ವಿಕಾಸಪರ್ವ ಯಶಸ್ಸಿನ ನಂತರ ಜೆಡಿಎಸ್ ಮುಂದಿದೆ ಸವಾಲುಗಳು!
Recommended Video
ಮೈಸೂರು, ಫೆಬ್ರವರಿ 19: ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ನಡೆದ ಜೆಡಿಎಸ್ ವಿಕಾಸಪರ್ವ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು ಜೆಡಿಎಸ್ ನಾಯಕರಲ್ಲಿ ಹುಮ್ಮಸ್ಸು ಮೂಡಿಸಿದೆ.
ಆದರೆ, ಅಷ್ಟು ಮಾತ್ರಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದೇ ಬಿಡುತ್ತಾರೆ ಎನ್ನುವಂತಿಲ್ಲ.
ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ ವೇಳೆ ಕೆಲವೊಂದು ಸಮುದಾಯ ಜೆಡಿಎಸ್ನಿಂದ ಸ್ವಲ್ಪ ಮಟ್ಟಿಗೆ ದೂರವಾಗಿದ್ದು ಸುಳ್ಳಲ್ಲ. ಆದರೆ, ಮತ್ತೆ ಸರ್ವ ಸಮುದಾಯವನ್ನು ತಮ್ಮೊಂದಿಗೆ ಕರೆದೊಯ್ಯುವ ಪ್ರಯತ್ನವನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಮಾಡಿದ್ದಾರೆ. ಬಿಎಸ್ಪಿ ನಾಯಕಿ ಮಾಯಾವತಿಯನ್ನು ಕರೆತರುವ ಮೂಲಕ ದಲಿತ ಸಮುದಾಯದ ಮನವೊಲಿಸುವ ಯತ್ನ ಮಾಡಿದ್ದಾರೆ.
ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ವಿಧಾನಸಭಾ ಚುನಾವಣೆಗೆ ದಿನಗಳು ಬಾಕಿ ಇರುವುದರಿಂದ ಒಂದೊಂದು ದಿನವೂ ಸಂಘಟನೆಯ ದೃಷ್ಠಿಯಿಂದ ಅಮೂಲ್ಯವಾಗಿದೆ. ಈಗಾಗಲೇ ವಿಕಾಸಪರ್ವ ಯಾತ್ರೆ ಯಶಸ್ವಿಯಾಗಿದ್ದು, ಇದುವರೆಗೆ ಯಾತ್ರೆ ನಡೆಸಿದ ಸ್ಥಳಗಳಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
ಹಳೇ ಮೈಸೂರು ವ್ಯಾಪ್ತಿಯಲ್ಲಿ ಜೆಡಿಎಸ್ಗೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇನ್ನಷ್ಟು ಸಂಘಟನೆಗೊಳ್ಳಬೇಕಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಖಾತೆ ತೆರೆಯಬೇಕಿದೆ.
ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್
ಈ ಬಾರಿ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಕಾರಣ ಒಂದಷ್ಟು ಉಪಯೋಗವಾಗಬಹುದಾದರೂ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಮತ್ತೊಂದೆಡೆ ಪಕ್ಷದ ಘಟಾನುಘಟಿ ನಾಯಕರು ಬಂಡಾಯ ಎದ್ದು ಹೊರಗೆ ಹೋಗಿದ್ದಾರೆ. ಅವರಿಗೆ ಪರ್ಯಾಯ ನಾಯಕರನ್ನು ತಮ್ಮ ಪಕ್ಷದಲ್ಲೇ ರೂಪಿಸಬೇಕಾಗಿದೆ.
ಪ್ರಮುಖ ನಾಯಕರ ಕೊರತೆ ಎದ್ದು ಕಾಣುತ್ತಿದೆ
ಸದ್ಯದ ಮಟ್ಟಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಮಾತ್ರ ಪಕ್ಷದಲ್ಲಿ ಪ್ರಮುಖವಾಗಿ ಕಾಣಿಸುತ್ತಿದ್ದಾರೆ. ಇನ್ನಿತರ ನಾಯಕರು ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅದ್ಯಾಕೋ ಅವರು ಫೋಕಸ್ ಆಗುತ್ತಿಲ್ಲ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಪಕ್ಷವನ್ನು ಕೊಂಡೊಯ್ದು ಚುನಾವಣೆ ಎದುರಿಸುವುದು ಸುಲಭದ ಕೆಲಸವಾಗಿ ಉಳಿದಿಲ್ಲ. ಅದೊಂದು ಸವಾಲ್ ಆಗಿಯೂ ಪರಿಣಮಿಸಿದೆ.
ಜೆಡಿಎಸ್ಗೆ ಕಿಂಗ್ಮೇಕರ್ ಎಂಬ ಹಣೆಪಟ್ಟಿ
ಕರ್ನಾಟಕದಲ್ಲಿ ಜೆಡಿಎಸ್ಗೆ ಕಿಂಗ್ಮೇಕರ್ ಎಂಬ ಹಣೆಪಟ್ಟಿಯೂ ಇದೆ. ಮುಂದೆ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಆಡಳಿತ ನಡೆಸುತ್ತಾರೆ ಎಂಬ ಕುಹಕದ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಈ ಅಪವಾದವನ್ನು ಹೋಗಲಾಡಿಸಲು ನಮ್ಮನ್ನು ಬಹುಮತದಿಂದ ಗೆಲ್ಲಿಸಿ ಎಂಬುದು ಕುಮಾರಸ್ವಾಮಿಯ ಮನವಿಯಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಗೆಲುವು ಸಾಧಿಸಬೇಕಾದರೆ ಪ್ರಾಬಲ್ಯ ಹೊಂದಿರುವ ತಮ್ಮ ಕ್ಷೇತ್ರವನ್ನು ಮತ್ತೆ ಉಳಿಸಿಕೊಂಡು ಎಲ್ಲಿ ಇದುವರೆಗೆ ಜೆಡಿಎಸ್ ಗೆಲುವೇ ಸಾಧಿಸಿಲ್ಲವೋ ಅಲ್ಲಿ ಹೊಸದಾಗಿ ಖಾತೆ ತೆರೆಯಲೇ ಬೇಕಾಗಿದೆ.
ಹಾಸನದ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದಾರೆ
ಅದೆಲ್ಲವೂ ಇನ್ನೆರಡೋ, ಮೂರೋ ತಿಂಗಳಲ್ಲಿ ಆಗಬೇಕಾಗಿದೆ. ಈಗಾಗಲೇ ರಾತ್ರಿ ಹಗಲೆನ್ನದೆ ಪಕ್ಷಕ್ಕಾಗಿ ದುಡಿಯುತ್ತಿರುವ ಕುಮಾರಸ್ವಾಮಿ ಅವರು ಇಡೀ ಪಕ್ಷದ ಜವಬ್ದಾರಿಗಳನ್ನು ಹೆಗಲಿಗೇರಿಸಿಲೊಂಡು ಓಡಾಡುತ್ತಿರುವುದರಿಂದ ಬಳಲಿದಂತೆ ಕಂಡು ಬರುತ್ತಿದ್ದಾರೆ. ಅವರಿಗೆ ಹೆಗಲು ಕೊಟ್ಟು ದುಡಿಯುವ ನಾಯಕರ ಅಗತ್ಯವಿದೆ.
ಇನ್ನು ಭದ್ರಕೋಟೆಯಾಗಿದ್ದ ಹಾಸನದ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದಾರೆ. ಅಲ್ಲಿ ತಮ್ಮ ತಂತ್ರವನ್ನು ಪ್ರಯೋಗಿಸಿ ಕಾಂಗ್ರೆಸನ್ನು ಸಂಘಟಿಸುತ್ತಿದ್ದಾರೆ. ಅದರ ಪರಿಣಾಮ ಜೆಡಿಎಸ್ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆ ಮಾಡಿಕೊಂಡಿದೆ
ಈಗಾಗಲೇ ಜೆಡಿಎಸ್ ನ 128 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿ ಮೇರಿಯಂಡ ಸಂಕೇತ್ ಪೂವಯ್ಯ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆ ಮಾಡಿಕೊಂಡಿದೆ.
ಈ ಕೋಟೆಯನ್ನು ಛಿದ್ರಮಾಡಿ ಜೆಡಿಎಸ್ ನ ಅಭ್ಯರ್ಥಿಗಳು ಜಯಗಳಿಸುತ್ತಾರಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಜಿಲ್ಲೆಯಲ್ಲಿ ಜೆಡಿಎಸ್ ನಲ್ಲಿ ಬಂಡಾಯ ಹೆಚ್ಚಾಗಿದೆ. ಇರುವ ನಾಯಕರು ಹಂಚಿ ಹೋಗಿದ್ದಾರೆ. ಎಲ್ಲವರನ್ನು ಒಟ್ಟುಮಾಡಿಕೊಂಡು ಹೋಗುವುದು ಇಲ್ಲಿ ಅಷ್ಟು ಸುಲಭವಾಗಿ ಉಳಿದಿಲ್ಲ.