ಯಾರು ಬೇಕಾದರೂ ಸಿಎಂ ಆಗಬಹುದು : ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 04: ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಕಾಣುವ ಆಸೆಯಿದೆ ಎಂದು ಹೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಯಾರು ಬೇಕಾದರೂ ಸಿಎಂ ಆಗುವ ಕನಸು ಕಾಣಬಹುದು ಎಂದಿದ್ದಾರೆ. ಯಾರಾದರೂ ಕನಸು ಕಾಣುವುದನ್ನು ನಾವು ತಡೆಯಲು ಸಾಧ್ಯವೇ, ನನ್ನ ಮಗ ಕೂಡಾ ನಾನು ಮತ್ತೊಮ್ಮೆ ಸಿಎಂ ಆಗಬೇಕು ಎಂದು ಕನಸು ಕಾಣಬಹುದು ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯರೇ ಅಥವಾ ಖರ್ಗೆಯವರೇ?
ಕಾಂಗ್ರೆಸ್ಸಿನಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ, ಸಿದ್ದರಾಮಯ್ಯ ಅವರು ಒಂದು ವೇಳೆ ಮತ್ತೊಮ್ಮೆ ಸಿಎಂ ಸ್ಥಾನ ಬಯಸಿದರೆ, ತಪ್ಪಿಸಲು ಯಾವ ಅಡೆ ತಡೆಗಳು ಇರುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಅಗುವ ಯೋಗ ಲಭಿಸಲಿದೆ.
ದಲಿತ ಸಿಎಂ ಎಂಬ ಕೂಗು: 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲೂ ದಲಿತ ಸಿಎಂ ಬೇಕು ಎಂಬ ಕೂಗೆದ್ದಿತ್ತು. ಆದರೆ, ಚುನಾವಣೆ ಸೋತ ಪರಮೇಶ್ವರ್ ಅವರಿಗೆ ಹುದ್ದೆ ಕೈ ತಪ್ಪಿತ್ತು. ನಂತರ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿತು. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ನಾಯಕರಾಗಿ ಬೆಳೆದರು.
ರಾಜ್ಯದಲ್ಲಿ ಶೇಕಡಾವಾರು ಮತಗಳ ಗಣನೆಯಲ್ಲಿ ದಲಿತರ ಮತಗಳು ನಿರ್ಣಾಯಕವಾಗಲಿದೆ. ಸಿದ್ದರಾಮಯ್ಯ ಅವರು ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನಗಳು ನಡೆದಿದ್ದು ಸುಳ್ಳಲ್ಲ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಆದರೆ, ಈಗ ಸಿದ್ದರಾಮಯ್ಯ ಅವರ ವರ್ಚಸ್ಸು ಕೂಡಾ ರಾಷ್ಟ್ರಮಟ್ಟಕ್ಕೆ ಬೆಳೆದಿದ್ದು, ಅವರು ಬಯಸುವ ಹುದ್ದೆ ಕೈಗೆಟುವ ಅಂತರದಲ್ಲಿದೆ. ಇದೇ ನನ್ನ ಕೊನೆ ಚುನಾವಣೆ ಎನ್ನುತ್ತಾ ಪ್ರಚಾರ ಕಾರ್ಯ ಕೈಗೊಂಡಿರುವ ಸಿದ್ದರಾಮಯ್ಯ ಅವರು ಸಿಎಂ ಆಗುವ ಅವಕಾಶ ಮತ್ತೆ ಸಿಕ್ಕರೆ ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂಬುದಂತೂ ಸತ್ಯ.