ಅಸೆಂಬ್ಲಿ ಚುನಾವಣೆ: 'ಅಲ್ಲಾ ಹಾಗೂ ರಾಮನ ವಿರುದ್ಧದ ಸೆಣಸು'
Recommended Video
ಬಂಟ್ವಾಳ, ಜನವರಿ 23: ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಬಂಟ್ವಾಳ ಕ್ಷೇತ್ರದ ಕಲ್ಲಡ್ಕದಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಮಾತನಾಡುತ್ತಾ, ಮುಂಬರುವ ವಿಧಾನಸಭೆ ಚುನಾವಣೆಯು ಅಲ್ಲಾ ಹಾಗೂ ರಾಮನ ನಡುವಿನ ಯುದ್ಧ ಎಂದು ಘೋಷಿಸಿದ್ದಾರೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಮೂಲಕ ಬಿಜೆಪಿಯ ಮುಖ್ಯ ಅಜೆಂಡಾ ಎನಿಸಿಕೊಂಡಿರುವ ಹಿಂದೂತ್ವ ಪ್ರತಿಪ್ರಾದನೆಯನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆ ರಮಾನಾಥ್ ರೈ ಮತ್ತು ರಾಜೇಶ್ ನಾಯಕ್ ಅವರ ನಡುವಿನ ಸ್ಪರ್ಧೆಯಲ್ಲ, ಅಲ್ಲಾ ಮತ್ತು ರಾಮನ ನಡುವಿನ ಸ್ಪರ್ಧೆಯಾಗಿದೆ, ಬಂಟ್ವಾಳ ಯಾರನ್ನು ಆಯ್ಕೆಮಾಡಲಿದೆ? ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಅಲ್ಲಾನನ್ನು ಮತ್ತೊಮ್ಮೆ ಆಯ್ಕೆ ಮಾಡುವಿರಾ? ಅಥವಾ ರಾಮನನ್ನು ನಂಬಿದವರನ್ನು ಆಯ್ಕೆ ಮಾಡುತ್ತೀರಾ?ಬಂಟ್ವಾಳಕ್ಕೆ ಯಾರು ಬೇಕೆನ್ನುವುದನ್ನು ಜನ ತೀರ್ಮಾನಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಮೂಲಕ 'ಬಂಟ್ವಾಳದಲ್ಲಿ ಮುಸ್ಲಿಮರ ಮತಗಳಿಂದ 6 ಸಲ ಆಯ್ಕೆಯಾಗಿದ್ದೇನೆ' ಎಂದು ಸಚಿವ ರಮಾನಾಥ ರೈ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಹಿಂದೂಗಳ ಮತಗಳು ಬೇಡವೆನ್ನುವವರಿಗೆ ನಾವು ಬೆಂಬಲಿಸಬೇಕಾ? ನೀವೇ ತೀರ್ಮಾನಿಸಿ ಎಂದಿದ್ದಾರೆ.
ಬಿಜೆಪಿ ಹಾಗೂ ಕಾಂರ್ಗೆಸ್ ನಡುವಿನ ಹೋರಾಟವಲ್ಲ, 6 ಸಲ ಶಾಸಕನಾಗಿ ಆಯ್ಕೆಯಾಗಿರುವ ವ್ಯಕ್ತಿಗೆ ಹಿಂದೂಗಳ ವೋಟು ಬೇಡವಾಗಿದೆ. ಇದು ಬಂಟ್ವಾಳದ ವಿಷ್ಯ ಮಾತ್ರವಲ್ಲ, ಇಡೀ ಜಿಲ್ಲೆಯ ಘನತೆಯ ಪ್ರಶ್ನೆಯಾಗಿದೆ ಎಂದು ಸುನೀಲ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.