಗೇಂದ್ರ ಅವರನ್ನು ಈಗ ಸುರೇಶ್ ಬಾಬು ಅವರನ್ನು ಸೆಳೆಯಲು ಯತ್ನಿಸಿರುವುದು ಸ್ಥಳೀಯ ಕಾಂಗ್ರೆಸ್ಸಿಗರಿಗೆ ಇರುಸು ಮುರುಸು ಉಂಟು ಮಾಡಿದೆ. ಯುವ ಮುಖಂಡ ದೀಪಕ್ ಸಿಂಗ್ ಅವರು ಬಹಿರಂಗವಾಗಿ ಬಂಡಾಯ ಘೋಷಿಸಿದ್ದಾರೆ.