ಕಾಂಗ್ರೆಸ್ಸಿನ ಮಾಜಿ ಶಾಸಕ ಗವಿಯಪ್ಪ ಶೀಘ್ರವೇ ಬಿಜೆಪಿಗೆ?
ಬಳ್ಳಾರಿ, ಫೆಬ್ರವರಿ 05: ಬಳ್ಳಾರಿ ಜಿಲ್ಲೆಯ ಜನಪ್ರಿಯ ನಾಯಕರು, ಶಾಸಕರು, ಕಾರ್ಯಕರ್ತರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿರುವುದಿಂದ ದಿನೇ ದಿನೇ ಬಿಜೆಪಿ ಸೊರಗುತ್ತಿದೆ. ಇತ್ತೀಚಿನ ಬೆಳವಣಿಗೆಯಂತೆ ಹೊಸಪೇಟೆಯ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು, ರೆಡ್ಕಾರ್ಪೆಟ್ ಸ್ವಾಗತ ನೀಡಲು ಮುಂದಾಗಿದೆ.
ಬಿ.ಎಸ್. ಆನಂದಸಿಂಗ್ ಅವರು ಬಿಜೆಪಿಗೆ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರುವ ಎಲ್ಲಾ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದ್ದಾಗ, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿಯ ರಾಜಕೀಯ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿತ್ತು.
ಸಿದ್ದರಾಮಯ್ಯ ವಿರುದ್ಧ ತೋಳೇರಿಸಿದ್ದ ಸುರೇಶ್ ಬಾಬು ಕೈ ಪಾಲು?
ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ಬಳ್ಳಾರಿಗೆ ಕಳುಹಿಸಿ, ಆನಂದ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿ ಎಚ್.ಆರ್. ಗವಿಯಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಿ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಬಿ ಫಾರಂ ನೀಡುವ ಕುರಿತು ಮಾತುಕತೆ ನಡೆಸಲು ನಿಯೋಜಿಸಿತ್ತು.
ಸಂತೋಷ್ ಜೀ ಅವರಿಗೆ ಭರವಸೆ ನೀಡಿದ್ದರು
ಈ ಹಿನ್ನಲೆಯಲ್ಲಿ ನಡೆದ ಮಾತುಕತೆಯಲ್ಲಿ ಎಚ್.ಆರ್. ಗವಿಯಪ್ಪ ಅವರು ಬಿಜೆಪಿ ಸೇರುವ ಕುರಿತು ತಮ್ಮ ಆಪ್ತರು, ಬೆಂಬಲಿಗರು ಮತ್ತು ಕುಟುಂಬದ ಸದಸ್ಯರ ಅಭಿಪ್ರಾಯ ಕೇಳಿ, ತಿಳಿಸುವುದಾಗಿ ಬಿಜೆಪಿ ಮುಖಂಡರಿಗೆ, ಸಂತೋಷ್ ಜೀ ಅವರಿಗೆ ಭರವಸೆ ನೀಡಿದ್ದರು.
ಬಿ ಶ್ರೀರಾಮುಲು ಪ್ರತಿಕ್ರಿಯೆ
ಹೊಸಪೇಟೆಯಲ್ಲಿ ಪಕ್ಷದ ಮುಖಂಡರ ಜೊತೆ ಮಾತನಾಡಿರುವ ಸಂಸದ ಬಿ. ಶ್ರೀರಾಮುಲು, ನಾನು ಎಚ್.ಆರ್. ಗವಿಯಪ್ಪ ಅವರ ಜೊತೆ ನಿರಂತರ ಸಂಪರ್ಕ ಹೊಂದಿದ್ದೇನೆ. ಅವರು ತಂದೆಯ ಆಶೀರ್ವಾದಕ್ಕಾಗಿ ಕಾಯುತ್ತಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆ ಆದಲ್ಲಿ, ಪಕ್ಷ ಅವರನ್ನು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಉತ್ಸುಕವಾಗಿದೆ. ಅವರು ಪಕ್ಷಕ್ಕೆ ಸೇರಿದಲ್ಲಿ ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ' ಎಂದು ತಿಳಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು
ಎಚ್.ಆರ್. ಗವಿಯಪ್ಪ ಅವರು ಕಾಂಗ್ರೆಸ್ ಟಿಕೇಟ್ನಿಂದ ಒಮ್ಮೆ ವಂಚಿತರಾಗಿ, ಗಾಯಯೋಗಿ ಪುಟ್ಟರಾಜ ಗವಾಯಿಗಳ ಆಶೀರ್ವಾದ ಪಡೆದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾರ್ ಚಿಹ್ನೆಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ಸಹ ಸದಸ್ಯರಾಗಿದ್ದರು.
ಸುರೇಶ್ ಸೆಳೆಯುತ್ತಿರುವ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಉತ್ಸಾಹದಲ್ಲಿದೆ. ಈಗಾಗಲೇ ಬಿ. ನಾಗೇಂದ್ರ, ಬಿ.ಎಸ್. ಆನಂದಸಿಂಗ್ ಅವರನ್ನು ಬಿ. ಶ್ರೀರಾಮುಲು - ಜಿ. ಜನಾರ್ದನರೆಡ್ಡಿ ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು, ಕಾಂಗ್ರೆಸ್ಸಿಗೆ ಸೇರಿಸಿಕೊಂಡಿರುವ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸೆಳೆದುಕೊಂಡಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ತೀವ್ರ ಆಘಾತ ನೀಡಲಿದೆ ಎಂದೇ ವಿಶ್ಲೇಷಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಗವಿಯಪ್ಪ ಅವರನ್ನು ಬಿಜೆಪಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.