ಬೀದರ್ ದಕ್ಷಿಣ : ಬಂಡಾಯ ಅಭ್ಯರ್ಥಿಯಾಗಿ ಧರ್ಮಸಿಂಗ್ ಅಳಿಯ
ಬೆಂಗಳೂರು, ಏಪ್ರಿಲ್ 17: ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರು ಕಾಂಗ್ರೆಸ್ ಸೇರಿ, ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈ ಕ್ಷೇತ್ರದ ಪ್ರಬಲ ಟಿಕೆಟ್ ಅಕಾಂಕ್ಷಿಯಾಗಿದ್ದ ಚಂದ್ರಾಸಿಂಗ್ ಅವರಿಗೆ ಭಾರಿ ನಿರಾಶೆಯಾಗಿದೆ.
ದಿವಂಗತ ಧರ್ಮಸಿಂಗ್ ಅವರ ಅಳಿಯ ಚಂದ್ರಾಸಿಂಗ್ ಮತ್ತು ಅಶೋಕ್ ಖೇಣಿ ನಡುವೆ ಯಾರಿಗೆ ಟಿಕೆಟ್ ಸಿಗಲಿದೆ? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಸಹಜವಾಗಿ ಚಂದ್ರಾಸಿಂಗ್ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್: ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ?
ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಗಾಗಿ ಅಶೋಕ್ ಖೇಣಿ ಹಾಗೂ ಚಂದ್ರಾಸಿಂಗ್ ಅಲ್ಲದೆ, ಪ್ರದೀಪ್ ಕೂಶನುರು, ಮೀನಾಕ್ಷಿ ಸಂಗ್ರಾಮ್, ಅಶೋಕ್ ಕಂದಗೋಳ ಅವರು ಆಕಾಂಕ್ಷಿಗಳಾಗಿದ್ದರು. ಚುನಾವಣೆ ಸಮಯದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ.
ಚಂದ್ರಾಸಿಂಗ್ ಅವರು, ದಕ್ಷಿಣ ಕ್ಷೇತ್ರದಲ್ಲಿ ಕಳೆದ 9ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಸಹಜವಾಗಿ ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಟಿಕೆಟ್ ಸಿಗದ ಕಾರಣ, ಬಂಡಾಯ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಗಾಗಿ ಅಶೋಕ್ ಖೇಣಿ ಹಾಗೂ ಚಂದ್ರಾಸಿಂಗ್ ಅಲ್ಲದೆ, ಪ್ರದೀಪ್ ಕೂಶನುರು, ಮೀನಾಕ್ಷಿ ಸಂಗ್ರಾಮ್, ಅಶೋಕ್ ಕಂದಗೋಳ ಅವರು ಆಕಾಂಕ್ಷಿಗಳಾಗಿದ್ದರು. ಚುನಾವಣೆ ಸಮಯದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇತ್ತು. ಸಿಎಂ ಸಿದ್ದರಾಮಯ್ಯ ಅವರ ಕೃಪೆಯಿಂದ ನಿರೀಕ್ಷೆಯಂತೆ ಅಶೋಕ್ ಖೇಣಿ ಅವರಿಗೆ ಟಿಕೆಟ್ ಸಿಕ್ಕಿದೆ.
ಮಲ್ಲಿಕಾರ್ಜುನ ಖರ್ಗೆಗೆ ಸೋಲು
ಆಪ್ತ ಸ್ನೇಹಿತ ಧರ್ಮಸಿಂಗ್ ಅವರ ಅಳಿಯ ಚಂದ್ರಾಸಿಂಗ್ ಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸೋತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ವಲಸಿಗರಿಗೆ ಮಣೆ ಹಾಕಿದ್ದು, ವಲಸಿಗರಿಗೆ ಟಿಕೆಟ್ ಖಚಿತ ಎಂಬ ಆಶ್ವಾಸನೆಯನ್ನು ಉಳಿಸಿಕೊಳ್ಳಲು ಖೇಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಕನ್ನಡ ಮಕ್ಕಳ ಪಕ್ಷದ ಮೂಲಕ ಖೇಣಿ ಅವರು 2013ರಲ್ಲಿ ಜಯಿಸಿದ್ದರು
ಮೌನಕ್ಕೆ ಶರಣಾದ ಈಶ್ವರ ಖಂಡ್ರೆ
ಮಾಜಿ ಮುಖ್ಯಮಂತ್ರಿ, ದಿವಂಗತ ಧರಂಸಿಂಗ್ ನಿಧನದ ಬಳಿಕ ಬೀದರ್ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ. ಅಶೋಕ್ ಖೇಣಿ ಅವರ ಪಕ್ಷ ಸೇರ್ಪಡೆ ಸಮಯದಲ್ಲಿ ಜಿಲ್ಲಾ ನಾಯಕರ ಅಭಿಪ್ರಾಯಕ್ಕೆ ಬೆಲೆ ನೀಡಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಅಶೋಕ್ ಖೇಣಿ ಪಕ್ಷ ಸೇರ್ಪಡೆ ವಿಚಾರದಲ್ಲಿ ಮೌನವಾಗಿದ್ದರು. ಧರಂಸಿಂಗ್ ಅವರ ಕುಟುಂಬದವರ ಬೆಂಬಲಕ್ಕೆ ಸಚಿವರು ನಿಲ್ಲಲಿಲ್ಲ ಎಂಬ ಅಸಮಾಧಾನವೂ ಕೆಲವು ನಾಯಕರಲ್ಲಿದೆ.
2013ರ ಬೀದರ್ ದಕ್ಷಿಣ ಕ್ಷೇತ್ರದ ಫಲಿತಾಂಶ
2013ರ ಬೀದರ್ ದಕ್ಷಿಣ ಕ್ಷೇತ್ರದ ಫಲಿತಾಂಶ: ಒಟ್ಟು 28 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 8 ಮಂದಿ ನಾಮಪತ್ರ ಹಿಂಪಡೆದಿದ್ದರು. 20 ಮಂದಿ ಸ್ಪರ್ಧಿಸಿದ್ದರು. 18 ಮಂದಿ ಠೇವಣಿ ಕಳೆದುಕೊಂಡಿದ್ದರು. 124857 ಮತಗಳ ಪೈಕಿ ಆಶೋಕ್ ಖೇಣಿ ಅವರು 47763 ಮತಗಳನ್ನು ಗಳಿಸಿ ಜಯ ದಾಖಲಿಸಿಕೊಂಡರೆ, 31975ಮತಗಳನ್ನು ಗಳಿಸಿ ಜೆಡಿಎಸ್ ನ ಬಂಡೆಪ್ಪ ಕಾಶೆಂಪೂರ್ ಅವರು ಸೋಲು ಕಂಡಿದ್ದರು. ಈ ಬಾರಿ ಕೂಡಾ ಇವರಿಬ್ಬರ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.